ADVERTISEMENT

ಭಾರತಕ್ಕೆ ಪ್ರಯಾಣಿಸುವಾಗ ಎಚ್ಚರಿಕೆಯಿಂದಿರಿ: ಅಮೆರಿಕ

ಪ್ರಜೆಗಳಿಗೆ ಸಲಹೆ: ಅಪರಾಧ, ಭಯೋತ್ಪಾದನೆಯ ಕಾರಣ ನೀಡಿದ ಅಮೆರಿಕ

ಪಿಟಿಐ
Published 7 ಅಕ್ಟೋಬರ್ 2022, 15:47 IST
Last Updated 7 ಅಕ್ಟೋಬರ್ 2022, 15:47 IST

ವಾಷಿಂಗ್ಟನ್: ‘ಅಪರಾಧ ಮತ್ತು ಭಯೋತ್ಪಾದನೆ’ಯ ಕಾರಣದಿಂದ ಭಾರತಕ್ಕೆ ಪ್ರಯಾಣಿಸುವಾಗ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅಮೆರಿಕವು ತನ್ನ ನಾಗರಿಕರಿಗೆ ಸೂಚನೆ ನೀಡಿದೆ. ಅದರಲ್ಲೂ, ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರಯಾಣಿಸದಂತೆಯೂ ಸಲಹೆ ನೀಡಿದೆ.

ಶುಕ್ರವಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವ ಅಮೆರಿಕ, ಭಾರತಕ್ಕೆ ಕೈಗೊಳ್ಳುವ ಪ್ರಯಾಣದ ಸಲಹಾ ಮಟ್ಟವನ್ನು ನಾಲ್ಕರಿಂದ 2ನೇ ಹಂತಕ್ಕೆ ಇಳಿಸಿದೆ.

ಒಂದು ದಿನದ ಹಿಂದಷ್ಟೇವಿದೇಶಾಂಗ ಇಲಾಖೆಯು ನೀಡಿರುವ ಪ್ರತ್ಯೇಕ ಸಲಹೆಯಲ್ಲಿ, ಪಾಕಿಸ್ತಾನವನ್ನು 3ನೇ ಹಂತದಲ್ಲಿ ಇರಿಸಿತ್ತು. ಭಯೋತ್ಪಾದನೆ ಮತ್ತು ಹಿಂಸಾಚಾರದ ಕಾರಣದಿಂದ ಪಾಕಿಸ್ತಾನದ ಪ್ರಕ್ಷುಬ್ಧ ಪ್ರಾಂತ್ಯಗಳ ಪ್ರಯಾಣದ ಕುರಿತು ಮರುಪರಿಶೀಲಿಸುವಂತೆಯೂ ತನ್ನ ನಾಗರಿಕರಿಗೆ ಸೂಚನೆ ನೀಡಿತ್ತು.

ADVERTISEMENT

‘ಪೂರ್ವ ಲಡಾಖ್ ಪ್ರದೇಶ ಮತ್ತು ಅದರ ರಾಜಧಾನಿ ಲೇಹ್ ಅನ್ನು ಹೊರತುಪಡಿಸಿ, ಜಮ್ಮು–ಕಾಶ್ಮೀರಕ್ಕೆ ನಾಗರಿಕರು ಪ್ರಯಾಣಿಸಬಾರದು ಎಂದಿರುವ ಅಮೆರಿಕವು ಅಲ್ಲಿನ ಪ್ರದೇಶದಲ್ಲಿ ಭಯೋತ್ಪಾದನೆ ಮತ್ತು ಅಶಾಂತಿಯ ಕಾರಣ ನೀಡಿದೆ. ಅಂತೆಯೇ ಭಾರತ–ಪಾಕಿಸ್ತಾನದ ಗಡಿ ಪ್ರದೇಶದಲ್ಲಿನ ಹತ್ತು ಕಿ.ಮೀ. ವ್ಯಾಪ್ತಿಯಲ್ಲಿ ಸಶಸ್ತ್ರ ಸಂಘರ್ಷದ ಸಾಧ್ಯತೆ ಇರುವ ಕಾರಣ ಆ ಪ್ರದೇಶಗಳಲ್ಲೂ ಪ್ರಯಾಣಿಸಬಾರದು ಎಂದು ಸೂಚಿಸಿದೆ.

‘ಭಾರತದಲ್ಲಿ ಅತ್ಯಾಚಾ ಪ್ರಕರಣಗಳು ಹೆಚ್ಚುತ್ತಿವೆ ಎಂದು ಅಲ್ಲಿನ ಅಧಿಕಾರಿಗಳು ವರದಿ ಮಾಡಿದ್ದಾರೆ. ಅಲ್ಲದೆ, ಪ್ರವಾಸಿ ತಾಣ ಸೇರಿದಂತೆ ಇತರೆಡೆಗಳಲ್ಲಿ ಲೈಂಗಿಕ ದೌರ್ಜನ್ಯದಂಥ ಅಪರಾಧಗಳೂ ಜರುಗುತ್ತಿವೆ ಎಂದೂ ಹೇಳಿದ್ದಾರೆ’ ಎಂದು ತಿಳಿಸಿದೆ.

‘ಪ್ರವಾಸಿ ಸ್ಥಳಗಳು, ಸಾರಿಗೆ ಕೇಂದ್ರಗಳು, ಮಾರುಕಟ್ಟೆಗಳು, ಶಾಪಿಂಗ್ ಮಾಲ್‌ಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ದಾಳಿ ಮಾಡಬಹುದು’ ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.