ವಿಜಯಪುರ: ‘ಜನ ನಮ್ ಬಳಿ ಸಮಸ್ಯೆ ಹೇಳ್ಕೊಂಡು ಬಂದಾಗ ಮುಂದಿನ ಬಾರಿ ಆ ಕೆಲ್ಸಾ ಮಾಡ್ಸೋಣ ಅಂತ ಹೇಳಿರ್ತೀವಿ. ಅದೇ ಜನ ನಿನ್ನ ಬಳಿ ಬರ್ತಿದ್ದಂತೆ ಸ್ಥಳದಲ್ಲೇ ಕಾಮಗಾರಿಗೆ ಹುಕುಂ ನೀಡ್ತೀಯಲ್ಲಪ್ಪಾ...’
‘ನಾವು ಆ ಸಮಸ್ಯೆ ಹೇಳಿದರೆ ಸ್ಪಂದಿಸೋದೇ ಇಲ್ಲ. ಜನ ನಿನ್ನ ಹತ್ತರ ಬರ್ತಿದ್ದಂತೆ ಆ ಕ್ಷಣದಲ್ಲೇ ಕಾಮಗಾರಿಗೆ ಆದೇಶ ಹೊರಡಿಸ್ತೀಯಲ್ಲಪ್ಪಾ... ನೀನೇನು ಬಿಜಾಪುರದಾಗ ಎಂಎಲ್ಎ ಎಲೆಕ್ಷನ್ಗ ನಿಲ್ಬೇಕು ಅಂದ್ಕೊಂಡಿಯಾ! ಹಂಗಿದ್ದರೆ ಅಡ್ಡಿಯಿಲ್ಲಪ್ಪ. ನಾವೂ ಸಹಕಾರ ಕೊಡ್ತೀವಿ... ನಿನ್ನ ಅಧಿಕಾರ ಚಲಾಯ್ಸು. ಏನ್ನೂ ಕೇಳಲ್ಲ...’
ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯ ವಿಜಯಕುಮಾರ ಮಂಗಳವೇಡೆ ಅವರು ಇತ್ತೀಚೆಗೆ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡ ಪರಿಯಿದು.
‘ಬಡಾವಣೆಯಲ್ಲಿ ಜನ ಮಾತಾಡ್ಕೊಳ್ಳೋಕೆ ಶುರುವಿಟ್ಟುಕೊಂಡಾರೆ. ಕಾರ್ಪೊರೇಟರ್ ಬಳಿ ಹೋದ್ರೆ ಏನೂ ಆಗಲ್ಲ. ಕಮಿಷನರ್ ಬಳಿ ಹೋಗೋಣ ಅಂತಾರೆ. ಅಕ್ಷರಶಃ ಮುಜುಗರವಾಗ್ತಿದೆ. ದೇಶಕ್ಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯಂತ; ಬಿಜಾಪುರಕ್ಕ ಹರ್ಷ ಶೆಟ್ಟಿಯಂತ. ಅಂದ್ಮ್ಯಾಲ ನಮ್ಮದೇನೈತಪ್ಪ’ ಎಂದು ಮಂಗಳವೇಡೆ, ಆಯುಕ್ತರ ಕಾಲೆಳೆದರು.
ಉಪ ಮೇಯರ್ ಗೋಪಾಲ ಘಟಕಾಂಬ್ಳೆ ‘ಆಯುಕ್ತರು ಹಂಗೇನಿಲ್ಲ’ ಅನ್ನುತ್ತಿದ್ದಂತೆ, ‘ಗೋಪಾಲ ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಬೇಡ’ ಎಂದು ಮಂಗಳವೇಡೆ ಅಬ್ಬರಿಸಿದಾಗ ಘಟಕಾಂಬ್ಳೆ ಮುಗುಳ್ನಕ್ಕು ಮೌನಕ್ಕೆ ಶರಣಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.