‘ಇಂಗ್ಲಿಷನ್ನು ದೇಶದಿಂದ ಓಡಿಸುವ ಕ್ವಿಟ್ ಇಂಡಿಯಾ ಚಳವಳಿ ಶುರುವಾದಂತಿದೆ ಕಣ್ರೀ...’ ನ್ಯೂಸ್ಪೇಪರ್ ಓದುತ್ತಾ ಸುಮಿ ಹೇಳಿದಳು.
‘ಪರಭಾಷೆ, ಪರ ಸಂಸ್ಕೃತಿ ನಮಗೆ ಬೇಡ ಅಂತ ಈ ಹೋರಾಟ ನಡೆದಿದೆಯಂತೆ’ ಎಂದ ಶಂಕ್ರಿ.
‘ಇಂಗ್ಲಿಷ್ ತೊಲಗಿದರೆ ಕನ್ನಡ ಮೀಡಿಯಂಗೆ ಮಾನ್ಯತೆ ಸಿಗುತ್ತದೆ ಬಿಡಿ’.
‘ಆಸೆ ಪಡಬೇಡ, ದೇಸಿ ಮೀಡಿಯಂಗಳನ್ನು ಮೂಲೆಗೆ ತಳ್ಳಿ ಹಿಂದಿ ಮೀಡಿಯಂ ಮೆರೆದಾಡುತ್ತದೆ... ದೇಶದ ಇತಿಹಾಸ ಕೆದಕಿ ನೋಡು. ಬಲಾಢ್ಯ ಸಾಮ್ರಾಟರು ಪ್ರಾಂತೀಯ ರಾಜರನ್ನು ಸದೆಬಡಿದು ರಾಜ್ಯ ವಿಸ್ತರಿಸಿ ಕೊಂಡಿಲ್ಲವೇ, ಹಾಗೇ ಪ್ರಾದೇಶಿಕ ಭಾಷೆಗಳ ಧ್ವನಿ ಅಡಗಿಸಿ ಹಿಂದಿಗೆ ಪಟ್ಟ ಕಟ್ಟಿ ಹಿಂದಿಸ್ತಾನ ಸ್ಥಾಪನೆ ಮಾಡುವ ಪ್ರಯತ್ನ ನಡೆದಿದೆಯಂತೆ’.
‘ಹೌದೇನ್ರೀ?!...ಹೀಗಾದ್ರೆ ನಮ್ಮ ಕನ್ನಡವನ್ನು ಕಲಿಸೋದು, ಉಳಿಸೋದು ಹೇಗೆ?’
‘ಹಿಂದಿ ಬಳಸಿ, ಕನ್ನಡವನ್ನು ಬಳಸದೆ ಉಳಿಸಿ, ಸೇವ್ ಕನ್ನಡ ಎನ್ನುವಂತಾಗುತ್ತದೆ. ಗೋಗರೆದು ಕೇಳಿಕೊಂಡರೆ ಹಿಂದಿ ಮೀಡಿಯಂ ಶಿಕ್ಷಣದಲ್ಲಿ 20- 30 ಮಾರ್ಕ್ಸ್ನ ಕನ್ನಡ ಕಲಿಯಲು ಅವಕಾಶ ಸಿಕ್ಕರೆ ನಮ್ಮ ಪುಣ್ಯ!’
‘ಹಿಂದಿ ಭಾಷೆ ಜಾರಿಯಿಂದ ಏನೇನು ಅನುಕೂಲವಂತೆ?’
‘ಅನುಕೂಲವಿದೆಯಂತೆ. ಪ್ರಾದೇಶಿಕ ಭಾಷೆಗಳು ಹಿಂದಿಯಲ್ಲಿ ಐಕ್ಯವಾಗಿ ಏಕ ಭಾಷೆಯ ಏಕ ದೇಶ ಸಾಧ್ಯವಂತೆ. ಭಾಷಾ ಭೇದ, ರಾಜ್ಯಗಳ ಗಡಿ ವಿವಾದ, ನದಿ ವಿವಾದ ಬಗೆಹರಿಯಬಹುದು. ಗಂಗಾ- ಕಾವೇರಿ ಸಂಗಮವಾಗಬಹುದು, ಇಲ್ಲಿನ ತುಂಗೆ, ಕೃಷ್ಣೆ ದೆಹಲಿ ಕಡೆ ಹರಿಯಬಹುದು...’
‘ಹೀಗಾದ್ರೆ ನಮ್ಮ ಭಾಷೆ, ಸಂಸ್ಕೃತಿ, ಆಚಾರ- ವಿಚಾರಗಳನ್ನು ಹಿಂದಿಗೆ ಅನುವಾದ ಮಾಡಿಕೊಂಡು ಬಾಳಬೇಕಾಗುತ್ತದೆ ಅಲ್ವೇನ್ರೀ?’
‘ಹೌದು, ಹಿಂದಿ ಮೀಡಿಯಂ ಶಿಕ್ಷಣದಿಂದ ಪ್ರತಿಭಾ ಪಲಾಯನ ತಡೆಯಬಹುದಂತೆ’.
‘ಇನ್ನೆಲ್ಲಿಗೆ ಪಲಾಯನ, ಇಂಗ್ಲಿಷ್ ಜ್ಞಾನ ಪಡೆಯಲಾಗದ ಪ್ರತಿಭೆಗಳು ವಿದೇಶಕ್ಕಂತೂ ಹಾರಲಾಗುವುದಿಲ್ಲವಲ್ಲ...’ ಕೊಂಕು ನುಡಿದಳು ಸುಮಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.