ಲುವಿವ್ (ಉಕ್ರೇನ್):ದಕ್ಷಿಣ ಉಕ್ರೇನ್ನಲ್ಲಿ ರಷ್ಯಾದ ಪಡೆಗಳು ಚಿತ್ರಹಿಂಸೆ ಮತ್ತು ಅಪಹರಣಗಳನ್ನು ನಡೆಸುತ್ತಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸುವಂತೆ ಅವರು ಜಗತ್ತಿಗೆ ಕರೆ ನೀಡಿದ್ದಾರೆ.
‘ಉಕ್ರೇನ್ನಲ್ಲಿ ಚಿತ್ರಹಿಂಸೆ ನೀಡುವ ಚೇಂಬರ್ಗಳನ್ನೇ ನಿರ್ಮಿಸಿಕೊಳ್ಳಲಾಗಿದೆ’ಎಂದು ಝೆಲೆನ್ಸ್ಕಿ ರಾಷ್ಟ್ರವನ್ನುದ್ದೇಶಿಸಿ ಭಾನುವಾರ ಸಂಜೆ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ.
‘ಸ್ಥಳೀಯ ಸರ್ಕಾರಗಳ ಪ್ರತಿನಿಧಿಗಳು ಸೇರಿದಂತೆ ಸ್ಥಳೀಯ ಸಮುದಾಯಗಳ ಜನರನ್ನೂ ರಷ್ಯಾ ಪಡೆಗಳು ಅಪಹರಿಸುತ್ತಿದೆ’ಎಂದು ಅವರು ಹೇಳಿದ್ದಾರೆ. ಅಲ್ಲಿ ಮಾನವೀಯ ನೆರವನ್ನು ಕದಿಯಲಾಗುತ್ತಿದೆ. ಕ್ಷಾಮದ ವಾತಾವರಣ ಸೃಷ್ಟಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಖೆರ್ಸನ್ ಮತ್ತು ಝಪೊರಿಝಿಯಾ ಪ್ರದೇಶದ ಆಕ್ರಮಿತ ಭಾಗಗಳಲ್ಲಿ ರಷ್ಯಾವು ಪ್ರತ್ಯೇಕ ರಾಜ್ಯಗಳನ್ನು ರಚಿಸುತ್ತಿದೆ. ಅಲ್ಲಿ ರಷ್ಯಾದ ಕರೆನ್ಸಿ ರೂಬಲ್ ಅನ್ನು ಪರಿಚಯಿಸಲಾಗುತ್ತಿದೆ ಎಂದು ಅವರು ಹೇಳಿದರು.
ಉಕ್ರೇನ್ನ ಎರಡನೇ ಅತಿದೊಡ್ಡ ನಗರವಾದ ಹಾರ್ಕಿವ್ನ ಮೇಲೆ ರಷ್ಯಾದ ಶೆಲ್ ದಾಳಿ ತೀವ್ರಗೊಂಡಿದ್ದು, ಕಳೆದ ನಾಲ್ಕು ದಿನಗಳಲ್ಲಿ 18 ಜನರು ಸಾವಿಗೀಡಾಗಿದ್ದಾರೆ. 106 ಮಂದಿ ಗಾಯಗೊಂಡಿದ್ದಾರೆ ಎಂದು ಝೆಲೆನ್ಸ್ಕಿ ಹೇಳಿದ್ದಾರೆ.
‘ಇದು ಉದ್ದೇಶಪೂರ್ವಕ ಭಯೋತ್ಪಾದನೆಯೇ ಹೊರತು ಬೇರೇನೂ ಅಲ್ಲ. ಸಾಮಾನ್ಯ ನಾಗರಿಕರ ವಿರುದ್ಧ ಮದ್ದು ಗುಂಡು, ಫಿರಂಗಿಗಳ ಪ್ರಯೋಗ ನಡೆಯುತ್ತಿದೆ’ಎಂದು ಅವರು ಕಿಡಿ ಕಾರಿದ್ದಾರೆ.
ಪೂರ್ವ ಉಕ್ರೇನ್ನಲ್ಲಿ ರಷ್ಯಾದ ಯೋಜಿತ ಆಕ್ರಮಣವು ಸದ್ಯದಲ್ಲೇ ಆರಂಭವಾಗಲಿದೆ ಎಂದು ಅವರು ಹೇಳಿದರು.
ಸಂಪೂರ್ಣ ಬ್ಯಾಂಕಿಂಗ್ ವಲಯ ಮತ್ತು ತೈಲ ಉದ್ಯಮ ಸೇರಿದಂತೆ ರಷ್ಯಾ ವಿರುದ್ಧ ಹೆಚ್ಚಿನ ನಿರ್ಬಂಧಗಳಿಗೆ ಝೆಲೆನ್ಸ್ಕಿ ಮತ್ತೊಮ್ಮೆ ಕರೆ ನೀಡಿದರು. ‘ಪಾಶ್ಚಿಮಾತ್ಯ ದೇಶಗಳನ್ನು ಅಸ್ಥಿರಗೊಳಿಸಲು ರಷ್ಯಾ ಬಹಿರಂಗವಾಗಿ ತನ್ನ ಶಕ್ತಿ ಬಳಸುವುದನ್ನು ಯುರೋಪ್ ಮತ್ತು ಅಮೆರಿಕದಲ್ಲಿನ ಪ್ರತಿಯೊಬ್ಬರೂ ನೋಡುತ್ತಿದ್ದಾರೆ’ಎಂದು ಝೆಲೆನ್ಸ್ಕಿ ಹೇಳಿದರು. ‘ಹೀಗಾಗಿ, ಇದಕ್ಕೆಲ್ಲ ಕೊನೆ ಹಾಡಲು ಪಾಶ್ಚಿಮಾತ್ಯ ದೇಶಗಳು ರಷ್ಯಾ ವಿರುದ್ಧ ವೇಗವಾಗಿ ಹೊಸ, ಶಕ್ತಿಯುತ ನಿರ್ಬಂಧಗಳ ಪ್ಯಾಕೇಜ್ ಅನ್ನು ಸಿದ್ಧಪಡಿಸುವ ಅಗತ್ಯವಿದೆ.’ ಎಂದು ಅವರು ಕರೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.