ADVERTISEMENT

ಸಿ.ಟಿ.ರವಿ ಬರಹ | ಕಾಂಗ್ರೆಸ್‌, ಜನರ ಕ್ಷಮೆಯಾಚಿಸಬೇಕು

ತೀರ್ಪು-ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 20:15 IST
Last Updated 30 ಸೆಪ್ಟೆಂಬರ್ 2020, 20:15 IST
ಸಚಿವ ಸಿ.ಟಿ.ರವಿ
ಸಚಿವ ಸಿ.ಟಿ.ರವಿ   

ಬಾಬರಿ ಮಸೀದಿ ಧ್ವಂಸವು ಪೂರ್ವ ನಿಯೋಜಿತವಾಗಿರಲಿಲ್ಲ ಎಂಬುದನ್ನು ಕೋರ್ಟ್‌ ಎತ್ತಿ ಹಿಡಿದಿದೆ. ತೀರ್ಪು ಸ್ವಾಗತಾರ್ಹ. ತೀರ್ಪು ವಿಳಂಬವಾದರೂ ಸತ್ಯಕ್ಕೆ ಜಯ ಸಿಕ್ಕಿದೆ.

ಕರಸೇವಕರು ಆಕ್ರೋಶ ವ್ಯಕ್ತಪಡಿಸಿ ಮಸೀದಿಯನ್ನು ಧ್ವಂಸಗೊಳಿಸಿದ್ದರು. ಅದು ಪೂರ್ವ ನಿಯೋಜಿತ ಅಲ್ಲ ಎಂದು ನಾವು ಮುಂಚಿನಿಂದಲೂ ಹೇಳಿದ್ದೆವು. ಅಯೋಧ್ಯೆಯಲ್ಲಿ ಇದ್ದ ‘ಕಳಂಕಿತ ಕಟ್ಟಡ’ ಧ್ವಂಸ ಆಗಲೇಬೇಕಿತ್ತು. ಆಗಿದ್ದು ಒಳ್ಳೆಯದೆ; ಸ್ವಾತಂತ್ರ್ಯ ನಂತರ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ನ್ಯಾಯ ನಿರಾಕರಣೆ ಮಾಡಿದ ಫಲಿತಾಂಶ ಅದು. ಆದರೆ, ಪೂರ್ವಯೋಜಿತ ಆಗಿರಲಿಲ್ಲ.

28 ವರ್ಷಗಳ ನಂತರ ತೀರ್ಪು ಪ್ರಕಟವಾಗಿದೆ. ಸಾವಿರಾರು ಪ್ರಕರಣಗಳು ತೀರ್ಪಿಗಾಗಿ ಕಾಯುತ್ತಿವೆ. ವಿಳಂಬ ನ್ಯಾಯವು ನ್ಯಾಯ ನಿರಾಕರಣೆಗೆ ಸಮ ಎಂದು ಹೇಳಲಾಗುತ್ತದೆ. ಎಷ್ಟೋ ಪ್ರಕರಣಗಳಲ್ಲಿ ಅದಕ್ಕೆ ಸಂಬಂಧಪಟ್ಟವರು
ಬದುಕಿದ್ದ ಕಾಲಘಟ್ಟದಲ್ಲಿ ತೀರ್ಪು ಪ್ರಕಟವಾಗಲ್ಲ. ವಿಳಂಬ ನ್ಯಾಯದ ಬಗ್ಗೆ ನ್ಯಾಯಾಂಗವು ಪರಾಮರ್ಶೆ ಮಾಡಬೇಕು.

ADVERTISEMENT

ಸ್ವಾತಂತ್ರ್ಯ ಪೂರ್ವದಲ್ಲಿ ಅಯೋಧ್ಯಗೆ ಸಂಬಂಧಿಸಿದಂತೆ ನೂರಾರು ಹೋರಾಟಗಳು ನಡೆದಿದ್ದವು. ಆಗ ಪರಕೀಯರು ಭಾವನೆಗಳನ್ನು ಅದುಮಿಟ್ಟಿದ್ದರು. ನಂತರ ನಮ್ಮನ್ನು ಆಳುವವರು ಸತ್ಯ ಮರೆಮಾಚುವ ಕೆಲಸ ಮಾಡಿದ್ದರು. ‌

ಬಾಬರಿ ಮಸೀದಿ ಧ್ವಂಸವನ್ನು ನೆಪವಾಗಿಟ್ಟುಕೊಂಡು ಆಗ ಉತ್ತರ ಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶ, ಮಧ್ಯಪ್ರದೇಶದಲ್ಲಿ ಆಡಳಿತದಲ್ಲಿದ್ದ ಬಿಜೆಪಿ ನೇತೃತ್ವದ ಸರ್ಕಾರವನ್ನು ಸಂವಿಧಾನಬಾಹಿರವಾಗಿ ವಜಾ ಮಾಡಲಾಗಿತ್ತು. ನಾಲ್ಕು ರಾಜ್ಯಗಳ ಸರ್ಕಾರ ವಜಾ ಮಾಡಿದ್ದಕ್ಕೆ, ಧ್ವಂಸ ಪೂರ್ವಯೋಜಿತ ಎಂದು ಆರೋಪಿಸಿದ್ದ ಕಾರಣಕ್ಕೆ ಕಾಂಗ್ರೆಸ್‌ ದೇಶದ ಜನರ ಕ್ಷಮೆಯಾಚಿಸಬೇಕು.

ಈ ತೀರ್ಪು ಹಿರಿಯ ನಾಯಕ ಎಲ್‌.ಕೆ.ಅಡ್ವಾಣಿ ಅವರಿಗೆ ಸಮಾಧಾನ ತರುವ ಸಂಗತಿ. ಧ್ವಂಸದ ಸಂದರ್ಭದಲ್ಲಿ ನಾನೂ ಭಾಗವಹಿಸಿದ್ದೆ. ಅಡ್ವಾಣಿ, ಉಮಾಭಾರತಿ ಎಲ್ಲರೂ ಗುಂಪನ್ನು ನಿಯಂತ್ರಿಸಲು ಪ್ರಯತ್ನಿಸಿದರು. ಅವರು ನಿರ್ವಹಿಸಿದ ಪಾತ್ರದ ಬಗ್ಗೆ ಸ್ಪಷ್ಟತೆ ಇತ್ತು.

ಸ್ವಾತಂತ್ರ್ಯ ನಂತರದ ದಶಕಗಳ ಕಾಲದ ಹೋರಾಟ, ಸ್ವಾತಂತ್ರ್ಯಪೂರ್ವಕಾಲದ ಹೋರಾಟದ ಆಕ್ರೋಶ, ಸಂಯಮದ ಕಟ್ಟೆ ಒಡೆದು ಕರಸೇವಕರು ಆ ಹೆಜ್ಜೆ ಇಟ್ಟರು.

1992 ಡಿಸೆಂಬರ್‌ 3ಕ್ಕೆ ಅಯೋಧ್ಯೆಗೆ ಹೋಗಿದ್ದೆವು. ಆಗ ಸರಯೂ ನದಿಯಿಂದ ಮೂರು ದಿನ ಮರಳು ತರುವ ಕೆಲಸವನ್ನು ನಮಗೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.