ADVERTISEMENT

ಸಾಹಿತ್ಯ ಪುರವಣಿ ಪ್ರತಿಕ್ರಿಯೆಗಳು

​ಪ್ರಜಾವಾಣಿ ವಾರ್ತೆ
Published 4 ಮೇ 2013, 19:59 IST
Last Updated 4 ಮೇ 2013, 19:59 IST

ಕನ್ನಡ ಸಾಹಿತ್ಯ ನೆಲೆಯಲ್ಲಿ ಚಳವಳಿಗಳ ಒಳನೋಟಗಳನ್ನು ಸೂಕ್ಷ್ಮವಾಗಿ ಅಕ್ಷರ ರೂಪವಾಗಿಸಿದ, ರಹಮತ್ ತರೀಕೆರೆಯವರ ಲೇಖನ, ಎರಡು ದೇಸಿ ಪದ್ಯಗಳ ವಿಶ್ಲೇಷಣೆ ಮಾಡಿರುವ ರಾ. ಗೌ. ಹೀಗೆ ಪ್ರತಿ ಪುಟವೂ (ಸಾಹಿತ್ಯ ಪುರವಣಿ, ಏಪ್ರಿಲ್ 7) ಸಾಹಿತ್ಯದ ಸಂತುಷ್ಟ ಭೋಜನ.
- ಸುಶೀಲ ಸದಾಶಿವಯ್ಯ, ತುಮಕೂರು

`ಕವಿರಾಜ ಮಾರ್ಗ'ವನ್ನು ರಾಜಕೀಯ ಪಠ್ಯವಾಗಿಯೂ ಪರಿಭಾವಿಸುವ ಅಗತ್ಯವಿದೆ' ಎಂಬ ನರಹಳ್ಳಿಯವರ ಮಾತುಗಳಿಗೂ, `ಇಂದಿನ ಚಾರಿತ್ರಿಕ ಸನ್ನಿವೇಶವೂ ನಿಜವಾಗಿಯೂ ಹೊಸ ಸಾಮಾಜಿಕ ರಾಜಕೀಯ ಸಾಂಸ್ಕೃತಿಕ ಚಳವಳಿ ಹುಟ್ಟಿಗೆ ತಕ್ಕನಾಗಿದೆ' ಎಂಬ ರಹಮತ್ ತರೀಕೆರೆಯವರ ಮಾತುಗಳಿಗೂ ವ್ಯತ್ಯಾಸವಿಲ್ಲ. ಒಟ್ಟಿನಲ್ಲಿ ಕವಿ (ಸಮುದಾಯದ ತಲ್ಲಣಗಳ ಸಂವೇದನೆ) ಮತ್ತು ಪ್ರಭುತ್ವ (ಸಂವೇದನೆಗಳ ಚಿಕಿತ್ಸಕ) ಪರಸ್ಪರ ಅನುಸಂಧಾನದ ಹಾದಿಯಲ್ಲಿ ಸಾಗುವ ಅನಿವಾರ್ಯತೆ ಇದೆ. ಆದರೆ ಮನಸ್ಸು ಮತ್ತು ಮತಗಳನ್ನು ಛಿದ್ರಗೊಳಿಸಿಯೇ ತನ್ನ ಬುಡವನ್ನು ಗಟ್ಟಿಗೊಳಿಸಲು ಹೊರಟಿರುವ ಪ್ರಭುತ್ವ ಕವಿ ಸಂವೇದನೆಯೊಂದಿಗೆ ಅನುಸಂಧಾನ ನಡೆಸುವುದು ಕಷ್ಟ ಸಾಧ್ಯವಾದ ಮಾತೇ ಸರಿ. ಸಮುದಾಯದ ಸಂವೇದನೆಗಳಿಗೆ ತಕ್ಷಣ ಸ್ಪಂದಿಸುವ ಕವಿ ಮನಸ್ಸಿನಲ್ಲೂ ಅಡ್ಡ ಗೋಡೆ ಸೃಷ್ಟಿಯಾಗಿರುವುದರಿಂದ ಸಂಘಟನಾತ್ಮಕ ಚಳವಳಿ ಸಾಧ್ಯವೇ ಎಂಬ ಪ್ರಶ್ನೆ ಮೂಡದಿರದು.
- ಅನಾರ್ಕಲಿ ಸಲೀಂ ಚಿಣ್ಯ, ಶ್ರೀರಂಗಪಟ್ಟಣ

ಸುನಂದಾ ಪ್ರಕಾಶ ಕಡಮೆಯವರು `ಸಾಹಿತ್ಯ ಸಾಂಗತ್ಯ' ಅಂಕಣದಲ್ಲಿ ಗಿರಡ್ಡಿ ಗೋವಿಂದರಾಜರೊಂದಿಗೆ ನಡೆಸಿದ ಸಂದರ್ಶನ ಸಮಯೋಚಿತ. ಅತ್ಯುತ್ತಮ ಸಾಹಿತ್ಯ ಕೃತಿ, ಕಾಲ ಕಾಲಕ್ಕೆ ತಕ್ಕಂತೆ ವಿಮರ್ಶೆಯ, ಭಾಷ್ಯವು ಬದಲಾಗಬೇಕೆಂಬ ಬಯಕೆ ಮತ್ತು ಪುಸ್ತಕಗಳ ಓದು ಕಡಿಮೆಯಾಗುತ್ತಿರುವ ಹಳಹಳಿ - ಮುಂತಾದ ಮಹತ್ವದ ವಿಷಯಗಳನ್ನು ಕುರಿತು ಆಳವಾಗಿ ಸಂದರ್ಶನದಲ್ಲಿ ಚರ್ಚಿಸಲಾಗಿದೆ. ಮಲಯಾಳಂನ ಖ್ಯಾತ ಕವಯಿತ್ರಿ ಸುಗತ ಕುಮಾರಿಯವರ ಹಲವಾರು ಪ್ರಮುಖ ಕವನಗಳನ್ನು ನೀಡಿ, ಜೊತೆಗೆ ಅವರ ಕಾವ್ಯ ಜೀವನದ ಏರಿಳಿತಗಳನ್ನು ಸಮಗ್ರವಾಗಿ ಕೊಡಲಾಗಿದೆ.
- ಮೋಹನ್ ರು. ಹಣಗಿ, ಇಲಕಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.