ಸಾಹಿತ್ಯ ಸಮ್ಮೇಳನದಲ್ಲಿ ಗೋಷ್ಠಿಯ ಅಧ್ಯಕ್ಷತೆ ವಹಿಸಲು ಹೋಗುವಾಗ ಪೆಕರನಿಗಿದ್ದ ಉತ್ಸಾಹ, ಆ ನಂತರ ಕಿಂಚಿತ್ತೂ ಉಳಿದಿರಲಿಲ್ಲ. ವೇದಿಕೆಯಿಂದ ಕೆಳಗಿಳಿಯುವಾಗ ಕರೆಂಟ್ ಹೊಡೆದ ಕೋಳಿಯಂತಾಗಿದ್ದ ಪೆಕರ, ‘ನಾನಿನ್ನು ಯಾವ ಸಾಹಿತ್ಯ ಸಮ್ಮೇಳನಕ್ಕೂ ಹೋಗಲ್ಲ, ಭಾಷಣ ಮಾಡಲ್ಲ’ ಎಂದು ಬಡಬಡಿಸುತ್ತಿದ್ದುದನ್ನು ಕಂಡು ಸ್ನೇಹಿತರು ಅವನನ್ನು ಸಮಾಧಾನ ಮಾಡಲು ಯತ್ನಿಸಿದರು. ‘ಅಂಥಾದ್ದು ಏನಾಯ್ತು ಮಾರಾಯ?’ ಎಂದು ಸ್ನೇಹಿತ ಪ್ರಶ್ನಿಸಿದ.
‘ಗೋಷ್ಠಿ ಆರಂಭವಾದದ್ದೇ ತಡ, ನಾನು ವೇದಿಕೆಗೆ ಬರುವುದಕ್ಕೆ ಮುಂಚೆಯೇ ಕೈಗೊಂದು ಚೀಟಿ ಬಂತು. ಸಂಭಾವನೆ, ಟಿಎ, ಡಿಎ ಇಷ್ಟು ಬೇಗ ಕೊಟ್ಟರಲ್ಲ ಅಂತ ಬಹಳ ಖುಷಿಯಾಗಿ ನೋಡಿದರೆ, ನಿಮ್ಮ ಭಾಷಣದ ಅವಧಿ ಮುಗಿಯಿತು ಎಂಬ ಒಕ್ಕಣೆ ಇತ್ತು. ಆದರೂ ಸಾವರಿಸಿಕೊಂಡು ಮೈಕ್ ಹಿಡಿದುಕೊಂಡರೆ ಬೇಗ ಮುಗಿಸಿ, ಬೇಗ ಮುಗಿಸಿ ಎಂದು ಅಂಗಿ ಹಿಡಿದೆಳೆದು ಅವಮಾನ ಮಾಡಿಬಿಟ್ಟರಲ್ಲಾ’- ಪೆಕರ ಗೊಳೋ ಎಂದು ಅತ್ತ.
‘ಸಮ್ಮೇಳನ ಎಂದರೆ ಜಾತ್ರೆ ಮಾರಾಯ, ಅದಕ್ಯಾಕೆ ಗೋಳಾಡ್ತೀಯ? ಅಲ್ಲಿ ಭಾಷಣ ವೀರರೇ ಇದ್ದುದು ನಿನಗೆ ಮರೆತೋಯ್ತಾ? ಅಯ್ಯ ಅವರು ಸಖತ್ತಾಗಿ ಕವಿವಾಣಿಗಳನ್ನು ಉದುರಿಸುತ್ತಾ ಭಾಷಣ ಮಾಡಿದರೆ, ಮಾದೇವಪ್ಪನವರೂ ನಾನೇನೂ ಕಮ್ಮಿಯಲ್ಲ ಅಂತ ಸಾಹಿತ್ಯ ಚರಿತ್ರೆಯನ್ನೇ ಹೇಳಲಿಲ್ಲವೇ? ಅವರಿಗೆ ಚೀಟಿ ಕೊಡದೆ, ಸಾಹಿತ್ಯ ಸರಸ್ವತಿಯ ಸುಪುತ್ರನಾದ ನಿನಗೆ ಬೇಗ ಮುಗಿಸಿ ಎಂದು ಹೇಳಿದ್ದು ತಪ್ಪು. ಹೋಗ್ಲಿ ಬಿಡಪ್ಪ, ಸಾಹಿತ್ಯ ಇಲ್ಲಿ ಯಾರಿಗೆ ಬೇಕಾಗಿದೆ.
ಸಮ್ಮೇಳನ ಅಂದ್ರೆ ‘ಹಾಲೋಗರ’ ಉಂಡಂತೆ. ಶತಮಾನೋತ್ಸವಕ್ಕೆ ಇನ್ನೂ ಒಂದು ವರ್ಷ ಇರುವಂತೆಯೇ ಅನುದಾನ ಕೊಡಿ, ದುಡ್ಡು ಕೊಡಿ ಅಂತ ದುಂಬಾಲು ಬಿದ್ದವರಿಗೆ ಅಯ್ಯ ಅವರು ಸರಿಯಾಗಿಯೇ ಚಾಟಿ ಏಟು ಕೊಟ್ಟದ್ದು ಅದಕ್ಕೇ ಅಲ್ಲವೇ? ನೀವ್ ಬೇಜಾರು ಮಾಡ್ಕೋಬೇಡಿ ಸುಮ್ನಿರಿ’ ಎಂದು ಸ್ನೇಹಿತರು ಪೆಕರನನ್ನು ಸಮಾಧಾನಗೊಳಿಸಿದರು.
‘ಭಾಷಣ ಬೇಡ, ಮೂರೇ ನಿಮಿಷದಲ್ಲಿ ಮುಗಿಸ್ತೀನಿ ಅಂತ, ನನ್ನದೇ ಒಂದು ಕವಿತೆ ವಾಚನ ಮಾಡಿಬಿಟ್ಟೆ. ಅದನ್ನೂ ಅರ್ಥಮಾಡಿಕೊಳ್ಳದ ಜನ ವೇದಿಕೆ ಮೇಲೇರಿ ಬಂದು ಪ್ರತಿಭಟನೆ ಮಾಡಿಬಿಟ್ಟರು. ಇದು ನನ್ನ ಹೃದಯ ಘಾಸಿಗೊಳಿಸಿದೆ’ ಎಂದು ಪೆಕರ ನಿಟ್ಟುಸಿರುಬಿಟ್ಟ. ‘ಖಡ್ಗವಾಗಲಿ ಕಾವ್ಯ ಅನ್ನುವ ಘೋಷವಾಕ್ಯ ಕೇಳಿಲ್ಲವೇ? ನಿನ್ನದು ಹರಿತವಾದ ಕಾವ್ಯರಚನೆ. ಜನರನ್ನು ನಿನ್ನ ಕಾವ್ಯ ಕೆರಳಿಸಿದೆ ಅಂದರೆ, ಅದು ನಿಜವಾದ ಬಂಡಾಯ ಕಾವ್ಯ.
ಇದನ್ನೇ ಬಂಡವಾಳ ಮಾಡಿಕೊಂಡು ನೀನು ಮುಂದೆ ಆಮ್ ಆದ್ಮಿ ತರ ಪಕ್ಷ ಕಟ್ಟಿ, ಕಾಂಗ್ರೆಸ್ ಬೆಂಬಲ ಪಡೆದು ಸಿಎಂ ಆಗಬಹುದು’ ಎಂದು ಪೆಕರನನ್ನು ಕಿಚಾಯಿಸಿದ ಸ್ನೇಹಿತರು, ‘ನೀನು ಓದಿದ ಕಾವ್ಯವನ್ನು ಮತ್ತೊಮ್ಮೆ ಮಂಡಿಸಪ್ಪ, ಓಓಡಿ ಪ್ರತಿ ಪಡೆಯಲು ಮುಗಿಬಿದ್ದವರ ಗದ್ದಲದಲ್ಲಿ ನಿನ್ನ ಕಾವ್ಯವಾಚನ ನಮಗೆ ಕೇಳಲೇ ಇಲ್ಲ’ ಎಂದರು. ಪೆಕರ ಉತ್ಸಾಹದಿಂದ ಸಾಹಿತ್ಯ ಸಮ್ಮೇ-ಳನದಲ್ಲಿ ಪ್ರಸ್ತುತ ಪಡಿಸಿದ ಕವಿತೆಯನ್ನು ಬಿಚ್ಚಿದ.
ಡೊಂಕುಬಾಲದ ನಾಯಕರೆ
ನೀವೆಲ್ಲಿ ಲೂಟಿಯ ಮಾಡಿದಿರಿ
ಕುಲಕುಲವೆಂದು ಬಡಿದಾಡದಿರಿ
ಸೌಧವನು ಒಡೆದು ಕಟ್ಟದಿರಿ
ಪಶ್ಚಿಮಘಟ್ಟದ ಕಡೆ ನೋಡುತಿರಿ
ಕಸ್ತೂರಿ ಪರಿಮಳವ ರಕ್ಷಿಸಿರಿ
ನೂರುಮರ, ನೂರು ಸ್ವರ, ಎಲ್ಲಾ ಒಂದೇ ಥರ!
ಸ್ನೇಹಿತರೆಲ್ಲಾ ಚಪ್ಪಾಳೆತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು. ‘ಸಹೃದಯರಾದ ನೀವೆಲ್ಲಾ ಕರತಾಡನ ಮಾಡಿ ಮೆಚ್ಚಿಕೊಂಡಿರಿ. ಆದರೆ ಕೆಲವು ಪುಢಾರಿಗಳು ವೇದಿಕೆ ಮೇಲೆ ಬಂದು ಕವನದ ಮೊದಲ ಎರಡು ಸಾಲುಗಳನ್ನು ಹಿಂತೆಗೆದುಕೊಳ್ಳಿ, ಇಲ್ಲದಿದ್ದರೆ ಜಿಲ್ಲೆ ಬಂದ್ ಮಾಡುತ್ತೇವೆ ಎಂದು ಬೆದರಿಸಿದರು ಮಾರಾಯ. ಇದು ಸಾಹಿತ್ಯ ಲೋಕಕ್ಕೇ ಅವಮಾನವಲ್ಲವೇ?’ ಪೆಕರ ಗೋಳಾಡಿದ.
‘ಮೊದಲ ಎರಡು ಸಾಲಿನಲ್ಲಿ ಏನು ಕಂಡಿತಂತೆ? ಅವರಿಗೂ ಅದಕ್ಕೂ ಏನು ಸಂಬಂಧ?’ ಸ್ನೇಹಿತರು ಪ್ರಶ್ನಿಸಿದರು. ‘ಡೊಂಕುಬಾಲದ ನಾಯಕರೆ ಎಂದು ಬರೆದಿರುವುದು ನಮ್ಮನ್ನುದ್ದೇಶಿಸಿಯೇ ಎಂದು ರಾಜಕಾರಣಿಗಳು ತಿಳಿದುಕೊಂಡು ಬಿಟ್ಟಿದ್ದಾರೆ. ‘ನೀವೆಲ್ಲಿ ಲೂಟಿಯ ಮಾಡಿದಿರಿ’ ಎನ್ನುವುದು ಅವರಿಗೆ ಅವಮಾನ ಮಾಡುವ ಸಾಲುಗಳಂತೆ.
ಗಣಿ, ಮರಳು, ಭೂಮಿ, ಕಾಡು, ಶ್ರೀಸಾಮಾನ್ಯನ ಹಣ ಹೀಗೆ ಎಲ್ಲವನ್ನೂ ಲೂಟಿ ಮಾಡಿದವರೆಲ್ಲಾ ಒಮ್ಮೆಲೇ ವೇದಿಕೆಗೆ ಬಂದು, ನನ್ನನ್ನು ಘೇರಾವ್ ಮಾಡಿ, ಕವನದ ಎರಡು ಸಾಲುಗಳನ್ನು ವಾಪಸ್ ಪಡೆಯದಿದ್ದರೆ ಸಮ್ಮೇಳನಕ್ಕೇ ಬಹಿಷ್ಕಾರ ಹಾಕುತ್ತೇವೆ ಎಂದು ಬೆದರಿಸಿದರು ಮಾರಾಯರೇ. ನಮ್ಮ ಹಣದಿಂದ ಸಮ್ಮೇಳನ ಮಾಡಿ ನಮಗೇ ಬೈತೀರಾ? ಎಂದು ಹಿಗ್ಗಾಮುಗ್ಗಾ ಕೂಗಾಡಿದರು’ ಪೆಕರ ತನಗಾದ ದುರವಸ್ಥೆಯನ್ನ ಹೇಳಿಕೊಂಡ.
‘ಅದಕ್ಕೆ ನೀವೇಕೆ ಹೆದರಿಕೊಳ್ಳಬೇಕು. ಅಯ್ಯ ಅವರ ಆಸ್ಥಾನ ಸಾಹಿತಿಗಳೆಲ್ಲಾ ನಿಮ್ಮ ಬೆಂಬಲಕ್ಕೆ ಬಂದ್ರಲ್ಲಾ ಬಿಡಿ’ ಎಂದು ಸ್ನೇಹಿತರು ಸಮಾಧಾನ ಮಾಡಲು ಯತ್ನಿಸಿದರು. ‘ಅಯ್ಯೋ ರಾಮ ಅವರ ಕತೆ ಏನ್ ಹೇಳ್ತೀರಿ? ಅವರೂ ನನ್ನ ಮೇಲೆ ಸಿಟ್ಟಿಗೆದ್ದಿದ್ದಾರೆ. ಜ್ಞಾನಪೀಠ, ಅಕಾಡೆಮಿ ಸ್ಥಾನಕ್ಕೆ ಕಾದು ಕುಳಿತಿರುವ ಬಕಪಕ್ಷಿ ಸಾಹಿತಿಗಳೇ ಬಾಯಿಬಿಡಿ ಎಂದು ನಾನು ಹೇಳಿದ್ದು ಅವರನ್ನು ಕುರಿತಂತೆ ಎಂದು ತಪ್ಪಾಗಿ ತಿಳಿದುಕೊಂಡು ರೇಗ್ತಾ ಇದ್ದಾರೆ’ ಎಂದು ಪೆಕರ ಗೋಳು ತೋಡಿಕೊಂಡ.
‘ಇರಲಿ ಬಿಡಿ, ಇದ್ದದ್ದನ್ನು ಇದ್ದಂಗೆ ಹೇಳಿದರೆ ಎದ್ಬಂದ್ ಎದೇಗೊದ್ದ ಎನ್ನುವಂತಾಯಿತು ಕತೆ’ ಎಂದು ಸ್ನೇಹಿತರು ಹೇಳಿದರು. ‘ಪುಢಾರಿಗಳು ಘೇರಾವ್ ಹಾಕಿಹೋದ ಮೇಲೆ ಬಜರಂಗಿಗಳು ಬಂದು ಮುತ್ತಿಗೆ ಹಾಕಿ ಕವನದ ಮೂರು ನಾಲ್ಕನೇ ಸಾಲನ್ನು ವಾಪಸ್ ಪಡೆಯಬೇಕು ಎಂದು ಬಹಳ ಗಲಾಟೆ ಮಾಡಿದರು.’- ಪೆಕರನ ಗೋಳಾಟಕ್ಕೆ ಕೊನೆಯೇ ಇಲ್ಲದಂತಾಯಿತು.
‘ಬಜರಂಗಿಗಳದ್ದು ಏನು ತಕರಾರು?’ ‘ಸೌಧವನ್ನು ಒಡೆದು ಕಟ್ಟದಿರಿ ಅನ್ನುವುದು ವಿಧಾನಸೌಧದಲ್ಲಿ ೩೪೦ ನಂಬರಿನ ಕೊಠಡಿ ಗೋಡೆಯನ್ನು ಕೆಡವಿದ್ದನ್ನು ಗೇಲಿಮಾಡಿದ ಸಾಲು. ಆದ್ದರಿಂದ ಸಚಿವರಿಗೆ ಅವಮಾನವಾಗಿದೆ. ಕೂಡಲೇ ಈ ಸಾಲನ್ನು ವಾಪಸ್ ಪಡೆಯಿರಿ ಎಂದು ಬಜರಂಗಿ ಸಹಚರರು ಘೇರಾವ್ ಮಾಡಿ ಪ್ರತಿಭಟಿಸಿದರು’ ಎಂದು ಪೆಕರ ಮತ್ತೊಂದು ಘಟನೆಯ ವಿವರ ಕೊಟ್ಟ.
‘ಏನಪ್ಪಾ ಇದು ರಾಜಕಾರಣಿಗಳ ಆರ್ಭಟ. ಹನುಮಂತಯ್ಯ ಅವರಿಂದ ಆರಂಭಿಸಿ ಆಂಜನೇಯವರೆಗೆ ನಡೆದಾಡಿದ ಸೌಧದಲ್ಲಿ ಈ ರೀತಿನೂ ನಡೆಯುತ್ತಾ, ತಪ್ಪು ತಪ್ಪು’ ಎಂದು ಸ್ನೇಹಿತರು ಕನಿಕರ ವ್ಯಕ್ತಪಡಿಸಿದರು. ‘ಅಯ್ಯೋ ಅದೇನ್ ಹೇಳ್ತೀರಿ? ‘ಕಸ್ತೂರಿ ಪರಿಮಳವ ರಕ್ಷಿಸಿರಿ..’ ಎಂಬ ಸಾಲುಗಳನ್ನು ತೆಗೆಯಬೇಕೆಂದು ಪರಿಸರವಾದಿಗಳು ಬಂದು ಗಲಭೆ ಎಬ್ಬಿಸಿದರು.’ ಪೆಕರ ಮತ್ತೊಂದು ಘಟನೆಯನ್ನು ಹೊರಗಿಟ್ಟ.
‘ನೀವು ಈ ರೀತಿ ಕೆರಳಿಸುವ ಸಾಹಿತ್ಯ ಬರೆದಿರುವುದು ನಮಗೆಲ್ಲಾ ಹೆಮ್ಮೆಯ ವಿಷಯ. ಇದೇ ರೀತಿ ನೀವು ಮುಂದೆಯೂ ಬರೆಯಿರಿ. ರಾಷ್ಟ್ರಕವಿ ಎಂಬ ಬಿರುದು ಕೊಡಿಸೋಣ’ ಎಂದು ಸ್ನೇಹಿತರು ಗೇಲಿ ಮಾಡಿದರು. ‘ಇನ್ನೊಂದು ಘಟನೆ ಮರೆತೆ. ‘ನೂರು ಮರ, ನೂರು ಸ್ವರ, ಎಲ್ಲಾ ಒಂದೇ ಥರ’ ಎಂದು ಹೇಳಿದ್ದು ಕೇಳಿ ಯುವಕವಿ ಮಿತ್ರರೆಲ್ಲಾ ನನ್ನ ಮೇಲೆ ಎಗರಿ ಬಿದ್ದರು. ನಾವು ಡಿಫರೆಂಟ್, ಡಿಫರೆಂಟ್ ಕವನ ಓದಿದ್ದೇವೆ.
ಎಲ್ಲಾ ಒಂದೇ ಥರಾ..ಎಂದು ನೀವು ಷರಾ ಬರೆದರೆ ನಮ್ಮ ಮುಂದಿನ ಭವಿಷ್ಯದ ಗತಿ ಏನು? ನಿಮ್ಮ ಮಾತು ವಾಪಸ್ ಪಡೆಯಿರಿ ಎಂದು ಕವಿವರ್ಯರೆಲ್ಲಾ ಮುಗಿಬಿದ್ದರು. ನಾನು, ತಕರಾರು ಏಕೆ ಎಂದು ಆಯ್ತು ವಾಪಸ್ ಪಡೆಯೋಣ ಎಂದೆ. ಎಲ್ಲ ಪ್ರತಿಭಟನೆಗಳನ್ನೂ ಯಶಸ್ವಿಯಾಗಿ ನಿಭಾಯಿಸಿ ಬಿಟ್ಟೆ’ - ಪೆಕರ ಹೆಮ್ಮೆಯಿಂದ ಹೇಳಿಕೊಂಡ.
‘ಕವನದ ಎಲ್ಲ ಸಾಲುಗಳನ್ನೂ ವಾಪಸ್ ತೆಗೆದುಕೊಂಡ ಮೇಲೆ ಅಲ್ಲಿ ಉಳಿದದ್ದಾದರೂ ಏನು?! ಇಂಥಾ ಅವಮಾನ ಸಹಿಸಿಕೊಂಡು ಹೇಗ್ರಿ ಮೂರು ದಿನ ಕುಳಿತಿದ್ರಿ? ಬಹಿಷ್ಕಾರ ಹಾಕಿ ನೀವೇ ಎದ್ದುಬಂದು ಬಿಡಬೇಕಿತ್ತು’ ಎಂದು ಸ್ನೇಹಿತರು ಆಕ್ರೋಶ ವ್ಯಕ್ತ ಪಡಿಸಿದರು. ‘ನಾನು ಮತ್ತೆ ವಿವಾದ ಕೆದಕಲು ಇಷ್ಟಪಡುವುದಿಲ್ಲ.
ಆ ಮೂರು ದಿನ ಕೋಟಿ ಕನ್ನಡಿಗರು ಹರಿಸಿದ ಪ್ರೀತಿಯ ಹೊಳೆಯಲ್ಲಿ ನನ್ನೆಲ್ಲಾ ಕಹಿಗಳು ಮೇಲೇಳದಂತೆ ಮುಳುಗಿಹೋದವು, ಒಬ್ಬ ಸಾಹಿತಿಗೆ ಇದಕ್ಕಿಂತ ಇನ್ನೇನು ಬೇಕು’ ಎಂದು ಪೆಕರ ಸಮಾಧಾನಚಿತ್ತದಿಂದ ಉತ್ತರಿಸಿ ಎಲ್ಲ ವಿವಾದಗಳಿಗೆ ಸಮಾಧಾನದ ತೆರೆ ಎಳೆದ.
-ಜಿಎಮ್ಮಾರ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.