ವಾಷಿಂಗ್ಟನ್ : ಭಾರತದ ವಿರುದ್ಧ ಚೀನಾದ ಆಕ್ರಮಣಕಾರಿ ಧೋರಣೆಯನ್ನು ಶಮನಗೊಳಿಸಲು ಅಮೆರಿಕದ ಕಾಂಗ್ರೆಸ್ನ 9 ಮಂದಿ ಸದಸ್ಯರು ಕೆಳಮನೆಯಲ್ಲಿ ನಿರ್ಣಯವೊಂದನ್ನು ಮಂಡಿಸಿದ್ದಾರೆ.
ಭಾರತ– ಚೀನಾ ಗಡಿಯಲ್ಲಿ ಉಲ್ಬಣಗೊಂಡಿರುವ ಬಿಕ್ಕಟ್ಟನ್ನು ಪರಿಹರಿಸಲು ರಾಜತಾಂತ್ರಿಕ ಮಾರ್ಗಗಳನ್ನುಬೀಜಿಂಗ್ ಅನುಸರಿಸಬೇಕೇ ಹೊರತು ಬಲ ಪ್ರದರ್ಶನವಲ್ಲ ಎಂದು ಸದಸ್ಯರು ಹೇಳಿದ್ದಾರೆ.
ಸಂಸದರ ನೇತೃತ್ವವನ್ನು ಭಾರತೀಯ ಮೂಲದ ಕಾಂಗ್ರೆಸ್ ಸದಸ್ಯ ರಾಜಾ ಕೃಷ್ಣಮೂರ್ತಿ ವಹಿಸಿದ್ದು, ರೋ ಖನ್ನಾ, ಫ್ರಾಂಕ್ ಪಲ್ಲೊನೆ, ಟಾಮ್ ಸೌಜೀ, ಟೆಡ್ ಯಾಹೊ, ಜಾರ್ಜ್ ಹೋಲ್ಡಿಂಗ್, ಶೀಲಾ ಜಾಕ್ಸನ್ ಲೀ, ಹ್ಯಾಲೇ ಸ್ಟೀವನ್ಸ್ ಮತ್ತು ಸ್ಟೀವ್ ಶಬ್ಬೊಟ್ನಿರ್ಣಯಕ್ಕೆ ಸಹಿ ಮಾಡಿದ್ದಾರೆ.
‘ಪೂರ್ವ ಲಡಾಖ್ನ ವಾಸ್ತವ ಗಡಿರೇಖೆಯಲ್ಲಿ (ಎಲ್ಎಸಿ) ಭಾರತ ಮತ್ತು ಚೀನಾ ಪಡೆಗಳು ಮುಖಾಮುಖಿಯಾಗಿದ್ದವು. ಮೇ 5ರಿಂದ ಉದ್ವಿಗ್ನ ಪರಿಸ್ಥಿತಿ ತಲೆದೋರಿತ್ತು. ಭಾರತ 20 ಸೈನಿಕರನ್ನೂ ಕಳೆದುಕೊಂಡಿತ್ತು. ಜೂನ್ 15ರವರೆಗೆ ಚೀನಾ ತನ್ನ 5 ಸಾವಿರ ಸೈನಿಕರನ್ನು ಗಡಿಯಲ್ಲಿ ನಿಯೋಜಿಸಿತ್ತಲ್ಲದೇ ಆಕ್ರಮಣಕಾರಿಯಾಗಿ ವರ್ತಿಸಿತ್ತು. ಗಡಿಯನ್ನು ಪುನರ್ರಚಿಸಲು ಯತ್ನಿಸಿತ್ತು’ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ಭಾರತ ಗಡಿಯಷ್ಟೇ ಅಲ್ಲದೆ, ಭೂತಾನ್, ದಕ್ಷಿಣ ಚೀನಾ ಸಮುದ್ರ, ಸೆಕ್ಕಾಕು ದ್ವೀಪಗಳು, ಹಾಂಗ್ಕಾಂಗ್ ಮತ್ತು ತೈವಾನ್ ವಿರುದ್ಧ ಚೀನಾ ತಳೆದಿರುವ ನಿಲುವಿನ ಬಗ್ಗೆಯೂ ನಿರ್ಣಯವು ದೃಷ್ಟಿಹರಿಸಿದೆ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.