ADVERTISEMENT

ಪತ್ರಕರ್ತ ಖಶೋಗ್ಗಿ ಹತ್ಯೆ ಪ್ರಕರಣದಲ್ಲಿ ನ್ಯಾಯ ದೊರಕಲಿದೆ: ಸೌದಿ ರಾಜ ಹೇಳಿಕೆ

ಹತ್ಯೆ ಪೂರ್ವನಿಯೋಜಿತ: ಸೌದಿ ಅರೇಬಿಯಾದ ಅಭಿಯೋಜಕರ ಹೇಳಿಕೆ

ಏಜೆನ್ಸೀಸ್
Published 25 ಅಕ್ಟೋಬರ್ 2018, 17:39 IST
Last Updated 25 ಅಕ್ಟೋಬರ್ 2018, 17:39 IST
ಖಶೋಗ್ಗಿ
ಖಶೋಗ್ಗಿ   

ರಿಯಾದ್‌: ಪತ್ರಕರ್ತ ಜಮಲ್‌ ಖಶೋಗ್ಗಿ ಹತ್ಯೆಯಲ್ಲಿ ಸೂಕ್ತ ನ್ಯಾಯ ದೊರಕಲಿದೆ ಎಂದು ಸೌದಿಯ ರಾಜಕುಮಾರ ತಿಳಿಸಿದ್ದಾರೆ. ಈ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೇ ಮೊದಲ ಬಾರಿಗೆ ಅವರು ಸಾರ್ವಜನಿಕವಾಗಿ ಹೇಳಿಕೆ ನೀಡಿದ್ದಾರೆ.

ಇಲ್ಲಿ ನಡೆದ ಹೂಡಿಕೆದಾರರ ಸಮಾವೇಶ ಸಮಾರೋಪದಲ್ಲಿ ಮಾತನಾಡಿದ ರಾಜಕುಮಾರ ಮೊಹಮ್ಮದ್‌ ಬಿನ್‌ ಸಲ್ಮಾನ್‌, ‘ಈ ಘಟನೆಯು ಸೌದಿಯ ಎಲ್ಲರಿಗೂ ನೋವು ನೀಡುವ ವಿಚಾರ. ಯಾರೂ ಕೂಡ ಇದನ್ನು ಒಪ್ಪಲು ಸಾಧ್ಯವಿಲ್ಲ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು, ಅಂತಿಮವಾಗಿ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಲಾಗುವುದು’ ಎಂದು ತಿಳಿಸಿದರು.

ಟರ್ಕಿ ಜೊತೆ ವೈಮನಸ್ಸಿಲ್ಲ: ಖಶೋಗ್ಗಿ ಹತ್ಯೆ ವಿಚಾರದಲ್ಲಿ ಸೌದಿ ವಿರುದ್ಧ ಟರ್ಕಿ ತಿರುಗಿಬಿದ್ದಿದೆ. ಆದರೂ ಆ ದೇಶದ ಜೊತೆ ಯಾವುದೇ ವೈಮನಸ್ಸಿಲ್ಲ ಎಂದು ಸಲ್ಮಾನ್‌ ಸ್ಪಷ್ಟಪಡಿಸಿದರು.

ADVERTISEMENT

ಪೂರ್ವನಿಯೋಜಿತ ಕೃತ್ಯ–ಸೌದಿ:ಪತ್ರಕರ್ತ ಜಮಲ್‌ ಖಶೋಗ್ಗಿ ಹತ್ಯೆಯು ಪೂರ್ವ ನಿಯೋಜಿತ ಕೃತ್ಯ ಎಂದು ಸೌದಿ ಅರೇಬಿಯಾ ಕೂಡ ಒಪ್ಪಿಕೊಂಡಿದೆ.

ಟರ್ಕಿಯ ಅಧಿಕಾರಿಗಳ ಪ್ರಕಾರ,ಖಶೋಗ್ಗಿ ಹತ್ಯೆ ಪೂರ್ವಾಲೋಚಿತ ಎಂದು ಮಾಹಿತಿ ನೀಡಿದ್ದಾರೆ ಎಂದು ಸೌದಿ ಸರ್ಕಾರದ ಅಭಿಯೋಜಕರ ಹೇಳಿಕೆಯನ್ನು ಉಲ್ಲೇಖಿಸಿ ಸೌದಿಯ ಸುದ್ದಿಸಂಸ್ಥೆ ವರದಿ ಮಾಡಿದೆ.

ವಾಷಿಂಗ್ಟನ್‌ ಪೋಸ್ಟ್‌ ಪತ್ರಿಕೆಯ ಅಂಕಣಕಾರರಾಗಿದ್ದ ಖಶೋಗ್ಗಿ ಅವರು ಅಕ್ಟೋಬರ್‌ 2ರಂದು ಟರ್ಕಿಯಲ್ಲಿರುವ ಸೌದಿ ಅರೇಬಿಯಾದ ಕಾನ್ಸುಲೇಟ್‌ ಕಚೇರಿಗೆ ತೆರಳಿದ ಬಳಿಕ ನಾಪತ್ತೆಯಾಗಿದ್ದರು. ಖಶೋಗ್ಗಿ ಅವರು ಕಾನ್ಸುಲೇಟ್‌ ಕಚೇರಿಯ ಹಿಂಬಾಗಿಲಿನ ಮೂಲಕ ಮರಳಿದ್ದರು ಎಂದು ಸೌದಿ ಅರೇಬಿಯಾ ಸರ್ಕಾರ ಮೊದಲಿಗೆ ಹೇಳಿತ್ತು. ಅಂತರರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೆಚ್ಚಿದಾಗ, ಕಾನ್ಸುಲೇಟ್‌ ಕಚೇರಿಯಲ್ಲಿ ಖಶೋಗ್ಗಿ ಹತ್ಯೆ ನಡೆದಿದೆ ಎಂದು ಸೌದಿ ಹೇಳಿಕೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.