ADVERTISEMENT

ಚುರುಮುರಿ: ಮಂತ್ರಿಗಿರಿ ಕಿರಿಕಿರಿ

ಮಣ್ಣೆ ರಾಜು
Published 18 ನವೆಂಬರ್ 2020, 19:30 IST
Last Updated 18 ನವೆಂಬರ್ 2020, 19:30 IST
ಚುರುಮುರಿ
ಚುರುಮುರಿ   

ಮಂತ್ರಿ ಆಗಬೇಕು ಅಂತ ಎಮ್ಮೆಲ್ಲೆ ಎಲ್ಲಣ್ಣೋರು ಹೋಟೆಲ್‍ನಲ್ಲಿ ಬೆಂಬಲಿಗರ ಸಭೆ ನಡೆಸಿದರು. ಅದ್ಧೂರಿ ಪೂಜೆ ಮಾಡಿಸಿ ಪ್ರಭಾವಿ ದೇವರುಗಳ ಮೊರೆ ಹೋದರು. ಮುಖ್ಯವಾಗಿ ಮುಖ್ಯಮಂತ್ರಿಗಳ ಮೇಲೆ ಭಾರ ಹಾಕಿದ್ದರು.

ಸಿ.ಎಂ ಯಾವ ಖಾತೆ ಕೊಡ್ತಾರೋ, ಆ ಖಾತೆ ಬಗ್ಗೆ ಏನೇನು ಕೇಳ್ತಾರೋ ಅಂತ ಎಲ್ಲಣ್ಣೋರು ಚಿಂತೆಗೀಡಾಗಿದ್ದರು.

‘ಯಾವ ಖಾತೆ ಕೇಳಬೇಕು ಅಂದುಕೊಂಡಿದ್ದೀರೋ ಆ ಖಾತೆ ಬಗ್ಗೆ ಹಾರ್ಡ್ ಸ್ಟಡಿ ಮಾಡಿಕೊಂಡು ನಾಲೆಡ್ಜ್ ಬೆಳೆಸಿಕೊಂಡು ಸಿ.ಎಂ ಟೆಸ್ಟಿನಲ್ಲಿ ಪಾಸಾಗಿ’ ಎಂದರು ಎಮ್ಮೆಲ್ಲೆ ಪತ್ನಿ.

ADVERTISEMENT

‘ಸಿ.ಎಂ ಯಾವ ಖಾತೆ ವಹಿಸ್ತಾರೋ ಯಾರಿಗೆ ಗೊತ್ತು, ಯಾವುದನ್ನು ಕೇಳಲಿ?’

‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಕೇಳಬೇಡಿ. ಹೆಂಡ್ತಿ, ಮಕ್ಕಳ ಬಗ್ಗೆ ನೀವು ಗಮನ ಕೊಟ್ಟಿರೋದು ಅಷ್ಟರಲ್ಲೇ ಇದೆ, ಅದರಲ್ಲಿ ಅನುಭವವಿಲ್ಲ... ಅನುಭವ ಇದೆ ಅಂತ ಅಬಕಾರಿ ಖಾತೆ ಕೇಳಬೇಡಿ...’

‘ಶಿಕ್ಷಣ ಖಾತೆ ಕೇಳಲೆ?’

‘ಬೇಡರೀ, ನೀವು ಒಂದು ದಿನವೂ ಮಕ್ಕಳಿಗೆ ಪಾಠ ಹೇಳಿಕೊಟ್ಟಿಲ್ಲ. ನಿಮ್ಮ ಮಾರ್ಕ್ಸ್ ಕಾರ್ಡ್‌ಗಳಲ್ಲೂ ಮಹತ್ವದ ಸಾಧನೆ ದಾಖಲಾಗಿಲ್ಲ, ಶಿಕ್ಷಣ ನಿಮಗೆ ಸರಿಹೋಗಲ್ಲ’.

‘ಕನ್ನಡ ಮತ್ತು ಸಂಸ್ಕೃತಿ ಖಾತೆ ಕೇಳ್ತೀನಿ’.

‘ಅದನ್ನು ಕೇಳಲೇಬೇಡಿ, ವೇದಿಕೆಗಳಲ್ಲಿ ನಿಮ್ಮ ಕನ್ನಡ ಭಾಷಣ, ಭಾಷೆಯ ಸಂಸ್ಕೃತಿ ಬಗ್ಗೆ ವಿರೋಧ ಪಕ್ಷದವರು ಅಪಹಾಸ್ಯ ಮಾಡ್ತಲೇ ಇರ್ತಾರೆ. ಆ ಖಾತೆ ವಹಿಸಿಕೊಂಡು ನಗೆ
ಪಾಟಲಿಗೀಡಾಗಬೇಡಿ’ ಎಂದು ಪತ್ನಿ ಹೇಳುವಾಗ ಎಮ್ಮೆಲ್ಲೆಯವರ ಮೊಬೈಲ್ ರಿಂಗ್ ಆಯಿತು.

ರಿಸೀವ್ ಮಾಡಿ ಮಾತನಾಡಿ ಅಪ್ಸೆಟ್ ಆದರು.

‘ಸಿ.ಎಂ ಆಫೀಸ್‍ನಿಂದ ಫೋನ್, ನನ್ನ ಸಂಘಟನಾ ಸಾಮರ್ಥ್ಯವನ್ನು ಹೈಕಮಾಂಡ್ ಮೆಚ್ಚಿದೆಯಂತೆ. ನನ್ನನ್ನು ಮಂತ್ರಿ ಬದಲು ಪಕ್ಷದ ಸಂಘಟನೆ ಮಾಡಲು ರಾಜ್ಯ ಸಮಿತಿ ಪದಾಧಿಕಾರಿಯಾಗಿ ನೇಮಿಸಲು ಸಲಹೆ ಮಾಡಿದೆಯಂತೆ...’ ಎಂದು ಸಣ್ಣಗಿನ ದನಿಯಲ್ಲಿ ಹೇಳಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.