ADVERTISEMENT

ಶ್ರೀಲಂಕಾ: ಸಚಿವ ಸಂಪುಟ ವಿಸ್ತರಿಸಿದ ಅಧ್ಯಕ್ಷ ಗೋಟಬಯ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 20:30 IST
Last Updated 27 ನವೆಂಬರ್ 2019, 20:30 IST

ಕೊಲಂಬೊ (ಪಿಟಿಐ): ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, 35 ಮಂದಿ ಸಚಿವರು ಹಾಗೂ ಮೂವರನ್ನು ಉಪ ಸಚಿವರನ್ನಾಗಿ ನೇಮಕ ಮಾಡಿದ್ದಾರೆ.

ಮುಂದಿನ ವರ್ಷ ನಡೆಯುವ ಸಂಸತ್‌ ಚುನಾವಣೆವರೆಗೆ ತಮ್ಮ ಸರ್ಕಾರ ಮುನ್ನಡೆಸಲು ಅವರು ಸಚಿವರ ನೇಮಕ ಮಾಡಿದ್ದಾರೆ. ಮಹಿಳೆಯರು, ತಮಿಳು ಹಾಗೂ ಮುಸ್ಲಿಂ ಸಮುದಾಯದವರನ್ನು ಅವರು ನೂತನ ಸಂಪುಟಕ್ಕೆ ಸೇರಿಸಿಕೊಂಡಿಲ್ಲ.

ಗೋಟಬಯ ಅವರ ಸೀಮಿತ 16 ಮಂದಿಯ ಸಚಿವ ಸಂಪುಟದಲ್ಲಿರುವ ತಮ್ಮ ಹಿರಿಯ ಸಹೋದರ ಚಮಲ್‌ ರಾಜಪಕ್ಸೆ ಅವರನ್ನು ರಕ್ಷಣಾ ಸಚಿವರನ್ನಾಗಿ ನೇಮಕ ಮಾಡಿದ್ದಾರೆ. ಮತ್ತೊಬ್ಬ ಸಹೋದರ, ಪ್ರಧಾನಿ ಮಹಿಂದಾ ರಾಜಪಕ್ಸೆ ಅವರ ಪುತ್ರ ನಮಲ್‌ ರಾಜಪಕ್ಸೆ ಅವರಿಗೆ ಯಾವುದೇ ಸ್ಥಾನ ನೀಡಿಲ್ಲ.

ADVERTISEMENT

‘ಈ ಹುದ್ದೆಗಳನ್ನು ಸವಲತ್ತುಗಳೆಂದು ಪರಿಗಣಿಸಬಾರದು. ನಮ್ಮ ಪ್ರಣಾಳಿಕೆಯಲ್ಲಿರುವ ಭರವಸೆಗಳನ್ನು ಈಡೇರಿಸುವ ಮತ್ತು ಜನರ ಹಿತಕ್ಕಾಗಿ ಅವುಗಳನ್ನು ಅನುಷ್ಠಾನಗೊಳಿಸಲು ಈ ಹುದ್ದೆಗಳನ್ನು ನೀಡಲಾಗಿದೆ’ ಎಂದು ಗೋಟಬಯ ಹೇಳಿದ್ದಾರೆ.

ಗೋಟಬಯ ಅವರ ಆಡಳಿತವು ಮುಂದಿನ ಸಂಸತ್‌ ಚುನಾವಣೆವರೆಗೆ ಅಲ್ಪಮತದ ಸರ್ಕಾರವಾಗಿ ಕಾರ್ಯನಿರ್ವಹಿಸಲಿದೆ. ಏಪ್ರಿಲ್‌ ನಂತರ ಸಂಸತ್‌ಗೆ ಚುನಾವಣೆ ನಡೆಯುವ ನಿರೀಕ್ಷೆ ಇದೆ.

ಮಾಜಿ ಪ್ರಧಾನಿ ರಾನಿಲ್‌ ವಿಕ್ರಮಸಿಂಘೆ ಅವರ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಸ್ಪೀಕರ್‌ ಕರು ಜಯಸೂರ್ಯ ಅವರು ಬುಧವಾರ ಮಾನ್ಯತೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.