ADVERTISEMENT

ಚುರುಮುರಿ: ಸರ್ಕಾರಿ ಸ್ಪೀಡ್

ಮಣ್ಣೆ ರಾಜು
Published 25 ಜನವರಿ 2022, 19:45 IST
Last Updated 25 ಜನವರಿ 2022, 19:45 IST
ಚುರುಮುರಿ
ಚುರುಮುರಿ   

‘ಸರ್ಕಾರದ ಸ್ಪೀಡ್ ಕುಸಿದುಹೋಗಿದೆಯಂತೆ. ಆಡಳಿತದ ವೇಗ ಹೆಚ್ಚಿಸಿಕೊಳ್ಳದಿದ್ದರೆ ಮುಂದಿನ ಚುನಾವಣೆಯ ಗುರಿ ತಲುಪುವುದು ಕಷ್ಟ ಅಂತ ಶಾಸಕರು ಆತಂಕಗೊಂಡಿದ್ದಾರಂತೆ ಕಣ್ರೀ...’ ಎಂದಳು ಸುಮಿ.

‘ಹೌದಂತೆ, ಮಂತ್ರಿಗಳ ಕಾರಿನ ಸ್ಪೀಡಿಗಿಂತ ವಿರೋಧ ಪಕ್ಷಗಳ ಪಾದಯಾತ್ರೆ ವೇಗವೇ ಹೆಚ್ಚಾಗಿದೆಯಂತೆ’ ಅಂದ ಶಂಕ್ರಿ.

‘ಸರ್ಕಾರಿ ಕಾರುಗಳನ್ನ ರಿಪೇರಿ ಮಾಡಿಸಿದರೆ ಇಲ್ಲವೆ ರೀಪ್ಲೇಸ್ ಮಾಡಿಸಿದರೆ ಆಡಳಿತದ ವೇಗ ಹೆಚ್ಚಾಗಬಹುದು’.‌

ADVERTISEMENT

‘ಕಾರುಗಳ ಕಂಡೀಷನ್ ಚೆನ್ನಾಗೇ ಇದೆ ಯಂತೆ, ಕಂಡೀಷನ್ ಕೆಟ್ಟಿರುವ ಮಂತ್ರಿಗಳನ್ನು ರೀಪ್ಲೇಸ್ ಮಾಡಿದರೆ ಅಭಿವೃದ್ಧಿ ವೇಗ ಹೆಚ್ಚುತ್ತದೆಯಂತೆ’.

‘ಸರ್ಕಾರದ ದುಡ್ಡೆಲ್ಲಾ ಕೊರೊನಾ ಪಾಲಾಗು ತ್ತಿದೆ, ಲಾಭದಾಯಕ ಖಾತೆಗಳೂ ಅನುದಾನ
ಇಲ್ಲದೆ ನಷ್ಟ ಅನುಭವಿಸುತ್ತಿವೆಯಂತೆ. ಇಂಥಾ ಖಾಲಿ ಖಾತೆ ಇಟ್ಟುಕೊಂಡು ಮಂತ್ರಿಗಳು ಕಾರು ತಳ್ಳಿಕೊಂಡು ಸರ್ಕಾರವನ್ನು ಸಾಗಿಸಲಾಗುತ್ತಾ?’

‘ಅಲ್ವಂತೆ, ಮಂತ್ರಿಗಿರಿ ತಮ್ಮ ಆಜನ್ಮಸಿದ್ಧ ಲಕ್ಕು ಅಂತ ಹಲವು ವರ್ಷಗಳಿಂದ ಗೂಟದ ಕಾರಿನಲ್ಲಿ ಗೂಟ ಹೊಡೆದುಕೊಂಡಿರುವ ಮಂತ್ರಿಗಳನ್ನು ಕೆಳಗಿಳಿಸಿ, ಉತ್ಸಾಹಿಗಳನ್ನು ಕಾರು ಹತ್ತಿಸಿದರೆ ಸ್ಪೀಡ್ ಇಂಪ್ರೂವ್ ಆಗುತ್ತೆ ಅಂತ ಯತ್ನಾಳ್, ರೇಣುಕಾಚಾರ್ಯರಂಥವರು ಹೇಳ್ತಿದ್ದಾರೆ’.

‘ಸಿಎಂ ಕಾರ್ಯದರ್ಶಿ ರೇಣುಕಾಚಾರ್ಯರಿಗೆ ಗೂಟದ ಕಾರು ನೀಡಲಾಗಿದೆಯಲ್ಲ’.

‘ಮಕ್ಕಳ ಆಟದ ಕಾರಿನಂತಹ ಆ ಗೂಟದ ಕಾರು ಹತ್ತಿದರೆ ಚುನಾವಣೆ ರೇಸ್ ಗೆಲ್ಲಲಾಗದು, ಮೈಲೇಜ್ ಇರುವ ಮಂತ್ರಿ ಕಾರು ಬೇಕು ಅಂತ ಕೇಳ್ತಿದ್ದಾರೆ’.

‘ಹೌದ್ಹೌದು, ಇಲ್ಲವಾದರೆ ವಿರೋಧ ಪಕ್ಷಗಳ ವೇಗದ ಎದುರು ಆಡಳಿತ ಪಕ್ಷದ ಸ್ಪರ್ಧೆ ಆಮೆ, ಮೊಲದ ರನ್ನಿಂಗ್ ರೇಸ್ ಥರ ಆಗಿಬಿಡುತ್ತದೆ. ಆಮೆ ಗೆದ್ದು ಅವಾರ್ಡ್ ಪಡೆಯುತ್ತದೆ, ಮೊಲ ಬಿದ್ದು ಆಸ್ಪತ್ರೆ ವಾರ್ಡ್ ಸೇರಬೇಕಾಗುತ್ತದೆ. ಹಾಗಾಗಲು ಬಿಡದೆ ಬೇಗ ಸಚಿವ ಸಂಪುಟ ಪುನರ್‌ರಚನೆ ಮಾಡಿ ಸರ್ಕಾರದ ಸ್ಪೀಡ್ ಹೆಚ್ಚಿಸಿ ಅಂತ ಸಚಿವಾಕಾಂಕ್ಷಿಗಳು ಒತ್ತಾಯ ಮಾಡ್ತಿದ್ದಾರೆ...’ ಎಂದು ಸುಮಿ ಹೇಳಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.