ಮಣ್ಣೆ ರಾಜು
‘ಮಂತ್ರಿ ಮಾನಪ್ಪ ನಮ್ಮ ಮನೆಗೆ ಬಂದಿದ್ರೂರೀ...’ ಸುಮಿ ಸಡಗರಪಟ್ಟಳು.
‘ಅವರೀಗ ಚುನಾವಣಾ ಅಭ್ಯರ್ಥಿ, ವೋಟು ಕೇಳಲು ಬಂದಿರ್ತಾರೆ...’ ಅಂದ ಶಂಕ್ರಿ.
‘ಹೌದೂರೀ, ಬಾಗಿಲಲ್ಲಿ ನಾನು ಹಾಕಿದ್ದ ರಂಗೋಲಿ ನೋಡಿ, ತುಂಬಾ ಚೆನ್ನಾಗಿ ರಂಗೋಲಿ ಹಾಕಿದ್ದೀರಿ ಅಂತ ಮೆಚ್ಚಿಕೊಂಡರು. ಮಂತ್ರಿ ಹಿಂದೆ ಬಂದಿದ್ದ ಟೀವಿಯವರು ನನ್ನ ರಂಗೋಲಿ ವಿಡಿಯೊ ಮಾಡಿಕೊಂಡು ನನ್ನನ್ನೂ ಮಾತನಾಡಿಸಿದ್ರು, ‘ರಸ್ತೆ ತುಂಬಾ ರಂಗೋಲಿ ಹಾಕಬೇಕು ಅನ್ನೋ ಆಸೆ ಇದೆ, ರಂಗೋಲಿ ಪುಡಿ ದುಬಾರಿ. ಸರ್ಕಾರ ರಂಗೋಲಿ ಭಾಗ್ಯ ಯೋಜನೆ ಜಾರಿಗೆ ತಂದು ಮನೆಮನೆಗೂ ಉಚಿತವಾಗಿ ರಂಗೋಲಿ ಪುಡಿ ವಿತರಣೆ ಮಾಡಬೇಕು’ ಎಂದು ಟೀವಿಯಲ್ಲಿ ಒತ್ತಾಯ ಮಾಡಿದೆ’.
‘ವೆರಿಗುಡ್, ಮನೆಗೆ ಬಂದ ಮಂತ್ರಿಗೆ ತಿಂಡಿ-ಕಾಫಿ ಕೊಟ್ಟೋ ಇಲ್ವೋ?’
‘ಚಿತ್ರಾನ್ನ ಮಾಡಿದ್ದೀನಿ ತಿನ್ನಿ ಅಂದೆ, ಬೇಡ ಅಂತ ಶುಗರ್ಲೆಸ್ ಕಾಫಿ ಕುಡಿದರು... ಯಜಮಾನ್ರು ಚೆನ್ನಾಗಿದ್ದಾರಾ, ಮಕ್ಕಳು ಏನು ಓದುತ್ತಿದ್ದಾರೆ ಅಂತೆಲ್ಲಾ ನಮ್ಮ ಆರೋಗ್ಯ, ಸೌಭಾಗ್ಯ ವಿಚಾರಿಸಿದರು’.
‘ನಮ್ಮದಿರಲಿ, ಮಂತ್ರಿ ಆರೋಗ್ಯವಾಗಿದ್ದಾರಂತಾ?’
‘ಇದ್ದಂತಿಲ್ಲಾರೀ, ಟೀವಿ ನ್ಯೂಸ್ನಲ್ಲಿ ನಾವು ನೋಡುತ್ತಿದ್ದ ಮಂತ್ರಿಯ ಮುಖದ ಕಲರ್, ಖದರ್ ಡಲ್ ಆಗಿತ್ತು’.
‘ಮತ ಯಾಚನೆಗಾಗಿ ಉರಿಬಿಸಿಲಿನಲಿ ಬೀದಿಬೀದಿ ಅಲೆದಾಡಿ ಗ್ಲಾಮರ್ ಕಳಕೊಂಡಿದ್ದಾರೆ’.
‘ಕೈಗೊಂದು, ಕಾಲಿಗೊಂದು ಆಳು, ಕಾರಿಳಿಯಲು ಬಾಗಿಲು ತೆರೆಯೋರು, ಕಾರಿಳಿದಾಗ ಹಾರ ಹಾಕಿ ಕೈ ಮುಗಿಯೋರು... ಹೀಗೆಲ್ಲಾ ಮಹಾರಾಜನಂತೆ ಮೆರೆಯುತ್ತಿದ್ದ ಮಂತ್ರಿ ಇವತ್ತು ವೋಟಿಗಾಗಿ ಮನೆಮನೆಗೆ ಅಲೆಯುವ ಸ್ಥಿತಿ ಬಂತಲ್ರೀ, ಪಾಪ...’
‘ಐದು ವರ್ಷದ ಕಾಲಚಕ್ರದ ಬದಲಾವಣೆ. ನಾವು ಹುಡುಕಿಕೊಂಡು ಹೋದರೂ ಸಿಗದ ಮಂತ್ರಿ ಇವತ್ತು ನಮ್ಮನ್ನೇ ಹುಡುಕಿಕೊಂಡು ನಮ್ಮ ಮನೆ ಬಾಗಿಲಿಗೆ ಬರುವಂತಾಗಿದೆ. ಇದೆಲ್ಲಾ ಪ್ರಜಾಪ್ರಭುತ್ವ ಎನ್ನುವ ವಿಧಿಯಾಟ...’ ಎಂದ ಶಂಕ್ರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.