ಕೊಲಂಬೊ: ಸಂಸತ್ ವಿಸರ್ಜಿಸಿದ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ವಿವಾದಾತ್ಮಕ ನಿರ್ಧಾರವನ್ನು ಸುಪ್ರೀಂಕೋರ್ಟ್ ಮಂಗಳವಾರ ತಳ್ಳಿ ಹಾಕಿದೆ. ಜನವರಿ 5ರಂದು ನಿಗದಿಯಾಗಿದ್ದ ಚುನಾವಣೆಗೂ ಅದು ತಡೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ನಳಿನ್ ಪೆರೀರಾ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠವು ಎರಡು ದಿನಗಳ ವಿಚಾರಣೆ ಬಳಿಕ ಈ ಆದೇಶ ನೀಡಿದೆ. ಸಿರಿಸೇನಾ ನಿರ್ಧಾರ ಪ್ರಶ್ನಿಸಿ 13 ಅರ್ಜಿ ಹಾಗೂ ಸಮರ್ಥಿಸಿ ಐದು ಅರ್ಜಿಗಳು ಸಲ್ಲಿಕೆಯಾಗಿದ್ದವು.ಸಿರಿಸೇನಾ ನಿರ್ಧಾರದ ವಿರುದ್ಧ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ಡಿಸೆಂಬರ್ 4, 5 ಮತ್ತು 6ರಂದು ಸುಪ್ರೀಂಕೋರ್ಟ್ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ಸಿರಿಸೇನಾ ನಿರ್ಧಾರದ ವಿರುದ್ಧ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ಡಿಸೆಂಬರ್ 4, 5 ಮತ್ತು 6ರಂದು ಸುಪ್ರೀಂಕೋರ್ಟ್ ಮತ್ತೆ ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.
ಸಮರ್ಥನೆ: ಸರ್ಕಾರದ ಪರ ವಾದಿಸಿದ ಅಟಾರ್ನಿ ಜನರಲ್ ಜಯಂತ ಜಯಸೂರ್ಯ ಅವರು ಸಂಸತ್ ವಿಸರ್ಜಿಸಿದ ಅಧ್ಯಕ್ಷರ ನಡೆಯನ್ನು ಸಮರ್ಥಿಸಿಕೊಂಡರು. ಸಂಸತ್ ವಿಸರ್ಜಿಸುವ ಎಲ್ಲ ಅಧಿಕಾರವನ್ನು ಅಧ್ಯಕ್ಷರ ಹೊಂದಿದ್ದು, ಸಿರಿಸೇನಾ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿರುವ ಎಲ್ಲ ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಏಟಿಗೆ ಎದಿರೇಟು:ಪ್ರತಿಪಕ್ಷಗಳು ಸಲ್ಲಿಸಿದ್ದ ಅರ್ಜಿಗಳಿಗೆ ತಿರುಗೇಟು ನೀಡುವ ಸಲುವಾಗಿ ಸಂಪುಟ ಸದಸ್ಯರೂ ಸೇರಿದಂತೆ ಸಿರಿಸೇನಾ ಬೆಂಬಲಿಗರು ಮಂಗಳವಾರ ರಿಟ್ ಸಲ್ಲಿಸಿದ್ದರು. ಸಿರಿಸೇನಾ ಬೆಂಬಲಿಗರಾದ ಪ್ರೊ. ಜಿ.ಎಲ್ ಪೇರಿಸ್, ಸಚಿವ ಉದಯ ಗಮ್ಮನ್ಪಿಲ, ಮುಖಂಡ ವಾಸುದೇವ ನಾನಾಯಕ್ಕರ ಅವರು ಕೋರ್ಟ್ ಮೆಟ್ಟಿಲೇರಿದ್ದರು.
ಅವಧಿ ಮುಗಿಯುವ 20 ತಿಂಗಳ ಮೊದಲೇ ಸಂಸತ್ ವಿಸರ್ಜನೆ ಮಾಡಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಸೋಮವಾರ ಹಲವು ದೂರುಗಳು ಸಲ್ಲಿಯಾಗಿದ್ದವು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.