ಲಂಡನ್: ಭಾರತದಲ್ಲಿನ ಬ್ಯಾಂಕುಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿ ಬ್ರಿಟನ್ನಲ್ಲಿ ತಲೆಮರೆಸಿಕೊಂಡಿರುವ ಮದ್ಯದ ಉದ್ಯಮಿ ವಿಜಯ ಮಲ್ಯ ಗಡಿಪಾರಿಗೆ ಸಂಬಂಧಿಸಿ ಸ್ಥಳೀಯ ಕೋರ್ಟ್ ಹೊರಡಿಸಿರುವ ಆದೇಶದಲ್ಲಿ ಹಲವಾರು ದೋಷಗಳಿವೆ ಎಂದು ಮಲ್ಯ ಪರ ವಕೀಲರು ಹೇಳಿದ್ದಾರೆ.
‘ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡುವಂತೆ 2018ರಲ್ಲಿ ಇಲ್ಲಿನ ವೆಸ್ಟ್ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ನ ನ್ಯಾಯಾಧೀಶೆ ಎಮ್ಮಾ ಅರ್ಬಥ್ನಾಟ್ ಆದೇಶ ಹೊರಡಿಸಿದ್ದಾರೆ. ಇದರಲ್ಲಿ ಹಲವಾರು ದೋಷಗಳಿವೆ. ಭಾರತ ಸರ್ಕಾರ ಒದಗಿಸಿರುವ ಸಾಕ್ಷಿಗಳ ಹೇಳಿಕೆಗಳು ಸಹ ಪರಿಗಣಿಸಲು ಅರ್ಹವಾಗಿಲ್ಲ’ ಎಂದು ವಕೀಲ ಕ್ಲೇರ್ ಮಾಂಟ್ಗೊಮೆರಿ ವಾದಿಸಿದರು.
ಹಫೀಜ್ ಪ್ರಕರಣ ಒಟ್ಟಿಗೆ ವಿಚಾರಣೆ
ಲಾಹೋರ್:ಉಗ್ರರಿಗೆ ಹಣಕಾಸು ನೆರವು ನೀಡಿದ ಆರೋಪ ಎದುರಿಸುತ್ತಿರುವ ಮುಂಬೈ ದಾಳಿಯ ಸಂಚುಕೋರ, ಜಮಾತ್–ಉದ್– ದಾವಾಸಂಘಟನೆಯ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ದಾಖಲಾಗಿರುವ ಎಲ್ಲ ಆರು ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ನಡೆಸಲು ಪಾಕಿಸ್ತಾನದಭಯೋತ್ಪಾದನೆ ನಿಗ್ರಹ ನ್ಯಾಯಾಲಯ ಒಪ್ಪಿಗೆ ಸೂಚಿಸಿದೆ.
ಆತ್ಮಾಹುತಿ ದಾಳಿ: ಐದು ಬಲಿ
ಕಾಬೂಲ್: ಅಫ್ಗಾನಿಸ್ಥಾನದ ಸೇನಾ ಅಕಾಡೆಮಿ ಮೇಲೆ ನಡೆದ ಆತ್ಮಾಹುತಿ ದಾಳಿಗೆ ಐವರು ಬಲಿಯಾಗಿದ್ದು, 12 ಮಂದಿಗೆ ಗಾಯಗಳಾಗಿವೆ. ಕಾಬೂಲ್ನ ಮಾರ್ಷಲ್ ಫಾಹೀಮ್ ಮಿಲಿಟರಿ ಅಕಾಡೆಮಿ ಬಳಿ ಬೆಳಿಗ್ಗೆ 7.30ಕ್ಕೆ ಸಂಭವಿಸಿದ ಈ ಸ್ಫೋಟದಲ್ಲಿಇಬ್ಬರು ನಾಗರಿಕರು ಹಾಗೂ 4ಮಂದಿ ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಅಲ್ಲಿನ ಗೃಹ ಸಚಿವಾಲಯ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.