ADVERTISEMENT

ಬುದ್ಧನ ಮೂರು ಹುಣ್ಣಿಮೆಗಳು...

ಎಚ್.ಎಸ್.ಶಿವಪ್ರಕಾಶ್
Published 22 ಮೇ 2014, 19:30 IST
Last Updated 22 ಮೇ 2014, 19:30 IST
ಬುದ್ಧನ ಮೂರು ಹುಣ್ಣಿಮೆಗಳು...
ಬುದ್ಧನ ಮೂರು ಹುಣ್ಣಿಮೆಗಳು...   

ಪರಮಶಾಂತಿ ಮತ್ತು ಮಹಾಕರುಣೆಯ ತಂಪಾದ ತಿಳಿಬೆಳಕನ್ನು ಭೂವಲಯದ ಉದ್ದಕ್ಕೂ ಹರಡುವಲ್ಲಿ ಬುದ್ಧನ ಜೀವಿತದ ಮೂರು ಹುಣ್ಣಿಮೆಗಳು ಮಹತ್ವಪೂರ್ಣ. ಮೊದಲನೆಯದು ಸಾಕ್ಯಮುನಿ ಬುದ್ಧ ಜನಿಸಿದ ದಿನ. ಅದೂ ಹುಣ್ಣಿಮೆ. ಎರಡನೆಯದು ತನ್ನ ಅರಮನೆಯನ್ನು ನಟ್ಟಿ­ರು­ಳಲ್ಲಿ ತೊರೆದು ಆತ ಅರಿವಿನ ಬೆಳಕನ್ನು ಅರಸಲು ಹೊರಟದ್ದು. ಅದೂ ಹುಣ್ಣಿಮೆ.

ಕೊನೆಯದು ಆತ ತನ್ನ ದೇಹತ್ಯಾಗ ಮಾಡಿದ ದಿನ. ಅದೂ ಹುಣ್ಣಿಮೆ. ಹೀಗಾಗಿ ಬುದ್ಧನ ಹುಟ್ಟಿನ ದಿನ, ಆತ ಗೃಹ­ತ್ಯಾಗ ಮಾಡಿದ ದಿನ, ದೇಹತ್ಯಾಗ ಮಾಡಿದ  ಮೂರು ಹುಣ್ಣಿಮೆಗಳು ಇಡೀ ಜಗತ್ತಿನ ಕರಾಳ ಇತಿಹಾಸವನ್ನು ಶಾಂತಿ ಮತ್ತು ಕರುಣೆಯಿಂದ ಪ್ರಕಾಶಮಾನವಾಗಿಸಿದವು.

ಬುದ್ಧನ ಮೂರ್ತಿಗಳು ಜಗತ್ತಿನ ಶಿಲ್ಪಗಳಲ್ಲಿ ಅತ್ಯಂತ ಪ್ರಸಿದ್ಧವಾಗಿವೆ, ಪ್ರಭಾವಿಯಾಗಿವೆ. ಭಾರತೀಯ ಸೌಂದರ್ಯ ಮೀಮಾಂಸೆಯಲ್ಲಿ ಆಚಾರ್ಯ ಅಭಿನವಗುಪ್ತಪಾದರಿಗೆ ಶಾಂತರಸ­ವನ್ನು ಒಂಬತ್ತನೆಯ ರಸವನ್ನಾಗಿ ಸ್ಥಾಪಿಸಲು ಆ ಕಾಲದಲ್ಲಿ ವ್ಯಾಪಕವಾಗುತ್ತಿದ್ದ ಬುದ್ಧನ ಧ್ಯಾನ­ಮೂರ್ತಿ­ಗಳಿಂದ ಪ್ರೇರಣೆ ದೊರಕಿತೆಂದು ಹೇಳ­ಲಾಗಿದೆ.

ಆದರೂ ಬುದ್ಧ ತನ್ನ ಮೂರ್ತಿ­ಸ್ಥಾಪ­ನೆಗೆ, ಪೂಜೆಗೆ ಅನುಮತಿ ನೀಡಲಿಲ್ಲ. ಗಾಂಧಾರ ದೇಶದಲ್ಲಿ ಬುದ್ಧನ ಮೂರ್ತಿಗಳು ಪ್ರಚುರ­ಗೊಳ್ಳುವ ಮೊದಲು ಬೌದ್ಧಶಿಲ್ಪದಲ್ಲಿ ಬುದ್ಧ­ನನ್ನು ಕುದುರೆ, ಧರ್ಮಚಕ್ರ ಇತ್ಯಾದಿ ಸಂಕೇತಗಳ ಮೂಲಕವೇ ಸೂಚಿಸಲಾಗುತ್ತಿತ್ತೆಂಬುದು ನಮಗೆ ಸಾಂಚಿಯಂಥ ಶಿಲ್ಪರಚನೆಗಳ ಮೂಲಕ ತಿಳಿದುಬರುತ್ತದೆ. 

ದೇಹಧಾರಿಗಳಾದ ಮಾನ-­ವರು ಅಮೂರ್ತ ಆದರ್ಶಗಳಿಗೆ ದೇಹರೂಪ­ವನ್ನು ನೀಡುವ ಪ್ರಕ್ರಿಯೆಯನ್ನು ಯಾವ ಮೂರ್ತಿ­­­ವಿರೋಧಿ ಧರ್ಮವೂ ಪ್ರತಿಬಂಧಿಸಲು ಸಾಧ್ಯವಾಗಿಲ್ಲ. ಹೀಗಾಗಿ ಬೌದ್ಧಧರ್ಮ ಚೀನಾ, ಟಿಬೆಟ್, ಕೊರಿಯಾ, ಜಪಾನುಗಳಲ್ಲಿ ಮಹಾ­ಯಾನದ ಹೊಸ ಆವಿಷ್ಕಾರಗಳನ್ನು ಪಡೆದು­ಕೊಂಡಾಗ ಮೂರ್ತಿಸ್ಥಾಪನೆ ಮತ್ತು ಮೂರ್ತಿ­ಧ್ಯಾನಗಳು ಪ್ರಚಾರಕ್ಕೆ ಬಂದವು.

ಜಪಾನಿನ ನಾರಾದಲ್ಲಿ ಬುದ್ಧನ ಮರದ ಬೃಹತ್  ಮೂರ್ತಿ ಇಂದಿಗೂ ಪೂಜೆಗೊಳ್ಳುತ್ತಿದೆ. ನಾರಾದ ಬುದ್ಧ­ಮಂದಿರ ಮೂರು ಬಾರಿ  ಬೆಂಕಿಯ ಅನಾಹುತ­ಗಳಿಗೆ ತುತ್ತಾಗಿತ್ತು. ಅದನ್ನು ಮೂರು ಬಾರಿ ಪುನರ್ನಿರ್ಮಾಣ ಮಾಡಲಾಯಿತು. ಅದು ಪ್ರತಿ­ದಿನ ನೂರಾರು ಬೌದ್ಧ ಯಾತ್ರಿಗಳನ್ನು ಇಂದಿಗೂ ಸೆಳೆಯುತ್ತಿದೆ.

ಇಡೀ ಜಗತ್ತನ್ನು ನುಂಗಿ ನೀರು ಕುಡಿಯಲು ಬಯಸಿದ ಸಾಮ್ರಾಜ್ಯಪಿಪಾಸುಗಳ ಸಂಖ್ಯೆ ಕಡಿಮೆ­­ಯೇನಲ್ಲ. ಅಲೆಕ್ಸಾಂಡರ್ ಗೆಲ್ಲಲಿಕ್ಕೆ ಇನ್ನೊಂದು ಭೂಮಿಯಿಲ್ಲವಲ್ಲ ಎಂದು ಮಗು­ವಿ­ನಂತೆ ಅಳುತ್ತಿದ್ದನಂತೆ. ಆದರೆ ಅವನು ಒಂದು ಜಗತ್ತನ್ನೂ ಪೂರ್ಣ ಗೆಲ್ಲುವ ಮೊದಲೇ ಅವ­ಸಾ­ನ­ಗೊಂಡ. ಮಂಗೋಲಿಯಾದ ಚಂಗೀಸ್ ಖಾನ್ ಇನ್ನೊಬ್ಬ ಅಪ್ರತಿಹತ ಸಾಮ್ರಾಜ್ಯ­ಪಿಪಾಸು.

ಜಪಾನಿನಿಂದ ರಷ್ಯಾದವರೆಗಿನ ಅವನಿ­ಯನ್ನು ವಶಪಡಿಸಿಕೊಂಡ. ಇಡೀ ಜಗತ್ತನ್ನು ಗೆಲ್ಲಲು ಅವನಿಗೂ ಸಾಧ್ಯವಾಗಲಿಲ್ಲ. ಹಾಗೆಯೇ ಪೃಥ್ವೀಮಂಡಲದಲ್ಲಿ ಬೃಹತ್ ಸಾಮ್ರಾಜ್ಯಗಳನ್ನು ಸ್ಥಾಪಿಸಿದ ರೋಮನ್ನರಾಗಲಿ, ಸ್ಪೇನಿಗರಾಗಲಿ, ಮೊಘಲರಾಗಲಿ, ಪೂರ್ವ ಏಷ್ಯಾದಲ್ಲಿ ಸಾಮ್ರಾ­ಜ್ಯ­ಗಳನ್ನು ಕಟ್ಟಿದ ತಮಿಳರಸರಾಗಲಿ ಯಾರೂ ಇಡೀ ಜಗತ್ತನ್ನು ವಶಪಡಿಸಿ­ಕೊಳ್ಳು­ವುದರಲ್ಲಿ ಯಶಸ್ಸು ಪಡೆಯಲಿಲ್ಲ. ಅಲ್ಲದೆ ಅವರು ಕಟ್ಟಿದ ಯಾವ ಸಾಮ್ರಾಜ್ಯವೂ ಬಹುಕಾಲ ಉಳಿಯ­ಲಿಲ್ಲ. ಇತಿಹಾಸದ ಸುಂಟರಗಾಳಿಯಲ್ಲಿ ತೇಲಿ­ಹೋದವು.

ಬುದ್ಧ ಅರಸುಕುಲದಲ್ಲಿ ಜನಿಸಿಯೂ ಅರಸೊ­ತ್ತಿಗೆ­ಯನ್ನು ತ್ಯಜಿಸಿದ. ಸಾಮ್ರಾಜ್ಯಪಿಪಾಸೆ ಅವ­ನನ್ನು ಸೋಂಕಲೂ ಇಲ್ಲ. ಆದರೆ ಬದುಕಿನ ಅಶಾ­ಶ್ವತೆಯನ್ನು ಸಾರಿದ ಬುದ್ಧ ಸ್ಥಾಪಿಸಿದ ಧರ್ಮ­ಸಾಮ್ರಾಜ್ಯ ಇಂದಿಗೂ ಉಳಿದಿದೆ, ಬೆಳೆಯುತ್ತಿದೆ. ಅಮೆರಿಕದಂಥ ದೇಶದಲ್ಲಿ ಬೌದ್ಧಧರ್ಮ ಇಂದು ಜನಪ್ರಿಯತೆಯಲ್ಲಿ ಎರಡನೆಯ ಸ್ಥಾನದಲ್ಲಿದೆ.

ಜರ್ಮನಿಯ ರಾಜಧಾನಿಯಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚಿನ ಬೌದ್ಧ ಧ್ಯಾನಕೇಂದ್ರ­ಗ­ಳಿವೆ. ಕತ್ತಿ ಅಥವಾ ಬಂದೂಕಿನ ಬಲವಿಲ್ಲದೆ, ಒಂದು ಹನಿ ರಕ್ತವನ್ನೂ ಸುರಿಸದೆ ಇಂದು ವಿಶ್ವ­ಧರ್ಮವಾಗಿ ರಾರಾಜಿಸುತ್ತಿರುವ ಬೌದ್ಧ­ಧರ್ಮದ ದಿಗ್ವಿಜಯ ಜಗತ್ತಿನ ಇತಿಹಾಸದ ಸೋಜಿಗಗಳಲ್ಲೊಂದು. ಆದ್ದರಿಂದಲೋ ಏನೋ ಬೌದ್ಧ ಶಿಲ್ಪ ಮತ್ತು ಚಿತ್ರಕಲೆಗಳಲ್ಲಿ, ಧ್ಯಾನಮೂರ್ತಿಗಳ ವಿವರಗಳಲ್ಲಿ ಬುದ್ಧ ಮತ್ತು ಅವನ ಅವತಾರಗಳಾಗಿರುವ ಬೋಧಿಸತ್ವರಿಗೆ ರಾಜವೈಭವದ ಲಕ್ಷಣಗಳನ್ನು ಆರೋಪಿಸಲಾಗಿದೆ.

ಮಕುಟಧಾರಿಗಳಾದ, ವಿವಿಧ ಆಯುಧಪಾಣಿಗಳಾದ, ಸ್ವರ್ಣ-ವಜ್ರ-ವೈಢೂರ್ಯ  ಧಾರಿಗಳಾದ ಬುದ್ಧ, ಬೋಧಿಸ­ತ್ವರು ಬೌದ್ಧರ ಸಾಮೂಹಿಕ ಮಾನಸ ಭಿತ್ತಿ­ಯಲ್ಲಿ ನೆಲೆ ನಿಂತು ಧ್ಯಾನ-ಪೂಜೆಗಳನ್ನು ಸ್ವೀಕರಿ­ಸುತ್ತಿದ್ದಾರೆ. ಅವರವರ ಭಾವಕ್ಕೆ ಅವರವರ ವೇಷಗಳನ್ನು ತೊಟ್ಟು ಶಿಲ್ಪ ಮತ್ತು ಚಿತ್ರಕಲೆಗಳಲ್ಲಿ ಅನಿತ್ಯವಾ­ದಿಯಾದ ಬುದ್ಧನ ಸ್ಮರಣೆ ನಿತ್ಯಘಟನೆಯಾಗಿದೆ.

ಅದೇ ರೀತಿ ತಿಪಿಟಕಾದಿಗಳಲ್ಲಿ ದಾಖಲಿತವಾದ ಬುದ್ಧವಚನವೂ ನಮ್ಮ ನಡುವೆ ಬುದ್ಧನ ಅಸ್ತಿ­ತ್ವದ ಮುಂದುವರಿಕೆಯಾಗಿದೆ. ಪ್ರಜ್ಞಾ­ಪಾರ­ಮಿತ ಸ್ತೋತ್ರವೆಂಬ ವಜ್ರಾಯಾನ ಪಂಥದ ರಚನೆ­ಯಲ್ಲಿ ಹೀಗೆ ಹೇಳಲಾಗಿದೆ: ‘ಹೇಗೆ ಚಂದ್ರ ಮತ್ತು ಚಂದ್ರ­ಪ್ರಕಾಶದ ನಡುವೆ ಭೇದವಿಲ್ಲವೋ ಹಾಗೆಯೇ ಬುದ್ಧ ಮತ್ತು ಬುದ್ಧವಚನಗಳನ್ನು ಬೇರ್ಪಡಿಸು­ವುದು ಸಾಧ್ಯವಿಲ್ಲ’.

ಬುದ್ಧವಚನವಾದರೋ ತಿಪಿಟಕಾದ ಬೃಹತ್ ರಾಶಿ­ಯಲ್ಲಿ, ಮಹಾಯಾನ ಪಂಥಗಳ ಸಂಸ್ಕೃತ, ಟಿಬೆಟಿಯನ್, ಚೀಣಿ, ಜಪಾನಿ, ಕೊರಿಯನ್ ಭಾಷೆಗಳ ಅಸಂಖ್ಯ ಸೂತ್ರ, ಟೀಕೆಗಳ ಮಹಾನ್ ರಾಶಿಯಲ್ಲಿ ವಿಪುಲವಾಗಿ ಹರಡಿ­ಹೋಗಿದೆ. ಅವುಗಳಲ್ಲಿ ವ್ಯಕ್ತವಾಗಿರುವ ಬೋಧ­ನೆ­ಗಳ, ನಿರ್ದೇಶನಗಳ ಬಹುಳತೆ ಮತ್ತು ಅಂತರ್ವಿರೋಧಗಳು ಬೌದ್ಧಧರ್ಮ, ಶಾಖೋ­­ಪ­­ಶಾಖೆಗಳಾಗಿ  ಹಲವು ಕವಲೊಡೆಯಲು ಕಾರಣ­ವಾದವು. ಆದರೆ ಅನಿತ್ಯತತ್ವ, ಅನಾತ್ಮ­ತತ್ವ, ಪ್ರತೀತ್ಯಸಮುತ್ಪಾದ ಮತ್ತು ನಿರೀಶ್ವರ­ವಾದಗಳು ಎಲ್ಲ ಬಗೆಯ ಬೌದ್ಧಪಂಥಗಳಿಗೂ ಮಾನ್ಯವಾದವೆಂದು ಹೇಳುತ್ತಾರೆ ಜರ್ಮನಿಯ ವಿಖ್ಯಾತ ವಿದ್ವಾಂಸ ಲಾಮಾ ಅನಗರಿಕ ಗೋವಿಂದ.

ಜಗತ್ತಿನ, ದೇಶದ ಮತ್ತು ನನ್ನ ವ್ಯಕ್ತಿಗತವಾದ ಹಲವಾರು ಅನಿಶ್ಚಿತತೆಗಳ ನಡುವೆ ಈ ಸಲದ ಬುದ್ಧನ ಹುಣ್ಣಿಮೆಯನ್ನು ಹೇಗೆ ಆಚರಿಸ­ಬೇಕೆಂದು ಯೋಚಿಸುತ್ತಿರುವಾಗ ನನಗೆ ಬುದ್ಧನ ಬೋಧನೆಗಳನ್ನು ಸಂಗ್ರಹರೂಪವಾಗಿ ಹೇಳುವ ‘ಧಮ್ಮಪದ’ದ ನೆನಪಾಯಿತು. ಈ ಕೃತಿಯನ್ನು ನಾನು ನನ್ನ ಬದುಕಿನ ನಿರ್ಣಾಯಕ ವರ್ಷಗಳಲ್ಲಿ ನಿತ್ಯಪಾಠ ಮಾಡುತ್ತಿದ್ದೆ.

ಇಂದು ‘ಧಮ್ಮಪದ’  ಕನ್ನಡವನ್ನೂ ಒಳಗೊಂಡು ಜಗತ್ತಿನ ಎಲ್ಲ ಭಾಷೆ­ಗ­ಳಿಗೂ ಅನುವಾದವಾಗಿದೆ. ಆಧ್ಯಾತ್ಮಿಕ ಸತ್ಯ ಮತ್ತು ಕಾವ್ಯ-ಸೌಂದರ್ಯಗಳ ಸಂಗಮವಾ­ಗಿ­­­ರುವ ಈ ಕೃತಿಯ ಅನುವಾದವನ್ನು ಈ ಹಿಂದೆ  ಬೌದ್ಧಧರ್ಮದಲ್ಲಿ ತಜ್ಞರಾಗಿದ್ದ ದಿವಂಗತ ಜಿ.ಪಿ. ರಾಜರತ್ನಂ ಅವರು ಮಾಡಿ­ದ್ದರು. ಮುಂದೆ ಬೆಂಗಳೂರಿನ ಮಹಾ­ಬೋಧಿ ಸೊಸೈಟಿಯವರು ಇನ್ನೊಂದು ಅನು­ವಾದ­ವನ್ನು ಪ್ರಕಟಿಸಿದರು.

ಈಚೆಗೆ ನನ್ನ ಯುವ ಮಿತ್ರರೂ ವಿದ್ವತ್ಪೂರ್ಣ ಬರಹಗಾರರೂ ಆದ ಜಿ.ಬಿ. ಹರೀಶ್ ಅವರು ‘ಧಮ್ಮಪದ’ದ ಹೊಸ ಅನುವಾ­ದ­ವನ್ನು ಮಾಡಿ ಅಭಿಪ್ರಾಯಕ್ಕಾಗಿ ನನಗೆ ಕಳಿಸಿದ್ದಾರೆ. ಬುದ್ಧನ ಹುಣ್ಣಿಮೆಯಂದು ಸಾದ್ಯಂತ­ವಾಗಿ ಅದನ್ನು ಮತ್ತೆ ಓದಿದಾಗ ಅದರ ಮೊದಲ ಅಧ್ಯಾಯದಲ್ಲಿರುವ ಒಂದು ದ್ವಿಪದಿ ಮತ್ತೆ ನನ್ನ ಗಮನ ಸೆಳೆಯಿತು. ನನಗಿದು ಬುದ್ಧ­ವಚನದ ಸಾರೋದ್ಧರವಾಗಿ ತೋರುವುದ­ರಿಂದ ಮತ್ತು ಎಂದಿಗಿಂತಲೂ ಇಂದು ನನ್ನ ರಾಷ್ಟ್ರ ಮತ್ತು ಜಗತ್ತುಗಳಿಗೆ ಅತ್ಯಂತ ಪ್ರಸ್ತುತ­ವಾಗಿದೆ­ಎಂದು ಅನಿಸುತ್ತಿರುವುದರಿಂದ ಅದರ ಬಗ್ಗೆ ಧ್ಯಾನಿಸುತ್ತಿದ್ದೇನೆ.

ಆ ದ್ವಿಪದಿಯು ಮೂಲ ಪಾಲಿಯಲ್ಲಿ ಹೀಗಿದೆ:
ನಹಿ ವೇರೇನ  ವೇರಾಣಿ ಸಮ್ಮಂತಿಧ ಕುದಾಚನಙ
ಅವೇರೇನ ಸಮ್ಮಂತಿ ಏಸ ಧಮ್ಮೋ ಸನಾತನೋ


ಇದರರ್ಥ:
ವೈರದಿಂದ ಎಂದಿಗೂ ಸಾಧ್ಯವಿಲ್ಲ ವೈರಶಮನ ಅವೈರದಿಂದ ಸಾಧ್ಯ. ಇದೇ ಧರ್ಮ ಸನಾತನ
ಇದು ಬುದ್ಧ ನೀಡಿದ ಸನಾತನ ಧರ್ಮದ ವ್ಯಾಖ್ಯೆ. ಇದೇನೂ ಬುದ್ಧ ನೀಡಿದ ಹೊಸ ಆಲೋ­ಚನೆಯಲ್ಲ. ಹಾಗೆ ನೋಡಿದರೆ ಬುದ್ಧ ತಾನು ಹೊಸ ಧರ್ಮ ಸ್ಥಾಪಿಸಿದೆ ಎಂದು ಕೊಚ್ಚಿ­ಕೊಳ್ಳಲೇ ಇಲ್ಲ.  ತನ್ನ ಮೊದಲೈದು ಶಿಷ್ಯರಿಗೆ ಸಾರ­ನಾಥದಲ್ಲಿ ಬೋಧಿಪ್ರಾಪ್ತಿಯ ನಂತರ ಆತ ನೀಡಿದ ಬೋಧನೆಯ ಹೆಸರು ಧಮ್ಮಚಕ್ಕ­ ಪ­ಬತ್ತನ ಸುತ್ತ (ಧರ್ಮಚಕ್ರ ಪ್ರವರ್ತನ ಸೂತ್ರ).  ಅಂದರೆ ಧರ್ಮಚಕ್ರ ಮೊದಲೇ ಇತ್ತು. ಆ ಚಕ್ರ ಸ್ಥಗಿತಗೊಂಡಿತ್ತು.

ಬುದ್ಧ ಅದನ್ನು ಪುನಶ್ಚಾಲನೆ ಮಾಡಿದ. ಆ ಬೋಧನೆಯ ಸಾರಸರ್ವಸ್ವ ಚತುರಿ ಅರಿಯ ಸಚ್ಚಾನಿ (ನಾಲ್ಕು ಆರ್ಯ­ಸತ್ಯ­ಗಳು). ಇಲ್ಲಿ ಆರ್ಯ ಅಂದರೆ ಜನಾಂಗ­ಸೂಚಕ­ವಲ್ಲ. ಹಿರೇಕರು ಎಂದದರ ಅರ್ಥ. ಅಂದರೆ ಆತ ಬೋಧಿಸಿದ ಸತ್ಯಗಳು ಈಗಾಗಲೇ ಆತನ ಹಿರೇ­ಕರಿಗೆ ಗೋಚರವಾಗಿ ಅವರು ಅವುಗಳನ್ನು ವ್ಯಕ್ತ­ಪಡಿಸಿದ್ದರು. ಜ್ಞಾನೋದಯ ಕಾಲದಲ್ಲಿ ಬುದ್ಧ ಅವು­ಗಳನ್ನು ತನ್ನ ಧ್ಯಾನಾನುಭವದಲ್ಲಿ ಕಂಡು­ಕೊಂಡ. 

ವಿದ್ವಾಂಸರು ಬೌದ್ಧಧರ್ಮದ ಸಾರವನ್ನು ವಿವಿಧ ರೀತಿಗಳಲ್ಲಿ ವಿವರಿಸಿದ್ದಾರೆ. ನಾಲ್ಕು ಆರ್ಯ­ಸತ್ಯಗಳು, ದುಃಖಾಂತಕ್ಕೆ ಅಗತ್ಯವಾದ ಅರಿಯ ಅಠ್ಠಂಗ ಮಗ್ಗ (ಆರ್ಯ  ಅಷ್ಟಾಂಗ ಮಾರ್ಗ)­ಬುದ್ಧನ ಬೋಧನೆಯ ಆಧಾರ­ಸ್ತಂಭ­ಗಳು. ಅಷ್ಟೇ ಮುಖ್ಯವಾದುವು ಬುದ್ಧ ನೀಡಿದ ಎನ್ನಲಾದ ತ್ರಿರತ್ನಗಳು: ಶೀಲ, ಸಮಾಧಿ, ಪ್ರಜ್ಞಾಶೀಲವನ್ನು ಮಾದಕದ್ರವ್ಯಗಳ ನಿಷೇಧ ಇತ್ಯಾದಿ ಸಂಕುಚಿತ ಕಲ್ಪನೆಗಳಲ್ಲಿ ಗುರುತಿಸ­ಲಾಗುತ್ತಿದೆಯಾದರೂ ಶೀಲವೆಂಬುದರ ಹರಹು ಬಹಳ ದೊಡ್ಡದು.

ಪ್ರಜ್ಞೆಯೆಂದರೆ ಅರಿವು. ಅರಿವೆಂದರೆ ನೇರ ಗ್ರಹಿಕೆ. ಇದನ್ನೇ ಕರ್ನಾಟಕದ ಶರಣರು ಅರಿವೆಂದು ಕರೆದರು. ಆದರೆ ಈ ಮೂರು ರತ್ನಗಳಿಗೆ ಕಾರಣೀಭೂತವಾದ ಇನ್ನೊಂದು ತತ್ವವಿದೆ. ಅದನ್ನೇ ಮೇತ್ತಾಕರುಣಾ­(ಮೈತ್ರಿ-ಕರುಣೆ) ಎಂದು ಕರೆಯಲಾಗಿದೆ. ಮೇಲ್ಕಂಡ ದ್ವಿಪದಿ ಮೈತ್ರಿ-ಕರುಣೆಯ ಅಸ್ತಿ­ವಾರವಾದ ನಿರ್ವೈರವನ್ನು ಸನಾತನ ಧರ್ಮ­ವೆಂದು ಸಾರಿದೆ. ಬೇಕು–-ಬೇಡ, ಹೌದು–-ಇಲ್ಲ  ಇತ್ಯಾದಿ  ಪರಸ್ಪರ ವಿರುದ್ಧವಾದ ಭಾವನೆಗಳ ನಡುವೆ ತೊಳಲಾಡುವ ಮನಸ್ಸು ಸದಾ ಇಬ್ಬಂದಿತನದಲ್ಲಿ, ಇಕ್ಕಟ್ಟು-–ಬಿಕ್ಕಟ್ಟು­ಗ­ಳಲ್ಲಿ ಅಶಾಂತವಾಗಿರುತ್ತದೆ.

ಒಂದು ಬೇಕಾ­ದರೆ ಇನ್ನೇನೋ ಬೇಡವಾಗಿರುತ್ತದೆ; ಒಂದರ ಬಗೆಗೆ ಆಕರ್ಷಣೆ ಇದ್ದರೆ ಇನ್ನೊಂದರ ಬಗ್ಗೆ ವಿಕರ್ಷಣೆ­ಯಿರುತ್ತದೆ. ಪ್ರೀತಿ ಇದ್ದಲ್ಲಿ ಹಗೆಯೂ ಇರುತ್ತದೆ. ಆದರೆ ಕರುಣೆಯೆಂಬುದು ಮೈತ್ರಿಯೆಂಬುದು ನಿರ್ದ್ವಂದ್ವದ ಸ್ಥಿತಿ. ಕರುಣೆಗೆ ವಿರೋಧಾರ್ಥಕ ಭಾವನೆಯಿಲ್ಲ.

ಮೈತ್ರಿಯು ರಾಗವಲ್ಲ. ರಾಗವಿದ್ದಲ್ಲಿ ದ್ವೇಷ ಅನಿವಾರ್ಯ. ‘ನತ್ಥಿ ರಾಗಸಮೋ ನದಿ’ ಅನ್ನು­­ತ್ತದೆ ಧಮ್ಮಪದ. ಅಂದರೆ ರಾಗ ಕೊನೆ­ಯಿರದ ನದಿ. ರಾಗವು ದ್ವೇಷಕ್ಕೂ, ದ್ವೇಷವು ಮೋಹಕ್ಕೂ ಎಡೆ ಮಾಡಿಕೊಟ್ಟು ನಮ್ಮನ್ನು ದುಃಖಜಾಲದಲ್ಲಿ ಸಿಲುಕಿ­ಸುತ್ತದೆ. ಸಂಘ­ರ್ಷಾ­ತ್ಮಕ, ಶೋಷಣಾತ್ಮಕ ಸಾಮಾಜಿಕ ಸನ್ನಿವೇಶ­ಗಳಲ್ಲಿ ತಾನೇ, ತನ್ನ ಜಾತಿಯೇ, ತನ್ನ ಕುಲವೇ, ತನ್ನ ಸಿದ್ಧಾಂತವೇ ಶ್ರೇಷ್ಠ­ವೆನ್ನುವ ಭಾವನೆಗಳು ಎಡೆಬಿಡದ ರಾಗ-ದ್ವೇಷ­ಗಳ ಮೇಲಾಟವನ್ನುಂಟು ಮಾಡಿ ಮನೋ­ವಿಕಾಸವನ್ನು ಕುಂಠಿತ­ಗೊಳಿ­ಸುತ್ತವೆ.

ಬಹುತೇಕ ಧರ್ಮಗಳೂ ಈ ತೆರನ ಸಾಮೂ­ಹಿಕ ಸ್ವಾರ್ಥಕ್ಕೆ ಸ್ಫೂರ್ತಿ ನೀಡಿವೆ.  ಬೌದ್ಧಧರ್ಮ ಕರುಣೆಯನ್ನು ತನ್ನ ಆಧಾರ­ವಾಗಿರಿಸಿ­ಕೊಂಡಿ­ದ್ದರೂ ಬೌದ್ಧ­ಧರ್ಮ ಪ್ರಧಾನ ಶ್ರೀಲಂಕೆಯಲ್ಲಿ ನಡೆದ ತಮಿಳರ ಸಾಮೂಹಿಕ ಹತ್ಯಾಕಾಂಡ ಕರುಣೆಯನ್ನು ಪಾಲಿ­ಸು­ವುದು ಬೌದ್ಧಧರ್ಮೀ­ಯರಿಗೂ ಸುಲಭ­ವಲ್ಲವೆಂದು ತೋರಿಸಿಕೊಟ್ಟಿದೆ.

ಮೈತ್ರಿಕರುಣೆಗಳಿಲ್ಲದೆ ಶೀಲ-, ಸಮಾಧಿ-, ಕರುಣೆ­­ಗಳೂ ನಿರರ್ಥಕವೆಂದು ಸೂಚಿಸುವ ದಂತ­ಕತೆ­ಯೊಂದು ಬೌದ್ಧಪರಂಪರೆಯಲ್ಲಿದೆ.
ಒಮ್ಮೆ ಹಲವು ಮಂದಿ ಬೌದ್ಧಭಿಕ್ಷುಗಳು ಸಿಂಹ­­ಗುಹೆಯೆಂಬ ತಾಣದಲ್ಲಿ ಕಠೋರ ಸಾಧನೆ ಮಾಡತೊಡಗುತ್ತಾರೆ. ಅವರ ಮನಸ್ಸು ವಿಪಸ್ಸನ ­ಧ್ಯಾನದಲ್ಲಿ ನೆಲೆನಿಂತು ಮೊದಲಿಗೆ ಶಾಂತ­ವಾದಂತೆ ಕಂಡರೂ ಸ್ವಲ್ಪ ಸಮಯದ ನಂತರ ಭಯಾನಕ ರೂಪಗಳು ಕಾಣತೊಡಗಿ ಅವರನ್ನು ಹೆದರಿಸತೊಡಗುತ್ತವೆ.

ಅವರೆಲ್ಲರೂ ಪರಿಹಾರ­ವನ್ನು ಕೇಳಲು ಬುದ್ಧಗುರುವಿನ ಬಳಿ ಹೋಗು­ತ್ತಾರೆ. ಮೈತ್ರಿಕರುಣೆಗಳನ್ನು ಬಲಪಡಿಸಿ­ಕೊಳ್ಳದೆ ಧ್ಯಾನದಲ್ಲಿ ತೊಡಗಿದರೆ ಹೀಗಾಗುವು­­­ದೆಂದು ಬುದ್ಧ ಹೇಳುತ್ತಾನೆ. ಆಮೇಲೆ ಆ ಭಿಕ್ಷು­ಗಳು ಬುದ್ಧನ ಬೋಧನೆಯ ಅನುಸಾರ ಮೇತ್ತಾ­ಭಾವನಾ ಎಂಬ ಸಾಧನೆಯನ್ನು ಮಾಡಿ ಭಯ­ಮುಕ್ತರಾಗುತ್ತಾರೆ. ಮೈತ್ರಿ-ಕರುಣೆಯೇ ಬುದ್ಧವಚನಚಂದ್ರಿಕೆಯ ಪ್ರಶಾಂತ ಪ್ರಕಾಶ. ಅದು ನಮ್ಮೆಲ್ಲರ ಆಕಾಶ­ಗಳನ್ನೂ ಬೆಳಗ-­ತೊಡಗಲಿ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.