ADVERTISEMENT

ಮಾರುಕಟ್ಟೆ ಮಾಯಾಲೋಕದ ಮಾಂತ್ರಿಕತೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2018, 9:22 IST
Last Updated 16 ಜೂನ್ 2018, 9:22 IST

ಟೇಸ್ಟ್  ಬಿ, ಹೆಲ್ತ್ ಬಿ; ಮ್ಯಾಗಿ ಮಿಲಿ, ದಿನ್ ಬನ್ ಗಯಾ
ಕುಚ್ ಹೆಲ್ತಿ, ಸಬ್ಜಿ; ಎಕ್ಸ್‌ಟ್ರಾ ಡೆಲಿಷಿಯಸ್
ಹೆಲ್ತ್ ಈಸ್ ಎಂಜಾಯಬಲ್
ಈ ಬಗೆಯ ಘೋಷವಾಕ್ಯಗಳನ್ನು ಅಮಿತಾಭ್ ಬಚ್ಚನ್, ಮಾಧುರಿ ದೀಕ್ಷಿತ್ ಅಥವಾ ಪ್ರೀತಿ ಝಿಂಟಾ ಅವರಂತಹ ಖ್ಯಾತನಾಮರು ಹೇಳಿದಲ್ಲಿ ಅದಕ್ಕೆ ಒದಗುವ ಖದರ್ ಬೇರೆಯದು. ಗ್ರಾಹಕರನ್ನು ಆಕರ್ಷಿಸುವ ಸುಲಭ ವಿಧಾನ ಇದು. ಈ ತಾರೆಯರು ಜಾಹೀರಾತಿಗೊಂದು ಚಮಕ್ ತರುತ್ತಾರೆ ಎಂಬುದು ಸುಳ್ಳಲ್ಲ.

ಬ್ರಾಂಡ್ ಅಥವಾ ಉತ್ಪನ್ನವನ್ನು ಖ್ಯಾತನಾಮರು ಪ್ರಚಾರ ಮಾಡಿದಾಗ ಮಾರಾಟದ ಪ್ರಮಾಣ ಹೆಚ್ಚಳವಾಗುತ್ತದೆ. ಕಂಪೆನಿಗೂ ಅನುಕೂಲ, ಖ್ಯಾತನಾಮರಿಗೂ ಅನುಕೂಲ. ಖ್ಯಾತನಾಮರಿಂದ ಉತ್ಪನ್ನ ಅನುಮೋದನೆಗೊಂಡರೆ ಕಂಪೆನಿಗಳಿಗೆ ಮಾರಾಟ ಅಥವಾ ಪ್ರಚಾರ ಕಾರ್ಯದ ಹೊರೆ ಅರ್ಧದಷ್ಟು ಕಡಿಮೆ ಆಗುತ್ತದೆ. ತಾನೇ ತಾನಾಗಿ ಅಪಾರ ಗ್ರಾಹಕರನ್ನು ಸೆಳೆದುಕೊಳ್ಳುವ ಆಕರ್ಷಣೆ ಇಂತಹ ಜಾಹೀರಾತುಗಳಿಗಿರುತ್ತದೆ. ಮ್ಯಾಗಿ ನೂಡಲ್ಸ್ ಸಹ ಈ ಬಗೆಯ ಪ್ರಚಾರಗಳಿಂದ ಜನರ ಮನ ಗೆದ್ದಿತ್ತು .

ಇದರ ಜೊತೆಗೇ, ಆಧುನಿಕ ಕಾಲದ ಒತ್ತಡಗಳಿಗೆ ಭಾರತ ತೆರೆದುಕೊಳ್ಳುತ್ತಾ ಸಾಗಿದಂತೆ ‘ಫಾಸ್ಟ್  ಫುಡ್’ ಮ್ಯಾಗಿ  ನೂಡಲ್ಸ್ ಎನ್ನುವುದು  ಬದುಕಿನ ಶೈಲಿಯಾಯಿತು. ಎರಡು ನಿಮಿಷದಲ್ಲಿ ಫಟಾಫಟ್ ತಯಾರಾಗುವ ಮ್ಯಾಗಿ ನೂಡಲ್ಸ್, ಧಾವಂತದ ಆಧುನಿಕ ಬದುಕಿನ ಅನಿವಾರ್ಯ ಭಾಗವಾಗಿಹೋಯಿತು. ಅಮ್ಮನ ಅಡುಗೆ ಪುಸ್ತಕದ ಸಹಾಯವಿಲ್ಲದೆ ಮಾಡಬಹುದಾದ ಸರಳ ಅಡುಗೆಯಾಗಿ ಇದು ಎಲ್ಲರ ಮನ ಗೆದ್ದ ಬಗೆ ವಿಶೇಷ.

ಹೀಗಾಗಿಯೇ ಮ್ಯಾಗಿ ನೂಡಲ್ಸ್ ವಿವಾದ ಶುರುವಾಗಿ ಅನೇಕ ರಾಜ್ಯಗಳಲ್ಲಿ ಮ್ಯಾಗಿ ನೂಡಲ್ಸ್‌ಗೆ ನಿಷೇಧ ಹೇರಿದಾಗ, ‘ಅಡುಗೆ ಮಾಡಲು ಬರುತ್ತದೆ’ ಎಂಬ ಮಾಹಿತಿಯನ್ನು ಅನೇಕ ಮ್ಯಾಟ್ರಿಮೋನಿಯಲ್  ಜಾಹೀರಾತುಗಳಲ್ಲಿ ತೆಗೆದುಹಾಕಲಾಗಿದೆ ಎಂಬ ಜೋಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿತ್ತು. ಆಟವಾಡಿ ಬಂದ ಮಕ್ಕಳು, ಹಾಸ್ಟೆಲ್‌ನಲ್ಲಿರುವ ವಿದ್ಯಾರ್ಥಿ ಅಥವಾ ಬೇರೆ ಊರಿನಲ್ಲಿರುವ  ಉದ್ಯೋಗಿಗಳಿಗೆ  ಕ್ಷಣ ಮಾತ್ರದಲ್ಲಿ ಹಸಿವು ಇಂಗಿಸುತ್ತಿದ್ದ ಉತ್ಪನ್ನ ಇದು. ಮ್ಯಾಗಿ ಎನ್ನುವುದು ಬ್ರಾಂಡ್ ಎನ್ನುವುದಕ್ಕಿಂತ ದಿನ ನಿತ್ಯದ ಬದುಕಿನ ಭಾಗವಾಯಿತು.

ಈಗ ರಾಷ್ಟ್ರದ ವಿವಿಧೆಡೆ ನಡೆಸಲಾದ ಪರೀಕ್ಷೆಗಳಲ್ಲಿ ಮ್ಯಾಗಿ ನೂಡಲ್ಸ್‌ನಲ್ಲಿ ಸೀಸ ಹಾಗೂ  ಎಂಎಸ್‌ಜಿ (ಮಾನೊ ಸೋಡಿಯಮ್ ಗ್ಲುಟಮೇಟ್) ಪ್ರಮಾಣ ಅಂಗೀಕೃತ ಮಟ್ಟಕ್ಕಿಂತ ಹೆಚ್ಚಿರುವುದು ಕಂಡುಬಂದಿದ್ದರಿಂದ ಇದು  ಆರೋಗ್ಯಕ್ಕೆ ಹಾನಿಕರ ಎಂದು ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮ್ಯಾಗಿಗೆ ನಿಷೇಧ ಹೇರಲಾಗಿದೆ. ಭಾರತದ ಆಹಾರ  ಸುರಕ್ಷೆ ಮತ್ತು  ಗುಣಮಟ್ಟ ಪ್ರಾಧಿಕಾರ ಆದೇಶಿಸಿರುವ ಎಲ್ಲಾ ಪರೀಕ್ಷೆಗಳ ಫಲಿತಾಂಶಗಳು  ಹೊರಬಿದ್ದಾಗ ಪೂರ್ಣ ಪ್ರಮಾಣದ ಚಿತ್ರಣ ಹೊರಬೀಳಲಿದೆ.

‌ಭಾರತದಲ್ಲಿ  ಗ್ರಾಹಕ ರಕ್ಷಣೆ ಕಾಯಿದೆ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯಿದೆಯಂತಹ ಕಾನೂನುಗಳು ಸುಳ್ಳು  ಪ್ರತಿಪಾದನೆ ಹಾಗೂ ಜಾಹೀರಾತುಗಳ ವಿರುದ್ಧ ರಕ್ಷಣೆ ನೀಡುತ್ತವೆ. ಈ ಪ್ರಕಾರ, ಖ್ಯಾತನಾಮರೂ ಕಾನೂನು ಪ್ರಕ್ರಿಯೆಗೆ ಒಳಪಡಬಹುದು. ಸೌಂದರ್ಯವರ್ಧಕಗಳು ಹಾಗೂ ತ್ವಚೆ ಬಣ್ಣ ತಿಳಿಯಾಗಿಸುವ ಜಾಹೀರಾತುಗಳಿಗೆ  ಖ್ಯಾತನಾಮರ ಅನುಮೋದನೆ ಕುರಿತಂತೆ ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ವಾಗ್ವಾದಗಳು, ಚರ್ಚೆಗಳು ನಡೆದಿವೆ. ಆದರೆ ಆಹಾರ ವಸ್ತುಗಳ ಕುರಿತಾದ ಜಾಹೀರಾತುಗಳ ಬಗ್ಗೆ ಅಷ್ಟು ಚರ್ಚೆಗಳು ನಡೆದಿಲ್ಲ. ಈಗ, ಮ್ಯಾಗಿ ಉತ್ಪನ್ನಗಳಿಗೆ ಅನುಮೋದನೆ ನೀಡಿದ ಖ್ಯಾತನಾಮರನ್ನು ಕಾನೂನು ಪ್ರಕ್ರಿಯೆಗೆ ಸಿಲುಕಿಸುವ ವಿಚಾರ ಚರ್ಚೆಗೆ ಒಳಪಟ್ಟಿದೆ.

ಮ್ಯಾಗಿ ಜಾಹೀರಾತುಗಳು ತಪ್ಪು ದಾರಿಗೆಳೆಯುವಂತಿದ್ದರೆ ಪ್ರಚಾರ ರಾಯಭಾರಿಗಳಾಗಿದ್ದವರ ಮೇಲೂ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಈಗಿನ ಹಾಗೂ ಹಿಂದಿನ ಮ್ಯಾಗಿ ನೂಡಲ್ಸ್  ಪ್ರಚಾರ ರಾಯಭಾರಿಗಳಾಗಿದ್ದ ಅಮಿತಾಭ್ ಬಚ್ಚನ್, ಮಾಧುರಿ ದೀಕ್ಷಿತ್ ಹಾಗೂ ಪ್ರೀತಿ ಝಿಂಟಾ  ಅವರನ್ನು ಈ ವಿಚಾರದಲ್ಲಿ ಈಗಾಗಲೇ ಕೋರ್ಟ್‌ಗೆ ಎಳೆಯಲಾಗಿದೆ.  ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಕಾಯಿದೆಯ (ಎಫ್‌ಎಸ್‌ ಎಸ್ಎಐ )  ಸೆಕ್ಷನ್ 24 ಅನ್ನು  ಮ್ಯಾಗಿ ಪ್ರಚಾರ ರಾಯಭಾರಿಗಳು ಉಲ್ಲಂಘಿಸಿದ್ದಾರೆ ಎಂಬುದು  ಆಲ್ ಇಂಡಿಯಾ ಟ್ರೇಡರ್ಸ್ ಕಾನ್ಫೆಡರೇಷನ್ (ಸಿಎಐಟಿ) ಆರೋಪ. ಈ   ನಿಯಮಾವಳಿ ಹಾಗೂ ನಿಯಂತ್ರಣಗಳ ಅಂಶಗಳಿಗೆ ವ್ಯತಿರಿಕ್ತವಾಗಿರುವ ಅಥವಾ ತಪ್ಪುದಾರಿಗೆಳೆಯುವಂತಹ  ಅಥವಾ ವಂಚಿಸುವಂತಹ ಆಹಾರ ಕುರಿತ ಜಾಹೀರಾತಿನ ಮೇಲೆ ಎಫ್ಎಸ್‌ಎಸ್‌ಎಐ ಕಾಯಿದೆಯ ಸೆಕ್ಷನ್ 24 ನಿಯಂತ್ರಣ ಹೇರುತ್ತದೆ.

ಉತ್ಪನ್ನಗಳ ಕುರಿತಾದ ಪ್ರತಿಪಾದನೆ ಸರಿ ಇದ್ದಲ್ಲಿ ಅಲ್ಲಿ ಯಾವುದೇ ವಿವಾದ ಇಲ್ಲ. ಆದರೆ ಉತ್ಪನ್ನಗಳನ್ನು ಅನುಮೋದಿಸುವ ಭರದಲ್ಲಿ ಯಾರೂ ‘ಉಪ್ಪು, ಖಾರ’ ಸೇರಿಸಬಾರದು  ಅಥವಾ ಉತ್ಪ್ರೇಕ್ಷೆ ಮಾಡಬಾರದು ಎಂದು ಕೇಂದ್ರ ಆಹಾರ ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ. ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಿಸುವ ಆಶಯದಂತೆ ಕಲಬೆರಕೆ ಮುಕ್ತ ಭಾರತ ನಿರ್ಮಿಸುವ ಬಗ್ಗೆ ಸಚಿವರು ವ್ಯಕ್ತಪಡಿಸಿರುವ ಕಾಳಜಿಯೇನೋ ಸರಿಯಾದುದು. ಆದರೆ ನಿಯಂತ್ರಣ ವ್ಯವಸ್ಥೆಯನ್ನು ಹೇಗೆ ಚುರುಕುಗೊಳಿಸುತ್ತಾರೆ ಎಂಬುದು ಮುಖ್ಯ. ಇತ್ತೀಚೆಗೆ  ಮುಂಬೈನ ಮಿನರಲ್ ವಾಟರ್ ಬಾಟಲ್‌ಗಳಲ್ಲಿ ಹೆಚ್ಚಿನ ಬ್ರೋಮೈಡ್ ಕಂಡುಬಂದಿದ್ದೂ  ವರದಿಯಾಗಿತ್ತು.

ಮ್ಯಾಗಿ ನೂಡಲ್ಸ್ ಆರೋಗ್ಯಕರ ಎಂದು ಜಾಹೀರಾತಿನಲ್ಲಿ ಪ್ರತಿಪಾದಿಸಲಾಗಿದೆ. ಆದರೆ ಮನುಷ್ಯರ ಆರೋಗ್ಯಕ್ಕೆ ಹಾನಿಕರವಾದ  ಅಂಶಗಳಿವೆ ಎಂಬುದು ಈಗ ವಿವಾದದ ಕೇಂದ್ರಬಿಂದು.   ಉತ್ಪನ್ನದ ಬಗ್ಗೆ ತಮ್ಮ ಈಗಿನ ಅನಿಸಿಕೆಗಳನ್ನು ಮಾಧುರಿ ದೀಕ್ಷಿತ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ‘ಭಾರತದಲ್ಲಿನ ಬಹುತೇಕರಂತೆ ನಾನೂ ವರ್ಷಗಟ್ಟಲೆ ಮ್ಯಾಗಿ ನೂಡಲ್ಸ್ ಎಂಜಾಯ್ ಮಾಡಿದ್ದೇನೆ. ಇತ್ತೀಚಿನ ವರದಿಗಳ ಬಗ್ಗೆ ಆತಂಕಗೊಂಡು  ನೆಸ್ಲೆ ತಂಡವನ್ನು ಭೇಟಿಯಾಗಿದ್ದೆ. ಗ್ರಾಹಕರಿಗೆ ಮೊದಲ ಸ್ಥಾನ ಕೊಡುವುದೇ ಆದ್ಯತೆಯಾಗಿದ್ದು  ಉನ್ನತ ಗುಣಮಟ್ಟ ಕಾಪಾಡಿಕೊಂಡಿರುವುದಾಗಿ ಹೇಳಿದ್ದಾರೆ.

ಗುಣಮಟ್ಟ ಹಾಗೂ ಸುರಕ್ಷತೆಗಾಗಿ ಕಠಿಣ ಪರೀಕ್ಷೆಗಳಿಗೆ ಬದ್ಧರಾಗಿರುವುದಾಗಿ  ಹೇಳಿದೆ’ ಎಂದು ಮಾಧುರಿ ಹೇಳಿಕೊಂಡಿದ್ದಾರೆ. ‘ಉತ್ಪನ್ನವನ್ನು ಇನ್ನು ಮುಂದೆ ಅನುಮೋದನೆ ಮಾಡುವುದಿಲ್ಲ’  ಎಂದು ತಕ್ಷಣವೇ ಅಮಿತಾಭ್ ಬಚ್ಚನ್ ಅಂತರ ಕಾಯ್ದುಕೊಂಡಿದ್ದಾರೆ. ಹನ್ನೆರಡು  ವರ್ಷಗಳ ಹಿಂದೆ ಮ್ಯಾಗಿ ನೂಡಲ್ಸ್  ಜಾಹೀರಾತಿನಲ್ಲಿ ಪ್ರಚಾರ ರಾಯಭಾರಿಯಾಗಿ ಪಾಲ್ಗೊಂಡಿದ್ದಕ್ಕಾಗಿ  ಕೋರ್ಟ್ ನೋಟಿಸ್ ಪಡೆದಿರುವುದು ಗೊಂದಲಮಯ ಎಂದು ನಟಿ ಪ್ರೀತಿ ಝಿಂಟಾ ಟ್ವೀಟ್ ಮಾಡಿದ್ದಾರೆ .

ಖ್ಯಾತನಾಮರಿಗೆ ನೈತಿಕ ಜವಾಬ್ದಾರಿಯೂ ಇರುತ್ತದೆ ಎಂಬುದನ್ನು ಅರಿಯಬೇಕಾದುದು ಇಲ್ಲಿ ಮುಖ್ಯ. ಸಾರ್ವಜನಿಕ ಕಾಳಜಿಗೆ ಧಕ್ಕೆ ತರುವಂತಹ ವಿಷಯಗಳನ್ನು  ಅನುಮೋದಿಸದಿರುವ ಹೊಣೆಗಾರಿಕೆಯೂ ಇರುತ್ತದೆ.  ಪ್ರಚಾರ ರಾಯಭಾರಿಗಳು  ಮಾತ್ರ ಪ್ರಶ್ನಾರ್ಹರೆ?  ಮಾಧ್ಯಮಗಳಿಲ್ಲದೆ ಯಾವುದೇ ಉತ್ಪನ್ನವನ್ನು ಪ್ರಚಾರ ರಾಯಭಾರಿಗಳು ಪ್ರಚಾರ ಮಾಡುವುದು ಸಾಧ್ಯವೆ?  ಹಾಗಾದಾಗ ಆ ಉತ್ಪನ್ನಗಳನ್ನು ಪ್ರಚಾರ ಮಾಡಿದ ಮಾಧ್ಯಮಗಳಿಗೂ  ಬಾಧ್ಯತೆ ಇರುತ್ತದೆಯೇ ಚುನಾವಣೆ ಸಂದರ್ಭದಲ್ಲಿ ತಮ್ಮ ಪ್ರಣಾಳಿಕೆಗಳಲ್ಲಿ ತಪ್ಪು ದಾರಿಗೆಳೆಯುವ ಜಾಹೀರಾತುಗಳನ್ನು  ನೀಡುವ ರಾಜಕಾರಣಿಗಳನ್ನು ಪ್ರಶ್ನಿಸುವವರು ಯಾರಾದರೂ ಇದ್ದಾರೆಯೆ? ಆ ಭರವಸೆಗಳು ಎಲ್ಲಿ ಈಡೇರುತ್ತವೆ? ಎಂಬೆಲ್ಲಾ ಪ್ರಶ್ನೆಗಳು ಈ ವಾಗ್ವಾದದಲ್ಲಿ ಕೇಳಿಬಂದಿವೆ.

ಉಪ್ಪು, ಸಕ್ಕರೆ ಹಾಗೂ ಕೊಬ್ಬು ತುಂಬಿರುವ ಜಂಕ್ ಆಹಾರ ಉತ್ಪನ್ನಗಳ ಪ್ರಚಾರಕ್ಕೆ ಸಂಬಂಧಿಸಿದಂತೆ  ಭಾರತದಲ್ಲಿ ನಿಯಂತ್ರಣ ಇಲ್ಲ ಎನ್ನುವುದು ನಿಜ. ಎಲ್ಲಾ ಜಂಕ್ ಫುಡ್‌ಗಳೂ ಆರೋಗ್ಯಕರ  ಎಂಬ ಹಣೆಪಟ್ಟಿಯೊಂದಿಗೇ ಬರುವುದು ವಿಪರ್ಯಾಸ.  ಇದಕ್ಕಾಗಿ ಕಾಳು, ತರಕಾರಿ ಚಿತ್ರಗಳನ್ನು ಜಾಹೀರಾತುಗಳಲ್ಲಿ ಚೆನ್ನಾಗಿ ಬಳಸಿಕೊಳ್ಳಲಾಗುತ್ತದೆ.  ‘ಚಿತ್ರತಾರೆಯರು, ಕ್ರೀಡಾ  ಲೋಕದ  ಖ್ಯಾತರು, ಕಾರ್ಟೂನ್‌ಗಳು  ಜಂಕ್‌ಫುಡ್ ಅನುಮೋದಿಸಬಾರದು. ಇದು ಮಕ್ಕಳ ಮೇಲೆ ಅಪಾರ ಪ್ರಭಾವ ಬೀರಿ ವ್ಯತಿರಿಕ್ತ ಅಭಿಪ್ರಾಯವನ್ನು ರೂಢಿಸುವಂತಾಗುತ್ತದೆ.  ಹೀಗಾಗಿ ಜಂಕ್‌ಫುಡ್‌ಗೆ  ಖ್ಯಾತನಾಮರ ಅನುಮೋದನೆಗೆ ನಿಷೇಧ ಹೇರಬೇಕೆಂದು ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್‌ವಿರಾನ್‌ಮೆಂಟ್  (ಸಿಎಸ್‌ಇ) ಕಳೆದ ವರ್ಷ ಕರೆ ನೀಡಿತ್ತು.  ‘ಮಕ್ಕಳನ್ನು ಗುರಿಯಾಗಿರಿಸಿಕೊಂಡ ಜಂಕ್‌ಫುಡ್’ ಎಂಬdrವರದಿಯನ್ನು ಸಿದ್ಧಪಡಿಸಿದ್ದ ಸಿಎಸ್ಇ  ಜಂಕ್‌ಫುಡ್ ಜಾಹೀರಾತುಗಳಿಗೆ ನಿಯಂತ್ರಣ ಕ್ರಮಗಳು ಅಗತ್ಯ ಎಂದು ಹೇಳಿತ್ತು.

ಅಲ್ಲದೆ, ಹೊಸ ಯುಗದ ಮಾರುಕಟ್ಟೆ ಜಾಲಗಳಾದ  ಅಂತರ್ಜಾಲ, ಮೊಬೈಲ್, ಟಿವಿ ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ   ನಿರ್ಬಂಧಗಳನ್ನು  ಹೇರುವುದೂ ಅಗತ್ಯ  ಎಂದೂ ಈ  ವರದಿ ಹೇಳಿತ್ತು. ಈ ವಿಚಾರಗಳು ಗಂಭೀರ ಪರಿಶೀಲನೆಗೊಳಪಡಬೇಕಿವೆ.
ಆಭರಣ ಬ್ರಾಂಡ್ ಒಂದರ  ಜಾಹೀರಾತಿನ ವಿಚಾರದಲ್ಲಿ ಐಶ್ವರ್ಯ ರೈ ಬಚ್ಚನ್ ಸಹ  ಇತ್ತೀಚೆಗೆ ಟೀಕೆಗಳನ್ನು ಎದುರಿಸಬೇಕಾಯಿತು. ಆಭರಣದ ಬ್ರಾಂಡ್‌ವೊಂದಕ್ಕೆ  ಐಶ್ವರ್ಯಾರನ್ನು ಹಳೆಯ ಕಾಲದ ರಾಣಿಯಂತೆ ಮುದ್ರಿತ ಜಾಹೀರಾತುಗಳಲ್ಲಿ ಬಿಂಬಿಸಲಾಗಿತ್ತು.

ಆಕೆಗೆ ಛತ್ರಿ ಹಿಡಿದಿದ್ದು ಕಪ್ಪು ಬಣ್ಣದ ಜೀತದಾಳು ಬಾಲಕ.  ಆ ನಂತರ ಈ ಜಾಹೀರಾತು ಹಿಂದೆ ಪಡೆಯಲಾಯಿತು. ಅಷ್ಟರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿದು ದೊಡ್ಡ ವಿವಾದವಾಗಿತ್ತು. ನಂದಿತಾ ದಾಸ್ ಆರಂಭಿಸಿದ್ದ ‘ಡಾರ್ಕ್ ಈಸ್ ಬ್ಯೂಟಿಫುಲ್’ ಅಭಿಯಾನ ವಿಶ್ವದಾದ್ಯಂತ  ತೀವ್ರತೆ ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ  ತ್ವಚೆ ಬಿಳಿಯಾಗಿಸುವ ಕ್ರೀಮ್‌ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದನ್ನು ಶಾರೂಖ್  ಖಾನ್  ನಿಲ್ಲಿಸಬೇಕೆಂಬ ಆಗ್ರಹವನ್ನೂ  ಈ ಅಭಿಯಾನ ಮುಂದಿಟ್ಟಿತ್ತು. ತೀರಾ ಇತ್ತೀಚೆಗೆ ಕಂಗನಾ ರನೋಟ್  ತ್ವಚೆ  ಕ್ರೀಮ್ ಅನುಮೋದನೆಗೆ ನಿರಾಕರಿಸಿದರು. ಕಪ್ಪಾಗಿರುವುದು ಕೀಳಲ್ಲ.  ತಾನು ನಂಬಿದ ಸಿದ್ಧಾಂತಕ್ಕೆ ಹೊರತಾದ ಸಂದೇಶ ರವಾನಿಸಲು ಕಂಗನಾ ಬಯಸಲಿಲ್ಲ. ಸರಳ ಸತ್ಯ ಇದು.

ಈ ಖ್ಯಾತನಾಮರು ಸ್ವತಃ ತಾವೇ ಬ್ರಾಂಡ್‌ಗಳಾಗಿರುತ್ತಾರೆ. ಬ್ರಾಂಡ್‌ಗೆ ಹೊಸ ಆಯಾಮವನ್ನೇ ನೀಡಬಹುದು ಖ್ಯಾತನಾಮರು. ಬಾಲಿವುಡ್ ನಾಯಕಿಯರು  ಯಾವ ಕಾಲದಿಂದ ಸೌಂದರ್ಯವರ್ಧಕ ಸೋಪುಗಳನ್ನು ಅನುಮೋದಿಸಿಕೊಂಡು ಬರುತ್ತಿದ್ದಾರೆ ಎಂಬುದನ್ನು ನೆನಪಿಸಿಕೊಳ್ಳಿ. ಬಹು ದೊಡ್ಡ ಮಟ್ಟದ ಪ್ರಚಾರಕ್ಕೆ ಸಾಮಾನ್ಯವಾಗಿ ಹಿಂದಿ,  ಕನ್ನಡ ಅಥವಾ ಮತ್ಯಾವುದೇ ಭಾಷೆಯಲ್ಲೂ ಚಿತ್ರರಂಗದ ನಟನಟಿಯರನ್ನೇ ಪ್ರಚಾರ ರಾಯಭಾರಿಗಳಾಗಿ ಬಳಸಲಾಗುತ್ತದೆ. ಕ್ಯಾಡ್‌ಬರಿ ಚಾಕಲೇಟ್‌ಗಳಲ್ಲಿ ಹುಳಗಳ ಕುರಿತಾದ ಹಗರಣದ ನಂತರ ಗ್ರಾಹಕರಲ್ಲಿ ಮರು ವಿಶ್ವಾಸ ತುಂಬಲು ಅಮಿತಾಭ್ ಬಚ್ಚನ್‌ರನ್ನು ಪ್ರಚಾರ ರಾಯಭಾರಿಯಾಗಿ ಬಳಸಲಾಗಿತ್ತು. ಇನ್ನು  ಶುದ್ಧ ನೀರಿನ ಉದ್ಯಮದ ಪ್ರಚಾರ ರಾಯಭಾರಿಯಾಗಿ ಹೇಮಾಮಾಲಿನಿ ಇದ್ದಾರೆ.

ಭಾರತದಲ್ಲಿ  ಮದ್ಯ ಹಾಗೂ  ತಂಬಾಕು ಕಂಪೆನಿಗಳ  ಜಾಹೀರಾತು, ಪ್ರಚಾರ ಹಾಗೂ ಪ್ರಾಯೋಜಕತ್ವಗಳ   ವಿಚಾರದಲ್ಲಿ ಬಲವಾದ ನೀತಿಗಳಿವೆ. ಆದರೆ  ಬದಲಿ (ಸರೊಗೇಟ್) ಜಾಹೀರಾತುಗಳ ಕುರಿತಂತೆ  ಏನೂ ಕ್ರಮ ಇಲ್ಲ.  ಹೀಗಾಗಿ ಬಾಲಿವುಡ್ ಖ್ಯಾತನಾಮರು ವಿಸ್ಕಿ ಹಾಗೂ ತಂಬಾಕು ಉತ್ಪನ್ನಗಳ  ಪರ ಮ್ಯೂಸಿಕ್ ಸಿ.ಡಿ., ಚಹಾ ಅಥವಾ ಏಲಕ್ಕಿ ಹೆಸರಲ್ಲಿ ಪ್ರಚಾರ ಮಾಡುತ್ತಾರೆ. ಇದನ್ನೇ ಮಾರುಕಟ್ಟೆ ಪಂಡಿತರು  ‘ಬ್ರಾಂಡ್ ವಿಸ್ತರಣೆ’   ಎಂದು ಕರೆಯುತ್ತಾರೆ.   ಆದರೆ  ಆರೋಗ್ಯಕ್ಕೆ ಅಪಾಯಕರ ಎಂದು ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ ಲಿಕ್ಕರ್ ಬ್ರಾಂಡ್ ಅನುಮೋದಿಸಲು ತಿರಸ್ಕರಿಸಿದ್ದರು.  ಪಿ. ಗೋಪಿಚಂದ್  ಅವರು ತಂಪುಪಾನೀಯ ಅನುಮೋದಿಸಲು ತಿರಸ್ಕರಿಸಿದ್ದರು.

ನಿಜ ಹೇಳಬೇಕೆಂದರೆ ಜಾಹೀರಾತು ಕಾಲ್ಪನಿಕವಾದುದಲ್ಲ. ಕಟ್ಟುಕಥೆಯಲ್ಲ ಅಥವಾ ಮನರಂಜನೆಯ ಮೂಲವೂ ಅಲ್ಲ. ಇದು ಜನರನ್ನು ತಪ್ಪು ದಾರಿಗೆ ಎಳೆಯ ಬಾರದ ಮಾಹಿತಿ ಎಂಬುದನ್ನು ಅರಿಯಬೇಕು. ಹಾಗೆಯೇ ಮಹಿಳಾ ಹಕ್ಕುಗಳು ಹಾಗೂ ಮಕ್ಕಳ ಹಕ್ಕುಗಳ ಪರ ಖ್ಯಾತನಾಮರು ಪಾಲ್ಗೊಂಡಿದ್ದ ಜಾಹೀರಾತುಗಳು ಸಾಮಾಜಿಕ ಜಾಗೃತಿ ಮೂಡಿಸುವಲ್ಲಿ ಸಹಕಾರಿಯಾಗಿರುವ ಯಶಸ್ಸಿನ ಕಥೆಗಳೂ ಇವೆ. ಪೋಲಿಯೊ ನಿರ್ಮೂಲನೆ ಪ್ರಚಾರಾಂದೋಲನದಲ್ಲಿ ಅಮಿತಾಭ್ ಬಚ್ಚನ್ ಪಾಲ್ಗೊಳ್ಳುವಿಕೆ ಪೋಲಿಯೊ ಲಸಿಕೆ  ಬಗ್ಗೆ  ಜಾಗೃತಿ ಮೂಡಿಸುವಲ್ಲಿ ಅಪಾರ ಯಶಸ್ಸನ್ನು ತಂದಿತ್ತು ಎಂಬುದನ್ನು ಮರೆಯದಿರೋಣ.

editpagefeedback@prajavani.co.in

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.