ಮುಂಜಾನೆ ಬಸ್ ಕಾಯ್ತಾ ಕುಳ್ತಿದ್ದ ಚಂದ್ರಪ್ಪ. ಅಷ್ಟೊತ್ಗೆ ಕೈಯಲ್ಲಿ ಐದಾರು ಗೋಣಿಚೀಲ ಸುತ್ತಿ ಹಿಡ್ಕಂಡ್ ಬರ್ತಿದ್ದ ಸೌತೆಕಾಯಿ ಸಣ್ಣಣ್ಣನ್ನ ಕಂಡು‘ಏನ್ ಸಣ್ಣಣ್ಣ ಹೆಂಗೈತೆ ಸೌತೆಕಾಯಿ ಯಾಪಾರ? ಒಳ್ಳೆ ಬಿಸ್ಲು, ಚೆನ್ನಾಗೇ ಇರ್ತೈತೆ ಬಿಡು’ ಅಂತ ನಶ್ಯದ ಡಬ್ಬಿ ತೆಗ್ದು ಮೂಗೊಳ್ಗೆ ತುಂಬಿಸ್ಕೊಂಡ.
‘ಏ ಸೌತೆಕಾಯಿ ಯಾಪಾರ ಬುಟ್ಟು ತಿಂಗ್ಳಾಯ್ತು ಕಣಣ್ಣ’ ಅಂತ ನಷ್ಯಕ್ಕೆ ಕೈ ಒಡ್ದ ಸಣ್ಣಣ್ಣ.
‘ಹೌದಾ? ಈ ಬಿಸ್ಲೊತ್ನಲ್ಲಿ ಸ್ಯಾನೆ ಯಾಪಾರಾಗೋದು ಯಾಕ್ಬುಟ್ಬುಟ್ಟೆ?’
‘ಈಗ ನಿಂಬೇಹಣ್ ಯಾಪಾರ ಹಿಡ್ಕೊಂಡಿವ್ನಿ.ಮೈಸೂರು ಮಾರ್ಕೆಟ್ಗೆ ಹೊಂಟೆ ನೋಡು’. ‘ಏನೂ ನಿಂಬೆಹಣ್ಣಾ... ಶರ್ಬತ್ ಗಿರ್ಬತ್ ಮಾಡ್ತೀಯೋ ಹೆಂಗಪ್ಪ...?’ ತಮಾಷೆ ಮಾಡ್ದ ಚಂದ್ರಣ್ಣ.
‘ಅಹ್ಹಹ್ಹ... ಯಾವ್ ಶರ್ಬತ್ತೂ ಇಲ್ಲ ಏನೂ ಇಲ್ಲ.ಯಲೆಕ್ಷನ್ ಟೈಮ್ ಅಲ್ವಾ ಚಂದ್ರಣ್ಣ.ಸೀಸನ್ ನೋಡ್ಕಂಡು ಯಾಪಾರ ಮಾಡುದ್ರೆ ನಾಲ್ಕ್ ಕಾಸ್ ಸಂಪಾದ್ನೆ ಮಾಡ್ಕೊಬೋದು ನೋಡು’ ಅಂತ ಯಾಪಾರದ ಗುಟ್ ಬಿಟ್ಕೊಟ್ಟ ಸಣ್ಣಣ್ಣ.
‘ಅಯ್ಯೋ ನಿನ್ ಮನೆ ಕಾಯ್ವಾಗಾ! ಎಲೆಕ್ಷನ್ಗೂ ನಿಂಬೆಹಣ್ಗೂ ಏನ್ ಸಂಬಂಧ್ವಪ್ಪಾ...’
‘ಯೆಲಕ್ಷನ್ನಾಗ ಹೆಂಗಾರ ಮಾಡಿ ಗೆಲ್ಬೇಕು ಅಂತ ಮಾರಮ್ಮನ ಗುಡಿಯಿಂದ ಹಿಡ್ದು ದೊಡ್ ದೊಡ್ ದೇವಸ್ಥಾನದ್ಗಂಟ ಹರಕೆ ಹೊತ್ತವ್ರೆ. ಯಜ್ಞ ಯಾಗ ಮಾಡ್ತಾವ್ರೆ. ಪೂಜಾರಪ್ಪ, ಸ್ವಾಮೀಜಿಗಳು ಕೊಡೋ ನಿಂಬೇಹಣ್ಣುಗಳ ಅಂಗೀ ಜೇಬಲ್ಲಿ, ಪ್ಯಾಂಟ್ ಜೇಬಲ್ಲಿ, ಎರಡೂ ಕೈಗಳಲ್ಲಿ ಹಿಡ್ಕೊಂಡು ಓಡಾಡ್ತಾವ್ರೆ. ಸ್ಟೇಜ್ ಮ್ಯಾಲ್ ಕೂತಿರೋರ್ ಕೈಗೆಲ್ಲ ಕೊಡ್ತಾವ್ರೆ.ಇದುನ್ನೆಲ್ಲ ಟೀವೀಲಿ ನೋಡಿಲ್ವ ಚಂದ್ರಣ್ಣ’ ಅಂತ ಟಾಂಗ್ ಕೊಟ್ಟ ಸಣ್ಣಣ್ಣ.
‘ಓಹೋ... ನೀನು ಸ್ಯಾನೆ ಬುದ್ವಂತ ಬುಡು. ಹಿಂಗ್ ಮಾಡ್ಲಿಲ್ಲ ಅಂದಿದ್ರೆ ಮೂರಂತಸ್ತಿನ ಮನೆ ಕಟ್ಟೋಕಾಗ್ತಿತ್ತಾ...! ಒಟ್ನಲ್ಲಿ ಆ ನಿಂಬೆಹಣ್ಣುಗಳ ಮೇಲಿರೋ ನಂಬ್ಕೆ ಮತದಾರರ ಮೇಲಿಲ್ಲ ನೋಡು’ ಅನ್ನೋಹೊತ್ಗೆ ಡ್ರೈವರ್ ಹಾರ್ನ್ ಮಾಡ್ದ.ಇಬ್ರೂ ಓಡ್ಕೊಂಡ್ ಹೋಗಿ ಬಸ್ ಹತ್ಕಂಡ್ರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.