ADVERTISEMENT

ನಾವು ನಿಮ್ಮ ಶತ್ರುಗಳಲ್ಲ: ಮುಸ್ಲಿಮರ ಕೋರಿಕೆ

ಪ್ರತೀಕಾರದ ಭೀತಿಗೆ ಆತಂಕಗೊಂಡ ಸಮುದಾಯ: ರಕ್ಷಣೆಗೆ ಮೊರೆ

ಏಜೆನ್ಸೀಸ್
Published 24 ಏಪ್ರಿಲ್ 2019, 19:25 IST
Last Updated 24 ಏಪ್ರಿಲ್ 2019, 19:25 IST
ಶ್ರೀಲಂಕಾದಲ್ಲಿ ಉಗ್ರರ ಬಾಂಬ್‌ ದಾಳಿ ಖಂಡಿಸಿ ಕೋಲ್ಕತ್ತದಲ್ಲಿ ನಾಗರಿಕರು ಭಿತ್ತಿ ಫಲಕಗಳನ್ನು ಪ್ರದರ್ಶಿಸಿದರು  ರಾಯಿಟರ್ಸ್‌ ಚಿತ್ರ
ಶ್ರೀಲಂಕಾದಲ್ಲಿ ಉಗ್ರರ ಬಾಂಬ್‌ ದಾಳಿ ಖಂಡಿಸಿ ಕೋಲ್ಕತ್ತದಲ್ಲಿ ನಾಗರಿಕರು ಭಿತ್ತಿ ಫಲಕಗಳನ್ನು ಪ್ರದರ್ಶಿಸಿದರು ರಾಯಿಟರ್ಸ್‌ ಚಿತ್ರ   

ಕೊಲಂಬೊ: ಈಸ್ಟರ್‌ ದಿನಾಚರಣೆಯಂದು ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟದ ಭೀಕರ ಘಟನೆ ಶ್ರೀಲಂಕಾದ ಮುಸ್ಲಿಂ ಸಮುದಾಯದಲ್ಲಿ ಆತಂಕ ಮೂಡಿಸಿದೆ.

ಕ್ರೈಸ್ತರನ್ನು ಗುರಿಯಾಗಿರಿಸಿಕೊಂಡು ನಡೆದ ಈ ಸ್ಫೋಟಗಳಿಗೆ ಪ್ರತೀಕಾರವಾಗಿ ಮುಸ್ಲಿಮರ ಮೇಲೆ ದಾಳಿ ನಡೆಸುವ ಸಾಧ್ಯತೆಗಳಿವೆ ಎನ್ನುವ ವರದಿಗಳಿಂದ ಈ ಸಮುದಾಯದಲ್ಲಿ ಭೀತಿ ಹುಟ್ಟಿಸಿದೆ.

‘ನಾನು ಮನೆಯಿಂದ ಹೊರಗೆ ಹೋಗದಂತೆ ಕುಟುಂಬದ ಸದಸ್ಯರು ಮನವಿ ಮಾಡಿದ್ದಾರೆ. ಒಂದು ವೇಳೆ ಹೋದರೆ ಜೀವಂತವಾಗಿ ವಾಪಸ್‌ ಮನೆಗೆ ಬರುತ್ತೇನೆಯೇ ಎಂದು ಪ್ರಶ್ನಿಸುತ್ತಾರೆ. ನನ್ನ ಮೇಲೆ ದಾಳಿ ನಡೆಯಬಹುದು ಎನ್ನುವ ಹೆದರಿಕೆ ಇದ್ದರೂ ಹೊರಗೆ ಬಂದಿದ್ದೇನೆ’ ಎಂದು ಡೆಮಾಟಗೊಡಾದ ಮಸೀದಿಯ ಹೊರಗಿದ್ದ ಮೊಹಮ್ಮದ್‌ ಹಸನ್‌ ತಮಗಾದ ಆತಂಕವನ್ನು ಬಿಚ್ಚಿಟ್ಟರು.

ADVERTISEMENT

‘ನಾವು ಭಯದಲ್ಲೇ ಬದುಕುತ್ತಿದ್ದೇವೆ. ನಮ್ಮನ್ನು ಶತ್ರುಗಳಂತೆ ಭಾವಿಸಲಾಗುತ್ತಿದೆ. ಆದರೆ, ನಾವು ನಿಮ್ಮ ಶತ್ರುಗಳಲ್ಲ ಎಂದು ಹೇಳುತ್ತಿದ್ದೇವೆ. ಇದು ನಮ್ಮ ಮಾತೃಭೂಮಿ’ ಎಂದು ಇನ್ನೊಬ್ಬ ವ್ಯಕ್ತಿ ಆರ್‌.ಎಫ್‌. ಅಮೀರ್‌ ವಿವರಿಸಿದರು.

ಶ್ರೀಲಂಕಾದ 2.14 ಕೋಟಿ ಜನಸಂಖ್ಯೆಯಲ್ಲಿ ಮುಸ್ಲಿಮರು ಶೇಕಡ 10ರಷ್ಟು ಇದ್ದಾರೆ. ಹಿಂದೂಗಳ ಬಳಿಕ ಅತಿ ಹೆಚ್ಚು ಅಲ್ಪಸಂಖ್ಯಾತರು ಮುಸ್ಲಿಮರಿದ್ದಾರೆ. ಶೇಕಡ 7ರಷ್ಟು ಕ್ರೈಸ್ತರಿದ್ದಾರೆ.

2009ರಲ್ಲಿ ಅಂತರ್ಯುದ್ಧ ಅಂತ್ಯವಾದ ಬಳಿಕ ಮುಸ್ಲಿಮರ ಮೇಲೆ ಹಲವು ಬಾರಿ ದಾಳಿಗಳು ನಡೆದಿವೆ. ಕೆಲವು ಮೂಲಭೂತವಾದಿ ಬೌದ್ಧ ಸನ್ಯಾಸಿಗಳು ಮುಸ್ಲಿಮರ ವಿರುದ್ಧ ಪ್ರಚಾರದಲ್ಲಿ ತೊಡಗಿದ್ದರು. ಮುಸ್ಲಿಮರ ಅಂಗಡಿಗಳಿಂದ ಆಹಾರ ಖರೀದಿಸಿದರೆ ಬಂಜೆತನ ಉಂಟಾಗುತ್ತದೆ ಮತ್ತು ಒಳಉಡುಪು ಖರೀದಿಸಿದರೆ ಷಂಡರಾಗುತ್ತಾರೆ ಎನ್ನುವ ವದಂತಿಗಳನ್ನು ಹಬ್ಬಿಸಲಾಗಿತ್ತು.

ಇಂತಹ ಬೆಳವಣಿಗೆಗಳು ಪುನರಾವರ್ತನೆಯಾಗಬಾರದು ಎನ್ನುವುದು ಇಲ್ಲಿನ ಮುಸ್ಲಿಂ ಸಮುದಾಯದ ಒತ್ತಾಸೆ.

‘ಎಲ್ಲ ಸಮುದಾಯಗಳು ಒಗ್ಗಟ್ಟಿನಿಂದ ಇರಬೇಕು. ಮುಸ್ಲಿಂ ಸಮುದಾಯ ಸಹ ಭೀಕರ ಕೃತ್ಯವನ್ನು ಖಂಡಿಸಿದೆ. ತಮಿಳರು ಮತ್ತು ಸಿಂಹಳಿಗಳಷ್ಟೇ ಮುಸ್ಲಿಮರು ಸಹ ದಾಳಿ ಬಗ್ಗೆ ಆಕ್ರೋಶಗೊಂಡಿದ್ದಾರೆ’ ಎಂದಿರುವ ‍‍ಪ್ರಧಾನಿ ರನೀಲ್‌ ವಿಕ್ರಂ ಸಿಂಘೆ ಶಾಂತಿ ಕಾಪಾಡುವಂತೆ ಕೋರಿದ್ದಾರೆ.

ಸದ್ಯದ ಸಂಕಷ್ಟದ ಪರಿಸ್ಥಿತಿಯಲ್ಲಿ ಪೊಲೀಸರು ಪ್ರತಿಯೊಬ್ಬ ನಾಗರಿಕರಿಗೂ ರಕ್ಷಣೆ ನೀಡಬೇಕು ಎಂದು ‌ಮುಸ್ಲಿಮರು ಒತ್ತಾಯಿಸಿದ್ದಾರೆ.

‘ನಮಗೆ ಭದ್ರತೆ ಕಲ್ಪಿಸುವಂತೆ ಸರ್ಕಾರಕ್ಕೆ ಕೋರಿದ್ದೇವೆ. ದಾಳಿಗಳನ್ನು ಮುಸ್ಲಿಂ ಸಮುದಾಯ ನಡೆಸಿಲ್ಲ. ಆದರೆ, ಕೆಲವು ಸಮಾಜಘಾತುಕ ಶಕ್ತಿಗಳು ಇಂತಹ ಕೃತ್ಯ ನಡೆಸಿವೆ’ ಎಂದು ಶ್ರೀಲಂಕಾದ ಮುಸ್ಲಿಂ ಕೌನ್ಸಿಲ್‌ನ ಉಪಾಧ್ಯಕ್ಷ ಹಿಲ್ಮಿ ಅಹಮದ್‌ ತಿಳಿಸಿದ್ದಾರೆ.

‘ನ್ಯಾಷನಲ್‌ ತೌಹೀದ್‌ ಜಮಾತ್‌ನ ನಾಯಕ ಝಹ್ರಾನ್‌ ಹಶೀಮ್‌ ಬಗ್ಗೆ ಕೆಲವು ವರ್ಷಗಳ ಹಿಂದೆಯೇ ಮಾಹಿತಿ ನೀಡಲಾಗಿತ್ತು. ಕುರ್‌ಆನ್‌ ತರಗತಿಗಳನ್ನು ನಡೆಸುವ ನೆಪದಲ್ಲಿ ಯುವಕರನ್ನು ಭಯೋತ್ಪಾದನೆ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರಚೋದಿಸುತ್ತಿದ್ದ’ ಎಂದು ಅಹಮದ್‌ ತಿಳಿಸಿದ್ದಾರೆ.

9 ದಾಳಿಕೋರರಿಂದ ಕೃತ್ಯ: 60 ಮಂದಿ ಬಂಧನ

ಓರ್ವ ಮಹಿಳೆ ಸೇರಿದಂತೆ ಒಂಬತ್ತು ಆತ್ಮಹತ್ಯಾ ಬಾಂಬರ್‌ಗಳು ಸರಣಿ ಸ್ಫೋಟ ನಡೆಸಿದ್ದಾರೆ. ಇವರಲ್ಲಿ ಎಂಟು ಮಂದಿಯನ್ನು ಗುರುತಿಸಲಾಗಿದೆ.

ಇದುವರೆಗೆ 60 ಮಂದಿಯನ್ನು ಬಂಧಿಸಲಾಗಿದೆ. ಇವರೆಲ್ಲರೂ ಶ್ರೀಲಂಕಾದ ನಾಗರಿಕರು. ದೇಶದ ಹಲವೆಡೆ ಸ್ಫೋಟಕ್ಕೆ ಸಂಬಂಧಿಸಿದ ವ್ಯಕ್ತಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿದೆ. ಬಂಧಿತರಲ್ಲಿ ಹಲವರು ನ್ಯಾಷನಲ್‌ ತೌಹೀದ್‌ ಜಮಾತ್‌ (ಎನ್‌ಟಿಜೆ) ಜತೆ ಸಂಪರ್ಕ ಹೊಂದಿರುವ ಶಂಕೆ ಇದೆ. ಒಂಬತ್ತನೇ ಆತ್ಮಹತ್ಯಾ ಬಾಂಬರ್‌ ದಾಳಿಯಲ್ಲಿ ಭಾಗಿಯಾದ ಒಬ್ಬನ ಪತ್ನಿ ಎಂದು ದೃಢಪಡಿಸಲಾಗಿದೆ.

‘ನ್ಯಾಷನಲ್‌ ತೌಹೀದ್‌ ಜಮಾತ್‌ (ಎನ್‌ಟಿಜೆ) ಈ ದಾಳಿಗಳನ್ನು ನಡೆಸಿಲ್ಲ. ಆದರೆ, ಭಿನ್ನಾಭಿಪ್ರಾಯಗಳಿಂದಾಗಿ ಈ ಸಂಘಟನೆಯಿಂದ ಹೊರಹೋಗಿರುವ ಗುಂಪು ಈ ದಾಳಿ ನಡೆಸಿದೆ’ ಎಂದು ರಕ್ಷಣಾ ಇಲಾಖೆ ರಾಜ್ಯ ಸಚಿವ ರುವಾನ್‌ ವಿಜೆವರ್ದೆನಾ ತಿಳಿಸಿದ್ದಾರೆ.

‘ಸಿನ್ನಾಮೊನ್‌ ಗ್ರ್ಯಾಂಡ್‌ ಮತ್ತು ಶಾಂಗ್ರಿ ಲಾ ಹೋಟೆಲ್‌ಗಳಲ್ಲಿ ದಾಳಿ ನಡೆಸಿದ ಇಬ್ಬರು ಸಹೋದರರ ಮನೆ ಶೋಧಿಸಿದಾಗ ಕಂಪ್ಯೂಟರ್‌ ಹಾರ್ಡ್‌ ಡಿಸ್ಕ್‌, ಸಿಮ್‌ ಕಾರ್ಡ್‌ಗಳು ಮತ್ತು ಕೆಲವು ಕೃತಿಗಳು ಪತ್ತೆಯಾಗಿವೆ’ ಎಂದು ಪೊಲೀಸ್‌ ಇಲಾಖೆಯ ವಕ್ತಾರರು ವಿವರಿಸಿದ್ದಾರೆ.

ಅತಿ ಹೆಚ್ಚು ಸಂಖ್ಯೆಯಲ್ಲಿ ಜನರು ಸೇರಿದ್ದ ಸೇಂಟ್‌ ಮೇರಿ ಚರ್ಚ್‌ ಮೇಲೆಯೂ ದಾಳಿ ನಡೆಸುವ ಉದ್ದೇಶವಿತ್ತು. ಪೊಲೀಸರನ್ನು ಅಲ್ಲಿ ನಿಯೋಜಿಸಿದ್ದರಿಂದ ಬಾಂಬರ್‌ಗಳು ಚರ್ಚ್‌ ಪ್ರವೇಶಿಸಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಐಎಸ್‌ ಉಗ್ರಗಾಮಿ ಸಂಘಟನೆ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದರೂ ನೇರವಾಗಿ ಭಾಗಿಯಾಗಿದ್ದಕ್ಕೆ ಸಾಕ್ಷ್ಯಗಳನ್ನು ಒದಗಿಸಿಲ್ಲ.

**

ಮುಸ್ಲಿಮರ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ ಎನ್ನುವುದು ನನಗೆ ಗೊತ್ತು. ದ್ವೇಷದಿಂದ ಮತ್ತಷ್ಟು ದ್ವೇಷ ಬೆಳೆಯಬಾರದು. ನಾವು ಒಂದು ರೀತಿಯಲ್ಲಿ ಗೃಹ ಬಂಧನಕ್ಕೆ ಒಳಗಾಗುತ್ತಿದ್ದೇವೆ. ಹೊರಗೆ ಹೋಗಲು ಭಯವಾಗುತ್ತಿದೆ.
- ಝರೀನಾ ಬೇಗಂ, ಕೊಲಂಬೊ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.