ಕುಟುಂಬದ ಏಳಿಗೆಗೆ ಯಾರ ಕೊಡುಗೆ ಎಷ್ಟಿದೆ ಎಂಬ ಬಗ್ಗೆ ನನ್ನ ಮತ್ತು ಹೆಂಡತಿ ನಡುವೆ ವಾಗ್ವಾದ ಶುರುವಾಯಿತು.
‘ಯಾರಿಗ್ ಏನೇ ಆದರೂ ನಾನು ಮಾತ್ರ ಈ ಮನೆಯಲ್ಲಿ ಗಟ್ಟಿಯಾಗಿ ಇರಬೇಕು. ಹಗಲು– ರಾತ್ರಿ ನಾನು ಬಂಡೆಯಂತೆ ಕೆಲಸ ಮಾಡ್ತಿದೀನಿಲ್ಲಿ’ ವಾದ ಮಂಡಿಸಿದಳು ಮಡದಿ.
‘ಬಂಡೆ–ಗಿಂಡೆ ಎಂಬೆಲ್ಲ ಪದಗಳನ್ನ ಬಳಸಬೇಡ, ನನಗೆ ಬೇರೆಯವರು ನೆನಪಾಗ್ತಾರೆ’ ವಾದದಲ್ಲಿಯೂ ವಿನೋದ ತುರುಕಲು ನೋಡಿದೆ.
ಹೆಂಡತಿಗೆ ತಕ್ಷಣಕ್ಕೆ ಅರ್ಥವಾಗದಿದ್ದರೂ, ‘ಹೀಗೆ, ಚಿತ್ರ–ವಿಚಿತ್ರವಾಗಿ ಮಾತನಾಡೋದಷ್ಟೇ ಗೊತ್ತು ನಿಮಗೆ. ನನ್ನಂಥ ಸೋಷಿಯಲಿಸ್ಟ್– ಸೆಕ್ಯುಲರಿಸ್ಟ್ ಮನೋಭಾವದಳು ಈ ಏರಿಯಾದಲ್ಲಿಯೇಯಾರೂ ಇಲ್ಲ. ಬೇಕಾದರೆ ಅಕ್ಕ–ಪಕ್ಕದ ಮನೆಯವರನ್ನ ಕೇಳಿನೋಡಿ’.
‘ಆ ಪದಗಳನ್ನೂ ಬಳಸಬೇಡ, ನನಗೆ ಮತ್ತೊಬ್ಬರು ನೆನಪಾಗ್ತಾರೆ’ ಬಾಳೆಹಣ್ಣು ತಿನ್ನುತ್ತಾ ಹೇಳಿದೆ. ‘ನಾನು ಒಂದಿನ ಮನೆಯಲ್ಲಿ ಅಡುಗೆ ಮಾಡಿಡದೆ ಹೋದರೆ ನಿಮ್ಮ ಮಕ್ಕಳು ಕಿತ್ತಾಡಿ, ದೊಡ್ಡ ಕ್ರಾಂತಿಯನ್ನೇ ಮಾಡಿರ್ತಾರೆ ಗೊತ್ತಾ’ ನನ್ನ ಮೇಲಿನ ಕೋಪ ಮಕ್ಕಳತ್ತ ತಿರುಗಿತು.
‘ಕ್ರಾಂತಿ–ಗೀಂತಿ ಅನ್ನಬೇಡ ಮಾರಾಯ್ತಿ. ಯಾರು ಯಾರಿಗೋ ಏನೇನೋ ನೆನಪಾಗಿ ನ್ಯೂಸ್ ಚಾನಲ್ಗಳವರೆಲ್ಲ ಫುಲ್ ಬ್ಯುಸಿ ಆಗೋ ಥರ ಆದೀತು…’ ನಗುತ್ತಾ ಮುಂದುವರಿದು ಹೇಳಿದೆ: ‘ನಿನ್ನ ರೀತಿ ನಾನು ಅದನ್ನು ಮಾಡಿದೆ, ಇದನ್ನು ಮಾಡಿದೆ ಅಂತ ಹೇಳಲ್ಲ. ನನ್ನದೇನಿದ್ದರೂ ಮನ್ ಕಿ ಬಾತ್. ಅಂದ್ರೆ ಮನಸಲ್ಲೇ ಹೇಳ್ಕೊಂಡು ಸುಮ್ಮನಾಗ್ತೀನಿ’.
‘ಅಂಥ ಒನ್ ವೇಗಳೆಲ್ಲ ನನ್ನ ಹತ್ತಿರ ನಡೆಯಲ್ಲ. ಈ ಮನೆಗೆ ನಾನೇ ಹೈಕಮಾಂಡ್. ಇಲ್ಲಿ ನನ್ನ ಮಾತೇ ಶಾಸನ’.
ನಾನು ವಾದದಲ್ಲಿ ಸೋಲ್ತಿದಿನೇನೋ ಅನಿಸತೊಡಗಿತು. ರೊಚ್ಚಿಗೆದ್ದು ಹೇಳಿದೆ, ‘ನೀನು ಹೈಕಮಾಂಡ್ ಆದರೆ, ನಾನು ಸಿಎಂ ಇದ್ದಂಗೆ’.
ಜೋರಾಗಿ ನಕ್ಕ ಹೆಂಡತಿ, ‘ಅದೇನಂತ ಮಾತಾಡ್ತೀರ್ರೀ… ಸಿಎಂಗಿಂತ ಹೈಕಮಾಂಡ್ ದೊಡ್ಡದಲ್ವ?’ ಎಂದಳು.
‘ಎಲ್ಲದಕ್ಕೂ ಕಾಲವೇ ಉತ್ತರ ಕೊಡಲಿದೆ’ ಎಂದು ವೇದಾಂತಿಯಂತೆ ಹೇಳಿ ಹೊರಗಡಿಯಿಟ್ಟೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.