ADVERTISEMENT

UNSC ಸುಧಾರಣೆಗಳು ಆಯ್ಕೆಯಲ್ಲ, ಅವಶ್ಯಕತೆ: ಐಬಿಎಸ್‌ಎ ಸಭೆಯಲ್ಲಿ ಪ್ರಧಾನಿ ಮೋದಿ

ಪಿಟಿಐ
Published 23 ನವೆಂಬರ್ 2025, 11:33 IST
Last Updated 23 ನವೆಂಬರ್ 2025, 11:33 IST
<div class="paragraphs"><p>ನರೇಂದ್ರ&nbsp;ಮೋದಿ</p></div>

ನರೇಂದ್ರ ಮೋದಿ

   

ಪಿಟಿಐ ಚಿತ್ರ

ಜೋಹಾನಸ್‌ಬರ್ಗ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸುಧಾರಣೆ ಇನ್ನು ಮುಂದೆ ಒಂದು ಆಯ್ಕೆಯಲ್ಲ, ಬದಲಿಗೆ ಅವಶ್ಯಕತೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.

ADVERTISEMENT

ಭಾರತ-ಬ್ರೆಜಿಲ್-ದಕ್ಷಿಣ ಆಫ್ರಿಕಾ ದೇಶಗಳು ಜಾಗತಿಕ ಆಡಳಿತ ಸಂಸ್ಥೆಗಳಿಗೆ ಬದಲಾವಣೆಗಳಿಗೆ ಸ್ಪಷ್ಟ ಸಂದೇಶವನ್ನು ಕಳುಹಿಸಬೇಕು ಎಂದು ಪ್ರತಿಪಾದಿಸಿದರು.

ಭಾರತ-ಬ್ರೆಜಿಲ್-ದಕ್ಷಿಣ ಆಫ್ರಿಕಾ(ಐಬಿಎಸ್‌ಎ) ನಾಯಕರ ಶೃಂಗಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಜಗತ್ತು ಛಿದ್ರವಾಗಿ ಮತ್ತು ವಿಭಜಿತವಾಗಿ ಕಂಡುಬರುತ್ತಿರುವ ಸಮಯದಲ್ಲಿ, ಐಬಿಎಸ್‌ಎ ಏಕತೆ, ಸಹಕಾರ ಮತ್ತು ಮಾನವೀಯತೆಯ ಸಂದೇಶವನ್ನು ನೀಡಬಲ್ಲದು ಎಂದು ಹೇಳಿದ್ದಾರೆ.

ಮೂರು ದೇಶಗಳ ನಡುವೆ ಭದ್ರತಾ ಸಹಕಾರವನ್ನು ಬಲಪಡಿಸಲು ಐಬಿಎಸ್‌ಎಯ ಎನ್‌ಎಸ್‌ಎ ಮಟ್ಟದ ಸಭೆಯನ್ನು ಸಾಂಸ್ಥಿಕಗೊಳಿಸುವುದನ್ನು ಸಹ ಅವರು ಪ್ರಸ್ತಾಪಿಸಿದರು.

ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ನಾವು ನಿಕಟ ಸಮನ್ವಯದಿಂದ ಮುಂದುವರಿಯಬೇಕು. ಇಂತಹ ಗಂಭೀರ ವಿಷಯದ ಬಗ್ಗೆ ಯಾವುದೇ ದ್ವಿಮುಖ ನೀತಿಗಳಿಗೆ ಸ್ಥಾನವಿಲ್ಲ’ ಎಂದು ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಮತ್ತು ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲುಲಾ ಡ ಸಿಲ್ವಾ ಭಾಗವಹಿಸಿದ್ದ ಸಭೆಯಲ್ಲಿ ಮೋದಿ ಹೇಳಿದ್ದಾರೆ.

ಮಾನವ ಕೇಂದ್ರಿತ ಅಭಿವೃದ್ಧಿಯನ್ನು ಖಾತ್ರಿಪಡಿಸುವಲ್ಲಿ ತಂತ್ರಜ್ಞಾನದ ನಿರ್ಣಾಯಕ ಪಾತ್ರವನ್ನು ಎತ್ತಿ ತೋರಿಸಿದ ಪ್ರಧಾನಿ, ಮೂರು ದೇಶಗಳ ನಡುವೆ ಯುಪಿಐನಂತಹ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಕೋವಿನ್‌ನಂತಹ ಆರೋಗ್ಯ ವೇದಿಕೆಗಳು, ಸೈಬರ್ ಭದ್ರತಾ ಚೌಕಟ್ಟುಗಳು ಮತ್ತು ಮಹಿಳಾ ನೇತೃತ್ವದ ತಂತ್ರಜ್ಞಾನ ಉಪಕ್ರಮಗಳ ಹಂಚಿಕೆಯನ್ನು ಸುಗಮಗೊಳಿಸಲು 'ಐಬಿಎಸ್‌ಎ ಡಿಜಿಟಲ್ ಇನ್ನೋವೇಶನ್ ಅಲೈಯನ್ಸ್' ಅನ್ನು ಸ್ಥಾಪಿಸುವ ಪ್ರಸ್ತಾಪವನ್ನೂ ಮಾಡಿದರು.

ಶಿಕ್ಷಣ, ಆರೋಗ್ಯ, ಮಹಿಳಾ ಸಬಲೀಕರಣ ಮತ್ತು ಸೌರಶಕ್ತಿಯಂತಹ ಕ್ಷೇತ್ರಗಳಲ್ಲಿ 40 ದೇಶಗಳಲ್ಲಿನ ಯೋಜನೆಗಳನ್ನು ಬೆಂಬಲಿಸುವಲ್ಲಿ ಐಬಿಎಸ್ಎ ನಿಧಿಯ ಕಾರ್ಯವನ್ನು ಶ್ಲಾಘಿಸಿದರು.

ಆಫ್ರಿಕನ್ ನೆಲದಲ್ಲಿ ನಡೆದ ಮೊದಲ ಜಿ 20 ಶೃಂಗಸಭೆ ಸಂದರ್ಭದಲ್ಲೇ ನಡೆದ ಐಬಿಎಸ್ಎ ಸಭೆಯನ್ನು ಮೋದಿ ಸಕಾಲಿಕ ಎಂದು ಕರೆದರು. ಜಾಗತಿಕ ದಕ್ಷಿಣ ದೇಶಗಳು ಸತತ ನಾಲ್ಕು ಜಿ–20 ಅಧ್ಯಕ್ಷತೆಗಳನ್ನು ವಹಿಸಿಕೊಂಡಿದ್ದವು, ಅವುಗಳಲ್ಲಿ ಕೊನೆಯ ಮೂರನ್ನು ಐಬಿಎಸ್ಎ ಸದಸ್ಯರ ರಾಷ್ಟ್ರಗಳು ವಹಿಸಿಕೊಂಡಿದ್ದವು ಎಂದರು.

ಇದು ಮಾನವ ಕೇಂದ್ರಿತ ಅಭಿವೃದ್ಧಿ, ಬಹುಪಕ್ಷೀಯ ಸುಧಾರಣೆ ಮತ್ತು ಸುಸ್ಥಿರ ಬೆಳವಣಿಗೆಯ ಮೇಲೆ ಕೇಂದ್ರೀಕರಿಸಿದ ಹಲವಾರು ಪ್ರಮುಖ ಉಪಕ್ರಮಗಳಿಗೆ ಕಾರಣವಾಗಿದೆ ಎಂದು ಅವರು ಬಣ್ಣಿಸಿದರು.

ಐಬಿಎಸ್ಎ ಕೇವಲ ಮೂರು ದೇಶಗಳ ಗುಂಪಲ್ಲ, ಅದು ಮೂರು ಖಂಡಗಳು, ಮೂರು ಪ್ರಮುಖ ಪ್ರಜಾಪ್ರಭುತ್ವ ರಾಷ್ಟ್ರಗಳು ಮತ್ತು ಮೂರು ಪ್ರಮುಖ ಆರ್ಥಿಕತೆಗಳನ್ನು ಸಂಪರ್ಕಿಸುವ ಪ್ರಮುಖ ವೇದಿಕೆಯಾಗಿದೆ ಎಂದು ಪ್ರಧಾನಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.