ಕೊಲಂಬೊ: ರಾಷ್ಟ್ರಕ್ಕೆ ಬಂದಿಳಿಯುವ ಪ್ರವಾಸಿಗರಿಗೆ ನೀಡುತ್ತಿದ್ದ ಶುಲ್ಕ ರಹಿತ ವೀಸಾ ಸೌಲಭ್ಯವನ್ನುಶ್ರೀಲಂಕಾ ಆಗಸ್ಟ್ 1 ರಿಂದ ಮತ್ತೆ ಆರಂಭಿಸಲಿದೆ. ಈಸ್ಟರ್ ಹಬ್ಬದಂದು ನಡೆದ ಉಗ್ರರ ಬಾಂಬ್ ದಾಳಿಯ ನಂತರ ಈ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿತ್ತು.
ಪ್ರವಾಸೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಶ್ರೀಲಂಕಾ ಈ ಕ್ರಮಕ್ಕೆ ಮುಂದಾಗಿದೆ. ಈವರೆಗೆ ಭಾರತ ಮತ್ತು ಚೀನಾ ಈ ಸೌಲಭ್ಯಕ್ಕೆ ಒಳಪಟ್ಟಿರಲಿಲ್ಲ. ಬುಧವಾರ ಈ ಎರಡೂ ದೇಶಗಳನ್ನು ಸೇರ್ಪಡೆ ಮಾಡಲಾಗಿದೆ. ಇದೇ ಏಪ್ರಿಲ್ 21 ರಂದು ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 258 ಮಂದಿ ಮೃತಪಟ್ಟಿದ್ದರು. ಈ ಘಟನೆ ನಂತರ 39 ದೇಶಗಳ ಪ್ರವಾಸಿಗರಿಗೆ ನೀಡುತ್ತಿದ್ದ ಈ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿತ್ತು.
‘ಶುಲ್ಕ ರಹಿತ ವೀಸಾ ಸೌಲಭ್ಯವನ್ನು ಆಗಸ್ಟ್ 1ರಿಂದ ಆರಂಭಿಸಲಾಗುವುದು. ಥಾಯ್ಲೆಂಡ್, ಯುರೋಪಿಯನ್ ಒಕ್ಕೂಟ, ಅಮೆರಿಕ, ಬ್ರಿಟನ್, ಜಪಾನ್, ಕಾಂಬೋಡಿಯಾ ಸೇರಿ 39 ರಾಷ್ಟ್ರಗಳ ಜತೆಗೆ ಭಾರತ ಮತ್ತು ಚೀನಾ ಪ್ರವಾಸಿಗರಿಗೂ ಈ ಸೇವೆಯನ್ನು ವಿಸ್ತರಿಸಲಾಗಿದೆ’ ಎಂದು ಪ್ರವಾಸೋದ್ಯಮ ಸಚಿವ ಜಾನ್ ಅಮರತುಂಗೆ ಹೇಳಿದ್ದಾರೆ.
ಈ ಯೋಜನೆಯು ಮೇ 1 ರಿಂದಲೇ ಜಾರಿಗೆ ಬರಬೇಕಿತ್ತು. ಆದರೆ, ಉಗ್ರರ ದಾಳಿಯ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿತ್ತು. ಈ ವರ್ಷದ ಏಪ್ರಿಲ್ನಲ್ಲಿ ಪ್ರವಾಸಿಗರ ಸಂಖ್ಯೆ ಶೇ 7.5 ರಷ್ಟು ಇಳಿಕೆಯಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.