ಇಸ್ಲಾಮಾಬಾದ್, ಲಾಹೋರ್: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಕೇಂದ್ರ ಕಚೇರಿಗೆ ಮಂಗಳವಾರ ಭೇಟಿ ನೀಡಿದ್ದ ಪ್ರಧಾನಿ ಶೆಹಬಾಜ್ ಶರೀಫ್ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಬೆಳವಣಿಗೆಗಳ ಮಾಹಿತಿಯನ್ನು ಪಡೆದರು.
ಅನುಕೂಲಕರವಾದ ಸೇನಾ ಕಾರ್ಯಾಚರಣೆ, ಹೈಬ್ರಿಡ್ ಯುದ್ಧದ ಕಾರ್ಯತಂತ್ರ ಕುರಿತು ಅವರು ಮಾಹಿತಿ ಪಡೆದರು. ಉಪ ಪ್ರಧಾನಿ, ವಿದೇಶಾಂಗ ಸಚಿವ ಇಶಾಕ್ ದರ್, ರಕ್ಷಣಾ ಸಚಿವ ಖ್ವಾಜಾ ಅಸೀಫ್, ಸೇನಾ ಪಡೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಭದ್ರತೆ ಸಂಬಂಧಿಸಿದ ಬೆಳವಣಿಗೆ, ಪರಿಸ್ಥಿತಿ ಎದುರಿಸಲು ಆಗಿರುವ ಸಿದ್ಧತೆ ಕುರಿತು ನಾಯಕರಿಗೆ ವಿವರಣೆ ನೀಡಲಾಯಿತು ಎಂದು ಪಾಕಿಸ್ತಾನ್ ರೇಡಿಯೊ ವರದಿ ಮಾಡಿದೆ.
ನದಿ ನೀರಿನಲ್ಲಿ ಏರಿಳಿತ –ಪಾಕ್ ಆಕ್ಷೇಪ:
ಚಿನಾಬ್ ನದಿಯಲ್ಲಿ ನೀರಿನ ಹರಿವಿನಲ್ಲಿ ಭಾರತ ಏರಿಳಿತ ಉಂಟು ಮಾಡುತ್ತಿದೆ ಎಂದು ಪಾಕಿಸ್ತಾನ ಆಕ್ಷೇಪಿಸಿದೆ. ಸಿಂಧೂ ಜಲ ಒಪ್ಪಂದದ ಅನುಸಾರ ಪಾಕಿಸ್ತಾನದ ನಿಯಂತ್ರಣ ವ್ಯಾಪ್ತಿಗೆ ಚಿನಾಬ್ ಸೇರಿ ಮೂರು ನದಿಗಳು ಬರಲಿವೆ.
‘ನದಿ ನೀರಿನ ಹರಿವಿನಲ್ಲಿ ಏರಳಿತ ಆಗುತ್ತಿರುವುದನ್ನು ನಾವು ಗಮನಿಸಿದ್ದೇವೆ. ಆದರೆ, ಇದು ಪ್ರಕೃತಿ ಸಹಜವಾಗಿ ಆಗುತ್ತಿರುವುದಲ್ಲ. ಪಾಕಿಸ್ತಾನದ ತನ್ನ ಪಾಲಿನ ನೀರನ್ನು ಬಳಸಿಕೊಳ್ಳಬಾರದು ಎಂದೇ ಹೀಗೆ ಮಾಡಲಾಗುತ್ತಿದೆ’ ಎಂದು ಪಂಜಾಬ್ ಪ್ರಾಂತ್ಯದ ನೀರಾವರಿ ಸಚಿವ ಕಾಜೀಮ ಪಿರ್ಜಾದಾ ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.