ಅಂತರಂಗದ ಅರಿವನ್ನು ಜಾಗೃತಗೊಳಿಸಿಕೊಂಡು ಜೀವಿಗಳ ಉದ್ಧಾರವನ್ನೇ ಕಾಯಕವಾಗಿಸಿಕೊಂಡ ಗುರು ಕರುಣಾಮೂರ್ತಿ. ಅವನೆಂದೂ ಆಶೆ-ಆಮಿಷಕ್ಕೊಳಗಾದವನಲ್ಲ. ತನ್ನ ಅನುಭಾವದ ಮೂಲಕ ಶಿಷ್ಯನ ಮನದ ಮಾಲಿನ್ಯವನ್ನು ತೊಳೆವ ಅವನು ಶ್ರೇಷ್ಠ ಅನುಭಾವಿ. ಅಂತೆಯೇ ಭಾರತೀಯ ಪರಂಪರೆಯಲ್ಲಿ ಗುರುವಿಗೆ ಅತ್ಯುನ್ನತ ಸ್ಥಾನವನ್ನು ಕಲ್ಪಿಸಲಾಗಿದೆ. ‘ನ ಗುರೋರಧಿಕಂ ನಗುರೋರಧಿಕಂ ಎಂದು ಶೃತಿಗಳು ಸಾರಿದರೆ ಗುರುದೈವಾತ್ಪರಂ’ ನಾಸ್ತಿ ಗುರುವಿಗಿಂತಲೂ ಶ್ರೇಷ್ಠರಾದವರು ಯಾರೂ ಇಲ್ಲ ಎಂದು ನಮ್ಮ ಹಿರಿಯರು ಹೇಳುತ್ತ ಬಂದಿದ್ದಾರೆ.
ಶಿವಪಥದಲ್ಲಿ ಮುನ್ನಡೆದು ಶಿವನೊಡನೆ ಸಾಮರಸ್ಯವನ್ನು ಸಾಧಿಸುವ ಅಧ್ಯಾತ್ಮ ಸಾಧಕರು ಗುರುವನ್ನು ಆಶ್ರಯಿಸಲೇಬೇಕು. ಶಿವಪಥನರಿವೊಡೆ ಗುರುಪಥ ಮೊದಲು ಎಂಬುದು ಬಸವಣ್ಣನವರ ಆಪ್ತ ಸಂದೇಶ. ಭಗವಂತನು ನಿರಾಕಾರ ಮತ್ತು ನಿರ್ಗುಣ ಸ್ವರೂಪನು, ಅನುಭಾವವೇದ್ಯನು. ಅಗೋಚರ ಶಕ್ತಿಯಾಗಿರುವ ಅವನನ್ನು ಗುರುವನ್ನಾಶ್ರಯಿಸದೆ ಕಾಣುವೆನೆಂಬುದು ಭ್ರಮೆಯ ಮಾತಾದೀತು. ಕಾಣುವ ಗುರುವನ್ನೇ ಭಗವಂತನೆಂದು ಕಂಡು ಸೇವಿಸಿದ ಶಿಷ್ಯನ ಅನುಭಾವಕ್ಕೆ ಭಗವಂತನು ನಿಲುಕದೇ ಇರಲಾರನು. ಕಂಡುದನೆ ಕಂಡು ಗುರುಪಾದವ ಹಿಡಿದಲ್ಲಿ ಕಾಣುದದ ಕಾಣಬಹುದು ಎನ್ನುತ್ತಾರೆ ಅಲ್ಲಮರು.
ಗುರು ಕಾರುಣ್ಯಸಿಂಧು. ಅವನು ತನ್ನ ಕರುಣಾಜಲದಿಂದ ಶಿಷ್ಯನ ಅಂಗ ಮನ ಪ್ರಾಣಗಳನ್ನು ಪರಿಶುದ್ಧಗೊಳಿಸುವನು; ಜ್ಞಾನೋಪದೇಶದ ಮೂಲಕ ಶಿಷ್ಯನ ಮನದ ಕತ್ತಲೆಯನ್ನು ಕಳೆದು ಅವನಲ್ಲಿ ಜ್ಞಾನ ಜ್ಯೋತಿಯನ್ನು ಬೆಳಗಿಸುವನು.
ಶ್ರೀ ಗುರು ವಚನುಪದೇಶವನಾಲಿಸಿದಾಗಳಹುದು ನರರಿಗೆ ಮುಕುತಿ ಎನ್ನುವ ಅನುಭಾವಿ ನಿಜಗುಣರು ಗುರುವಿನ ಉಪದೇಶ ಮಾತ್ರದಿಂದಲೇ ಮನುಷ್ಯರು ಮುಕ್ತಿಗೆ ಅರ್ಹರಾಗುವರೆಂಬ ವಾಸ್ತವವನ್ನು ನಮ್ಮ ಮುಂದಿರಿಸಿದ್ದಾರೆ.
ನಿಜವನರಿದು ನಿಶ್ಚಿಂತನಾಗಿರುವ ಗುರು ಮಹಾಜ್ಞಾನಿ. ಅವನ ವಚನೋಪದೇಶದಲ್ಲಿ ಅದ್ಭುತವಾದ ಶಕ್ತಿಯಿದೆ. ನರಜನ್ಮವನ್ನು ಹರಜನ್ಮವಾಗಿಸುವ, ಭವಬಂಧನವನ್ನು ಬಿಡಿಸಿ ಪರಮಸುಖ ತೋರುವ, ಅಷ್ಟೇ ಏಕೆ, ಭಗವಂತನನ್ನೇ ಕರಗತ ಮಾಡಿಕೊಡುವ ಶಕ್ತಿ ಗುರುವಿಗಿದೆ ಎನ್ನುತ್ತಾಳೆ ಅಕ್ಕಮಹಾದೇವಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.