ಈ ಅಂಕಣ ಬರೆಯುವ ದಿನ (ಅ.26) ಕರ್ನಾಟಕದ ವಿಶಿಷ್ಟ ನಾಯಕರಾದ ಬಂಗಾರಪ್ಪನವರ ಹುಟ್ಟುಹಬ್ಬ. ಬಂಗಾರಪ್ಪನವರು ಇದ್ದಿದ್ದರೆ ಇವತ್ತು ಅವರಿಗೆ ಎಂಬತ್ತೆರಡು ವರ್ಷವಾಗಿರುತ್ತಿತ್ತು. ಬಂಗಾರಪ್ಪನವರಂಥ ರಾಜಕಾರಣಿಗಳ ಬಗ್ಗೆ ಯೋಚಿಸುತ್ತಿದ್ದರೆ ಒಬ್ಬ ವ್ಯಕ್ತಿಯ ಏಳುಬೀಳುಗಳಿಗಿಂತ ಅವರು ಪ್ರತಿನಿಧಿಸಿದ ಹಿಂದುಳಿದ ಜಾತಿಗಳ ರಾಜಕಾರಣದ ಚರಿತ್ರೆಯೇ ಕಣ್ಣಿಗೆ ಬರುತ್ತಿರುತ್ತವೆ. ಈ ಹಿನ್ನೆಲೆಯಲ್ಲಿ ಬಂಗಾರಪ್ಪನವರ ನೆನಪಿನ ಜೊತೆಜೊತೆಗೇ ಕರ್ನಾಟಕದ ಹಿಂದುಳಿದ ಜಾತಿಗಳ ರಾಜಕಾರಣದತ್ತ ಒಂದು ನೋಟ...
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಸಾರೇಕೊಪ್ಪ ಎಂಬ ಹಳ್ಳಿಯಲ್ಲಿ ಹುಟ್ಟಿ ಬೆಳೆದ ಬಂಗಾರಪ್ಪ ನವರಿಗೆ ವಿದ್ಯಾರ್ಥಿಯಾಗಿದ್ದಾಗ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಸ್ಪರ್ಶವಾಗುತ್ತದೆ; ಗಣಪತಿಯಪ್ಪನವರು ಆರಂಭಿಸಿದ್ದ ಕಾಗೋಡು ಸತ್ಯಾಗ್ರಹದ ಮೂಲಕ ಎಚ್ಚೆತ್ತಿದ್ದ ತನ್ನ ದೀವರ ಜಾತಿಯ ಗೇಣಿದಾರರ ಹಕ್ಕಿನ ಪ್ರಜ್ಞೆ ಕೂಡ ಈ ಹುಡುಗನನ್ನು ರೂಪಿಸುತ್ತದೆ. ಗೋಪಾಲಗೌಡ, ರಾಮಮನೋಹರ ಲೋಹಿಯಾ ಅವರ ‘ಚಳವಳಿ ರಾಜಕಾರಣ’ ವನ್ನು ಹತ್ತಿರದಿಂದ ಕಂಡ ಹುಡುಗನ ನೋಟವೇ ಬದಲಾಗುತ್ತದೆ.
ಆನಂತರ ಲಾಯರ್ ಆಗಿ ಸಾವಿರಾರು ಗೇಣಿದಾರರ ಭೂಮಿಯ ಹಕ್ಕುಗಳಿಗಾಗಿ ತಾವೇ ಕೋರ್ಟ್ ಫೀಸು ಕಟ್ಟಿ ನ್ಯಾಯಾಲಯದಲ್ಲಿ ಹೋರಾಡ ತೊಡಗಿದ ಬಂಗಾರಪ್ಪನವರನ್ನು ಕಾಗೋಡು ತಿಮ್ಮಪ್ಪ ಹಾಗೂ ಶಾಂತವೇರಿ ಗೋಪಾಲಗೌಡರು ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲಿಸಿದರು. ಬಂಗಾರಪ್ಪ ಗೆದ್ದು ಶಾಸಕರಾದರು. ಮುಂದೊಮ್ಮೆ ರಾಜ್ಯದ ಮುಖ್ಯಮಂತ್ರಿಯೂ ಆದರು. ಸಾಹಿತ್ಯ, ಸಂಗೀತದ ಜೊತೆ ಜೀವಂತ ಒಡನಾಟ ಇಟ್ಟುಕೊಂಡಿದ್ದ ಬಂಗಾರಪ್ಪ ನವರ ಬದುಕಿನ ಈ ಎಲ್ಲ ಘಟ್ಟಗಳನ್ನು ಕವಿ ಎಲ್.ಎನ್. ಮುಕುಂದರಾಜ್ ‘ಸಾರೆಕೊಪ್ಪದ ಬಂಗಾರ’ ಪುಸ್ತಕದಲ್ಲಿ ಪ್ರೀತಿಯಿಂದ ದಾಖಲಿಸಿದ್ದಾರೆ.
ಬಂಗಾರಪ್ಪನವರನ್ನು ಹರಯದಲ್ಲೇ ಸ್ಪರ್ಶಿಸಿದ ಸಮಾಜವಾದ ಒಂದು ಮಟ್ಟದಲ್ಲಾದರೂ ಬಹುಕಾಲ ಅವರೊಳಗಿತ್ತು. ಬಂಗಾರಪ್ಪ ತಮ್ಮ ರಾಜಕೀಯ ಬದುಕಿನ ಒಂದು ಘಟ್ಟದವರೆಗಾದರೂ ಜನರ ಅಜ್ಞಾನಗಳನ್ನು ತಿದ್ದುವ ನಾಯಕರಾಗಿದ್ದರು. ಸಾರ್ವಜನಿಕ ಸಭೆಯೊಂದರಲ್ಲಿ ಯಾರೋ ಒಬ್ಬ ದೇವಸ್ಥಾನ ಕಟ್ಟಿಸುವ ಬಗ್ಗೆ ಕೇಳಿದರೆ, ‘ಮೊದಲು ನಿನ್ನ ಮನೆಗೆ ಸುಣ್ಣ ಹೊಡೆದಿದೀಯ ನೋಡ್ಕೋ. ದೇವರಿಗೆ ಯಾವ ದೇವಸ್ಥಾನ ದಲ್ಲಾದರೂ ಕೈ ಮುಗಿಯಬಹುದು’ ಎಂದು ಛೇಡಿಸಬಲ್ಲ ಸ್ವಾತಂತ್ರ್ಯವನ್ನು ಬಂಗಾರಪ್ಪ ಒಂದು ಕಾಲಕ್ಕೆ ಉಳಿಸಿಕೊಂಡಿದ್ದರು. ಆದರೆ ಮುಂದೆ ದಲಿತ ಚಳವಳಿಯ ನಾಯಕರಾದ ಬಿ.ಕೃಷ್ಣಪ್ಪನವರ ನೇತೃತ್ವದಲ್ಲಿ ಕರ್ನಾಟಕದ ಪ್ರಗತಿಪರರು ಚಂದ್ರಗುತ್ತಿಯ ಬೆತ್ತಲೆಪೂಜೆಯ ವಿರುದ್ಧ ಪ್ರತಿಭಟಿಸುತ್ತಿದ್ದಾಗ, ಬಂಗಾರಪ್ಪ ಆ ಬಗ್ಗೆ ಮಾತೇ ಆಡದೆ ವೋಟಿನ ಮೇಲೆ ಕಣ್ಣು ನೆಟ್ಟ ವೃತ್ತಿ ರಾಜಕಾರಣಿಯ ವರಸೆ ತೋರಿಸಿಬಿಟ್ಟರು. ಈ ಘಟ್ಟದ ನಂತರ ಬಂಗಾರಪ್ಪ ತಮ್ಮ ಹಳೆಯ ಸಮಾಜ ವಾದಿ ಒಗರನ್ನು ಕಳೆದುಕೊಂಡರು.
ಇಷ್ಟಾಗಿಯೂ ಸ್ವತಂತ್ರವಾಗಿ ಪಕ್ಷಗಳನ್ನು ಕಟ್ಟಿದಾಗಲೂ ರಾಜ್ಯದುದ್ದಕ್ಕೂ ಬೆಂಬಲಗಳಿಸುವ ಶಕ್ತಿ ಒಂದು ಕಾಲಕ್ಕೆ ಬಂಗಾರಪ್ಪನವರಲ್ಲಿತ್ತು. ಕ್ರಾಂತಿರಂಗ ಎಂಬ ಪಕ್ಷ ಕಟ್ಟಿದ ಬಂಗಾರಪ್ಪ ಇಡೀ ರಾಜ್ಯ ಸುತ್ತಿ ಹಲವರನ್ನು ಗೆಲ್ಲಿಸಿ, ತಮ್ಮ ಚುನಾವಣಾ ಕ್ಷೇತ್ರವನ್ನೇ ಪ್ರವೇಶಿಸದೆ ಚುನಾವಣೆ ಗೆದ್ದರು. ಅವರಲ್ಲಿದ್ದ ಈ ಶಕ್ತಿ ಕಾಂಗ್ರೆಸ್ಸಿನ ಬೆಂಬಲ ಕಳೆದುಕೊಂಡ ದೇವರಾಜ ಅರಸರಲ್ಲಾಗಲೀ ಅಥವಾ ಈಚೆಗೆ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ ಯಡಿಯೂರಪ್ಪನವರಲ್ಲಾಗಲೀ ಇರಲಿಲ್ಲ. ಈ ಅಂಶ, ಬಂಗಾರಪ್ಪನವರ ವ್ಯಕ್ತಿತ್ವ ಕರ್ನಾಟಕದ ವಿವಿಧ ಭಾಗಗಳ ಹಲವು ಜಾತಿಗಳ ಜನರಲ್ಲಿ ಹುಟ್ಟಿಸುತ್ತಿದ್ದ ವಿಶಿಷ್ಟ ನಿಷ್ಠೆಯನ್ನೂ ಸೂಚಿಸುವಂತಿದೆ. ಇದೆಲ್ಲ ಆದ ನಂತರ ಮುಂದೆ ಅವರು ಸಿಟ್ಟಿನಿಂದ ದುಡುಕಿ ಬಿಜೆಪಿಗೆ ಹೋಗಿ ಗೆದ್ದರೂ ಸೋತಂತಾಗಿದ್ದರು; ತಮ್ಮ ಅಸಲಿ ನೆಲೆ ಕಳೆದುಕೊಂಡಿದ್ದರು.
ತಮ್ಮ ಜೀವನದ ಕೊನೆಗೆ, ಬಂಗಾರಪ್ಪನವರು ಹೆಸರಿನಲ್ಲಾದರೂ ಸಮಾಜವಾದವನ್ನು ಉಳಿಸಿಕೊಂಡ ಮುಲಾಯಂಸಿಂಗ್ರ ಸಮಾಜವಾದಿ ಪಕ್ಷದಲ್ಲಿದ್ದದ್ದು ಕೂಡ ಸಾಂಕೇತಿಕವಾಗಿತ್ತು. ಅಷ್ಟು ಹೊತ್ತಿಗಾಗಲೇ ಅವರ ವಿದ್ಯಾರ್ಥಿ ದೆಸೆಯ ಸಮಾಜವಾದ ದಾರಿ ತಪ್ಪಿ ಹತ್ತಾರು ವರ್ಷವಾಗಿತ್ತು. ಆದರೆ ಅವರಲ್ಲಿ ಸಮಾಜವಾದದ ಎಳೆ ಇನ್ನೂ ಉಳಿದಿತ್ತೆಂಬುದನ್ನು ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಜಾರಿಗೆ ತಂದ ಆಶ್ರಯ, ವಿಶ್ವ, ಆರಾಧನಾದಂತಹ ಯೋಜನೆಗಳು ಸೂಚಿಸುತ್ತವೆ. ಅವರು ಜಾರಿಗೆ ತಂದ ಗ್ರಾಮೀಣ ಕೃಪಾಂಕದಿಂದ ಕರ್ನಾಟಕದ ಸಾವಿರಾರು ಹಳ್ಳಿ ಹುಡುಗ, ಹುಡುಗಿಯರ ಮನೆ ಬಾಗಿಲಿಗೆ ಸರ್ಕಾರಿ ಉದ್ಯೋಗಗಳ ಆರ್ಡರುಗಳು ಬಂದದ್ದು ಇವತ್ತಿಗೂ ಪವಾಡದಂತೆ ಕಾಣುತ್ತದೆ. ಆ ಹುಡುಗ ಹುಡುಗಿಯರಾದರೂ ಇವತ್ತು ಬಂಗಾರಪ್ಪನವರನ್ನು ನೆನೆಸುತ್ತಾರೋ ಇಲ್ಲವೋ ಗೊತ್ತಿಲ್ಲ.
ಹಲಬಗೆಯ ರಾಜಿಗಳು, ದಿಟ್ಟ ನಡೆಗಳು ಎಲ್ಲವೂ ಇದ್ದ ಬಂಗಾರಪ್ಪ ಹಲವು ದಶಕಗಳ ಕಾಲ ಕರ್ನಾಟಕದ ಹಿಂದುಳಿದ ಜಾತಿಗಳ ಪ್ರೀತಿಯ ನಾಯಕನಾಗಿ ಬೆಳೆದ ರೀತಿ ಕೂಡ ಕುತೂಹಲಕರ. ಹಿಂದುಳಿದ ಜಾತಿಯಿಂದ ಬಂದ ನಾಯಕನೊಬ್ಬ ತನ್ನ ಜಾತಿಯಿಂದಾಚೆಗೆ, ಇನ್ನಿತರ ಹಿಂದುಳಿದ ಜಾತಿಗಳು ಒಟ್ಟಾಗಿ ಒಪ್ಪಿಕೊಳ್ಳುವ ನಾಯಕನಾಗಿ ರೂಪುಗೊಳ್ಳುವುದು ಎಷ್ಟು ಕಷ್ಟ ಎಂಬುದು ಆಧುನಿಕ ಕರ್ನಾಟಕದ ರಾಜಕೀಯ ಚರಿತ್ರೆ ಬಲ್ಲವರಿಗೆಲ್ಲ ಗೊತ್ತಿರುತ್ತದೆ. ತಮಗೆ ದೀರ್ಘ ಕಾಲ ನೆರವಾಗಬಲ್ಲ ಕಾರ್ಯಕ್ರಮಗಳನ್ನು, ಯೋಜನೆಗಳನ್ನು ರೂಪಿಸಿದ ನಾಯಕರ ಬಗ್ಗೆ ಹಿಂದುಳಿದ ಜಾತಿಗಳ ಮತದಾರರು ತೋರಿರುವ ಕ್ರೂರ ಉಪೇಕ್ಷೆ ದಿಗ್ಭ್ರಮೆ ಹುಟ್ಟಿಸುತ್ತದೆ. ತಮ್ಮನ್ನು ಪೊರೆದ ನಾಯಕರನ್ನು ಕುರಿತಂತೆ ಹಿಂದುಳಿದ ಜಾತಿಗಳಷ್ಟು ಅಭಿಮಾನಶೂನ್ಯರು ಪ್ರಾಯಶಃ ಕರ್ನಾಟಕದ ಇತರೆ ಜಾತಿಗಳಲ್ಲಿ ಇರಲಿಕ್ಕಿಲ್ಲ.
ಈ ಜಾತಿಗಳ ದಿಕ್ಕನ್ನೇ ಬದಲಿಸಿದ ದೇವರಾಜ ಅರಸರನ್ನಾಗಲೀ, ಭೂ ಹೋರಾಟಕ್ಕೆ ಹೊಸ ಚಲನೆ ಕೊಟ್ಟ ಶಾಂತವೇರಿ ಗೋಪಾಲಗೌಡರನ್ನಾಗಲೀ, ಹಿಂದುಳಿದ ವರ್ಗಗಳ ಹಲವು ಶತಮಾನಗಳ ಸ್ಥಗಿತತೆಯನ್ನು ಒಡೆಯುವಂಥ ಚಾರಿತ್ರಿಕ ವರದಿ ನೀಡಿದ ಎಲ್.ಜಿ. ಹಾವನೂರರನ್ನಾಗಲೀ ಹಿಂದುಳಿದ ಜಾತಿಗಳು ನೆನೆಯುವುದು ಕಡಿಮೆ. ಇದಕ್ಕೆ ಈ ವರ್ಗಗಳ ರಾಜಕೀಯ ಅಪ್ರಬುದ್ಧತೆ ಹಾಗೂ ತಮ್ಮ ಜಾತಿಯ ನಾಯಕನೇ ಅಂತಿಮ ಎಂದುಕೊಳ್ಳುವ ಸಂಕುಚಿತ ಜಾತಿಪ್ರಜ್ಞೆ ಕೂಡ ಕಾರಣ. ಈ ಸಂಕುಚಿತತೆಗೆ ನೀರೆರೆಯುತ್ತಾ, ಈ ಜಾತಿಗಳಿಗೆ ಜಾತ್ಯತೀತ ತತ್ವಗಳು ತಲುಪದಂತೆ ನೋಡಿಕೊಳ್ಳುವ ಹಿಂದುಳಿದ ಜಾತಿಗಳ ರಾಜಕಾರಣಿಗಳೂ ಇದ್ದಾರೆ.
ಒಬ್ಬರ ಕಾಲನ್ನು ಒಬ್ಬರು ಎಳೆದು ನಾಶವಾಗುವ ಆತ್ಮಹತ್ಯೆಯ ಗೀಳೂ ಈ ಜಾತಿಗಳ ನಾಯಕರಲ್ಲಿದೆ. ಬಂಗಾರಪ್ಪನವರು ಕೊನೆಯ ಸಲ ಕಾಂಗ್ರೆಸ್ಸಿನಿಂದ ಹೊರ ಹೋಗುವ ಸಂದರ್ಭ ಬಂದಾಗ ಕಾಂಗ್ರೆಸ್ ನಾಯಕರಾದ ವಿಶ್ವನಾಥ್ ಅವರು ‘ಇವತ್ತು ಬಹು ದೊಡ್ಡ ಮಾಸ್ ಲೀಡರ್ ನಮ್ಮ ಪಕ್ಷದಿಂದ ಹೊರಹೋಗುತ್ತಿದ್ದಾರೆ; ಏನಾದರೂ ಮಾಡಿ ಅವರನ್ನು ಇಲ್ಲೇ ಉಳಿಸಿಕೊಳ್ಳಬೇಕು’ ಎಂದಿದ್ದರು; ಆದರೆ ಈ ಮಾತನ್ನು ಕಾಂಗ್ರೆಸ್ ಪಕ್ಷದ ಪ್ರಬಲ ಜಾತಿಗಳ ನಾಯಕರಿರಲಿ, ಹಿಂದುಳಿದ ಜಾತಿಗಳ ನಾಯಕರು ಕೂಡ ಕೇಳಿಸಿಕೊಳ್ಳಲಿಲ್ಲ. ‘ಹೊಟ್ಟೆಕಿಚ್ಚಿನ ಪ್ರವೃತ್ತಿ ಹಿಂದುಳಿದ ಜಾತಿಗಳ ರಾಜಕಾರಣಿಗಳಲ್ಲಿ ಎದ್ದು ಕಾಣುತ್ತದೆ’ ಎಂದು ಲೋಹಿಯಾ ಬಹು ಹಿಂದೆಯೇ ಹೇಳಿದ್ದು ನೆನಪಾಗುತ್ತದೆ. ಈ ಬಗೆಯ ಹೊಟ್ಟೆಕಿಚ್ಚುಗಳಿಂದ ಹಿಂದುಳಿದ ಜಾತಿಗಳ ಚಲನೆಗೆ ಊಹಿಸಲಾರದಷ್ಟು ನಷ್ಟವಾಗಿರುವುದು ಎಲ್ಲರಿಗೂ ಗೊತ್ತಿದೆ.
ಅದರ ಜೊತೆಗೇ, ತಕ್ಷಣದ ರಾಜಕೀಯ ಲಾಭಗಳ ಮೇಲೆ ಕಣ್ಣಿಡುವ ಹಿಂದುಳಿದ ಜಾತಿಗಳ ನಾಯಕರು ತಮ್ಮ ಸಮುದಾಯಗಳಿಗೆ ಹೊಸ ಬಗೆಯ ಸಾಂಸ್ಕೃತಿಕ, ಸಾಮಾಜಿಕ ತಿಳಿವಳಿಕೆ ಕೊಡುವುದು ಕೂಡ ಕಡಿಮೆ. ಸಮಾಜವನ್ನು ತಿದ್ದಲೆತ್ನಿಸಿದ ತಮ್ಮ ಸಾಂಸ್ಕೃತಿಕ ನಾಯಕರ ಚಿಂತನೆಗಳನ್ನು ಹೊಸ ಕಾಲಕ್ಕೆ ತಕ್ಕಂತೆ ವಿವರಿಸಿಕೊಳ್ಳುವ ಬೌದ್ಧಿಕ ಕಾಳಜಿ ಕೂಡ ಇಲ್ಲಿ ಕಡಿಮೆ.
ದೇವರ ದಾಸಿಮಯ್ಯ, ಕನಕದಾಸ, ಮಾಚಿದೇವ, ಕೈವಾರ ತಾತಯ್ಯ ಮೊದಲಾದ ಕವಿಗಳನ್ನು ತಂತಮ್ಮ ಜಾತಿಗಳ ಹೆಮ್ಮೆಯ ಸಾಂಸ್ಕೃತಿಕ ನಾಯಕರೆಂಬಂತೆ ಮೆರೆಸುವ ಈ ನಾಯಕರು ಈ ಕವಿಗಳ ವೈಚಾರಿಕ ನೋಟಗಳನ್ನು ತಮ್ಮ ಜನಗಳಿಗೆ ತಲುಪಿಸುವುದಿಲ್ಲ; ಈ ಜಾತಿಗಳ ಬುದ್ಧಿಜೀವಿಗಳು ಈ ಬಗೆಯ ಕೆಲಸ ಮಾಡಲೆತ್ನಿಸಿದರೆ ಅವರಿಗೆ ಸಿಕ್ಕುವ ಬೆಂಬಲ ಕೂಡ ಅಷ್ಟರಲ್ಲೇ ಇದೆ. ಹೀಗಾಗಿ, ಹಿಂದುಳಿದ ಜಾತಿಗಳನ್ನು ಬೌದ್ಧಿಕ ಪ್ರಗತಿಯೆಡೆಗೆ ನಡೆಸುವ ತಾತ್ವಿಕ ಚೌಕಟ್ಟುಗಳು ಈ ಜಾತಿಗಳಲ್ಲಿ ರೂಪುಗೊಳ್ಳುತ್ತಿಲ್ಲ. ಕಾನ್ಶಿರಾಮ್ ಅವರು ಕಟ್ಟಿದ ‘ಬಹುಜನ ಸಮಾಜ ಪಕ್ಷ’ ದಲಿತರ ಜೊತೆಜೊತೆಗೇ ಹಿಂದುಳಿದ ಜಾತಿ, ವರ್ಗಗಳ ಪರವಾದ ರಾಜಕೀಯ, ತಾತ್ವಿಕತೆ ಹಾಗೂ ಸಾಮಾಜಿಕ ಚಿಂತನೆಗಳನ್ನು ರೂಪಿಸುತ್ತಿದ್ದ ಮುಖ್ಯ ಘಟ್ಟದಲ್ಲಿ ಈ ಪಕ್ಷದ ಆಶಯಗಳನ್ನು ಕರ್ನಾಟಕದ ಹಿಂದುಳಿದ ಜಾತಿಗಳ ರಾಜಕಾರಣಿಗಳಿರಲಿ, ಈ ಜಾತಿಗಳ ಚಿಂತಕ, ಚಿಂತಕಿಯರು ಕೂಡ ಚರ್ಚಿಸುವ ಉತ್ಸಾಹ ತೋರಲಿಲ್ಲ.
ಇದೆಲ್ಲದರ ಪರಿಣಾಮವಾಗಿ ಹಿಂದುಳಿದ ಜಾತಿಗಳ ಅನೇಕ ತರುಣರು, ದೇವನೂರ ಮಹಾದೇವರ ಮಾತಿನಲ್ಲೇ ಹೇಳುವುದಾದರೆ, ‘ಕೋಮುವಾದಿ ರಾಜಕಾರಣದ ಸೇವಕವರ್ಗವಾಗಿ’ ಮಾರ್ಪಟ್ಟರು. ಕೋಮುಹಿಂಸೆಯನ್ನು ವ್ಯಾಪಾರಿ ವರ್ಗಗಳು ಹಾಗೂ ಇನ್ನುಳಿದ ಮೇಲುಜಾತಿಗಳ ಕಾಣದ ಕೈಗಳು ರೂಪಿಸುತ್ತಿದ್ದರೆ, ಅವಕ್ಕೆಲ್ಲ ದಾಳವಾಗಿ ಇತರ ಧರ್ಮಗಳ ಜನರನ್ನು ಕೊಲ್ಲುವವರು ಹಾಗೂ ಜೈಲಿಗೆ ಹೋಗುವವರು ಹಿಂದುಳಿದ ಜಾತಿಗಳ ತರುಣರಾಗಿದ್ದಾರೆ. ಹೀಗೆ ದಿಕ್ಕು ತಪ್ಪಿ ನಾಶವಾಗುತ್ತಿರುವ ಹಿಂದುಳಿದ ಜಾತಿಗಳ ತರುಣರನ್ನು ಹಾಗೂ ರಾಜಕೀಯ ಹಾಗೂ ವೈಚಾರಿಕ ನೋಟಗಳೇ ಇಲ್ಲದ ಹಿಂದುಳಿದ ಜಾತಿಗಳ ತರುಣಿಯರನ್ನು ತಾತ್ವಿಕವಾಗಿ ಸಜ್ಜುಗೊಳಿಸುವ ಮೂಲಕವೇ ಹಿಂದುಳಿದ ಜಾತಿಗಳ ಆರೋಗ್ಯಕರ ಚಲನೆ ಶುರುವಾಗಬೇಕಾಗುತ್ತದೆ.
ಬಾಬಾಸಾಹೇಬ ಅಂಬೇಡ್ಕರ್ ಅವರು ಹಿಂದುಳಿದ ಜಾತಿಗಳನ್ನು ‘ಜಾತಿ’ಗಳೆಂದು ಕರೆಯದೆ ‘ಇತರೆ ಹಿಂದುಳಿದ ವರ್ಗಗಳು’(ಅದರ್ ಬ್ಯಾಕ್ ವರ್ಡ್ ಕ್ಲಾಸಸ್) ಎಂದು ಯಾಕೆ ಕರೆದರು ಎಂಬ ಬಗ್ಗೆ ನಾವು ಆಳವಾಗಿ ಯೋಚಿಸಿಲ್ಲ. ಚರಿತ್ರೆಯುದ್ದಕ್ಕೂ ಸಮಾನ ಕಷ್ಟಗಳನ್ನು ಎದುರಿಸುತ್ತಾ ಬಂದಿರುವ ಈ ಹಿಂದುಳಿದ ಜಾತಿಗಳು ಮುಂದೊಮ್ಮೆ ವರ್ಗ ಗುಣಗಳನ್ನು ಪಡೆದು ವಿಶಾಲ ವರ್ಗವಾಗಿ ರೂಪುಗೊಂಡು ಸಂಘಟಿತವಾಗಲಿ ಎಂಬುದು ಅಂಬೇಡ್ಕರ್ ಅವರ ಆಶಯವಾಗಿದ್ದಿರಬೇಕು ಎಂದು ಊಹಿಸಲು ಸಾಧ್ಯವಿದೆ. ಅಂಬೇಡ್ಕರ್ ಅವರು ‘ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ’ ಪಕ್ಷವನ್ನು ಕಟ್ಟಿದಾಗ ಈ ಬಗೆಯ ಸಮೀಕರಣದ ಬಗ್ಗೆ ಯೋಚಿಸಿದ್ದರು. ದಲಿತರ ಬಿಡುಗಡೆಯ ಜೊತೆಗೆ ಒಟ್ಟು ಹಿಂದುಳಿದ ವರ್ಗಗಳ ಬಿಡುಗಡೆಯ ಬಗೆಗೂ ಅಂಬೇಡ್ಕರ್ ನಿಖರವಾಗಿ ಯೋಚಿಸಿದ್ದರು. ಇವತ್ತು ಅಂಬೇಡ್ಕರ್ ಮಾರ್ಗವನ್ನು ಹಿಂದುಳಿದ ಜಾತಿಗಳಿಗೆ ಆಳವಾಗಿ ತಿಳಿಸಿಕೊಡುವ ಕೆಲಸ ಕೂಡ ಹೆಚ್ಚು ಆಗುತ್ತಿಲ್ಲ. ಹಿಂದುಳಿದ ಜಾತಿಗಳು ಹಾಗೂ ಹಿಂದುಳಿದ ವರ್ಗಗಳ ಬಿಡುಗಡೆ ಅಂಬೇಡ್ಕರ್ವಾದ ಹಾಗೂ ಲೋಹಿಯಾವಾದದಂಥ ಭವಿಷ್ಯಮುಖಿ ಚಿಂತನೆಗಳಿಂದಲೇ ಆಗಬೇಕು ಎಂಬ ಸತ್ಯ ಹಿಂದುಳಿದ ಜಾತಿಗಳಿಗೆ ಅರ್ಥವಾಗದಿದ್ದರೆ ಅವರ ಸಾಮಾಜಿಕ ಹಾಗೂ ಆರ್ಥಿಕ ಚಲನೆಗಳೆರಡೂ ಸ್ಥಗಿತವಾಗುತ್ತವೆ.
ತಮ್ಮ ಬದುಕಿನ ಒಂದು ಘಟ್ಟದಲ್ಲಿ ಬಂಗಾರಪ್ಪನವರು ಅಥವಾ ಈಗ ಇರುವ ಹಿಂದುಳಿದ ಜಾತಿಗಳ ನಾಯಕರು ತಮ್ಮ ಅಧಿಕಾರ ರಾಜಕಾರಣಕ್ಕೆ ಈ ಬಗೆಯ ಸಿದ್ಧಾಂತಗಳು ಬೇಕಾಗಿಲ್ಲ ಎಂದುಕೊಂಡಿರಬಹುದು. ಆದರೆ ಈ ಬಗೆಯ ಸೈದ್ಧಾಂತಿಕ ರಾಜಕಾರಣ ತಮ್ಮ ಅಧಿಕಾರ ರಾಜಕಾರಣಕ್ಕೆ ಕೂಡ ಪೂರಕ ಎಂಬ ಬಗ್ಗೆ ಈ ವರ್ಗದ ರಾಜಕಾರಣಿಗಳು ಇನ್ನಷ್ಟು ಗಮನ ಕೊಡಬೇಕಾಗಿದೆ. ಅದಕ್ಕಿಂತ ಮುಖ್ಯವಾಗಿ ಜಾತಿಯ ಏಣಿಯಲ್ಲಿ ತಮಗಿಂತ ಕೆಳಗಿರುವ ಜಾತಿಗಳ ಜೊತೆಗೆ ಸಾಮಾಜಿಕ ಹಾಗೂ ರಾಜಕೀಯ ಅಧಿಕಾರ ಹಂಚಿಕೊಳ್ಳುವ ಸಾಮಾಜಿಕ ನ್ಯಾಯದ ಹೊಸ ಬಗೆಯನ್ನು ಕುರಿತೂ ಹಿಂದುಳಿದ ಜಾತಿಗಳ ನಾಯಕರು ಚಿಂತಿಸಬೇಕಾಗಿದೆ.
ಹಿಂದುಳಿದ ಜಾತಿಗಳ ನಾಯಕರು ಕರ್ನಾಟಕದ ಮುಖ್ಯಮಂತ್ರಿ ಸ್ಥಾನದವರೆಗೂ ಏರಲು ನಿರ್ಣಾಯಕ ಬೆಂಬಲ ನೀಡಿರುವ ದಲಿತ ಹಾಗೂ ಅಲ್ಪಸಂಖ್ಯಾತ ಜಾತಿಗಳ ನಾಯಕರಿಗೆ ಮುಖ್ಯಮಂತ್ರಿ ಪದವಿಯೂ ಸೇರಿದಂತೆ ಬಗೆಬಗೆಯ ಮುಂಚೂಣಿ ನಾಯಕತ್ವಗಳನ್ನು ಹೊಂದಲು ಹಿಂದುಳಿದ ಜಾತಿಗಳು ಹೊಸ ಏಣಿಗಳಾಗಬೇಕಾಗುತ್ತದೆ. ಆ ಮೂಲಕ ಹಿಂದುಳಿದ ಜಾತಿಗಳು ಹೊಸ ವರ್ಗವಾಗಿ ರೂಪುಗೊಂಡು, ಹೊಸ ರಾಜಕೀಯ ಹಾಗೂ ಹೊಸ ಆರ್ಥಿಕ ಚಿಂತನೆ ರೂಪಿಸುವುದು ಸಾಧ್ಯವಿದೆ. ಜಾತಿ ಠೇಂಕಾರ ತೋರದೆ, ನೊಂದ ವರ್ಗಗಳೊಡನೆ ಸಮಾನ ನೆಲೆಗಟ್ಟಿನ ತಾತ್ವಿಕ ಒಪ್ಪಂದ ಮಾಡಿಕೊಳ್ಳುವುದರ ಮೂಲಕ ಮಾತ್ರ ಹಿಂದುಳಿದ ಜಾತಿಗಳು ತಮ್ಮ ಪ್ರಗತಿಯ ನೆಲೆಗಳನ್ನು ವಿಸ್ತರಿಸಿಕೊಳ್ಳಬಹುದು. ಇವತ್ತು ಬಂಗಾರಪ್ಪನವರ ರಾಜಕಾರಣದ ಬಗ್ಗೆ ಯೋಚಿಸುತ್ತಲೇ, ಅವರು ತಮ್ಮ ಬದುಕಿನುದ್ದಕ್ಕೂ ಪ್ರಯತ್ನಿಸಿದ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ಜಾತಿಗಳ ರಾಜಕೀಯ ಒಗ್ಗೂಡುವಿಕೆ ಜತೆಗೇ ಸಾಮಾಜಿಕ ಏಕತೆಯ ಸಾಧ್ಯತೆಗಳ ಬಗೆಗೂ ಇನ್ನಷ್ಟು ಮುಕ್ತವಾಗಿ, ಆಳವಾಗಿ ಯೋಚಿಸಬೇಕೆನ್ನಿಸುತ್ತದೆ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.