‘ಈ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡೋವ್ರು ಏನು ಕಲಿತಿರತಾರೆ?’ ಬೆಕ್ಕಣ್ಣ ಘನಗಂಭೀರವಾಗಿ ಪ್ರಶ್ನಿಸಿತು.
‘ಒನ್ ಸೈಜ್, ಫಿಟ್ಸ್ ಆಲ್ ಅಂತ ಇರಂಗಿಲ್ಲಲೇ. ಎಷ್ಟಕೊಂದು ಇಲಾಖೆಗಳು, ಎಷ್ಟೊಂದು ಬಗೆಯ ಹುದ್ದೆಗಳದಾವು… ಎಲ್ಲಾದಕ್ಕೆ ಬ್ಯಾರೆ ಬ್ಯಾರೆ ವಿದ್ಯಾರ್ಹತೆ ಬೇಕು’ ಎಂದೆ.
‘ಬರೇ ವಿದ್ಯಾರ್ಹತೆ ಸಾಲಂಗಿಲ್ಲ… ಛಲೋತ್ನಾಗಿ ರನ್ನಿಂಗ್ ರೇಸ್ ಪ್ರಾಕ್ಟೀಸ್ ಮಾಡಿರಬಕು!’ ಎಂದ ಬೆಕ್ಕಣ್ಣ ಸುದ್ದಿ ತೋರಿಸಿತು.
‘ನೋಡಿಲ್ಲಿ… ಮುಳಬಾಗಿಲಿನ ಕಂದಾಯ ಇಲಾಖೆ ಕಚೇರಿಗೆ ಲೋಕಾಯುಕ್ತ ಪೊಲೀಸರು ದಾಳಿ ಮಾಡತಿದ್ದಂಗೆ ಲಂಚ ತಗೋತಿದ್ದ ಒಬ್ಬಾಕಿ ಕಚೇರಿಯಿಂದ ಓಟ ಕಿತ್ತಳಂತೆ’ ಎಂದು ವಿವರಿಸಿತು.
‘ಆಕಿ ಮ್ಯಾರಥಾನ್ ಪ್ರಾಕ್ಟೀಸ್ ಮಾಡಿರಬಕು ಬಿಡು!’ ಎಂದು ನಕ್ಕೆ. ‘ಅದೇ ಮತ್ತೆ… ಲಂಚಾವತಾರದ ವಿವಿಧ ಪಟ್ಟುಗಳನ್ನು ಕಲಿತಿರಬಕು’.
‘ಅಷ್ಟೇ ಮುಖ್ಯ ಅಂದ್ರ ಲಂಚದ ದುಡ್ಡನ್ನು ಎಲ್ಲೆಲ್ಲಿ ಹೆಂಗೆ ವಿನಿಯೋಗಿಸಬಹುದು… ಎಲ್ಲಿ ಹೊಲ, ತೋಟ ತಗೋಬೇಕು, ಎಲ್ಲೆಲ್ಲಿ ಮನಿ, ಸೈಟ್ ಬೇನಾಮಿ ಹೆಸರಿನಲ್ಲಿ ತಗೋಬಕು… ಇದಕ್ಕೆಲ್ಲ ಭಯಂಕರ ತೆಲಿ ಓಡಿಸಬೇಕಾಗತೈತಿ’ ಎಂದೆ.
‘ಇಷ್ಟೆಲ್ಲ ಆಸ್ತಿ ತಂಗಡ ಮ್ಯಾಲೂ ಲಕ್ಷಗಟ್ಟಲೆ ಕ್ಯಾಶ್ ಉಳಿದಿರತೈತಲ್ಲ… ಚಿನ್ನ, ಬೆಳ್ಳಿ ತಗಂಡು ಮನ್ಯಾಗೆ ಎಲ್ಲಿ ಬಚ್ಚಿಡಬಕು… ಇನ್ನೂ ಉಳಿದ ರೊಕ್ಕ ಎಲ್ಲಿ ಬಚ್ಚಿಡಬಕು… ಬಚ್ಚಲು, ಟಾಯ್ಲೆಟ್, ಸಿಂಕ್, ದೇವರ ಗೂಡಿನ ನೆಲದೊಳಗೆ, ಗ್ವಾಡಿ ಟೈಲ್ಸ್ವಳಗೆ ಹಿಂಗೆ ಅಗದಿ ಆಯಕಟ್ಟಿನ ಜಾಗಗಳನ್ನು ಹುಡುಕಿ ರೊಕ್ಕ ಬಚ್ಚಿಡೂ ಕಲೆಯನ್ನು ಅವರು ಸ್ವತಃ ಕಲೀತಾರ. ಈ ಸ್ವಕಲಿಕೆಯಲ್ಲಿ ಯಾರೂ ಅವರನ್ನು ಮೀರಿಸಲಾರರು’ ಬೆಕ್ಕಣ್ಣ ಉದ್ಗರಿಸಿತು.
‘ಲೋಕಾ ದಾಳಿಯಲ್ಲಿ ಸಿಕ್ಕುಬಿದ್ದ ಮ್ಯಾಗೆ ಯಾರನ್ನು ಹಿಡಿದು, ಹೆಂಗೆ ಬಚಾವಾಗಬಕು ಅನ್ನೂದನ್ನು ಸ್ವತಃ ಕಲಿತು, ಕರತಲಾಮಲಕ ಮಾಡಿಕೊಂಡಿರತಾರೆ! ಹಿಂಗಾಗಿ ಲೋಕಾ ದಾಳಿಯಲ್ಲಿ ಸಿಕ್ಕುಬಿದ್ದವರಿಗೆ ಆಮೇಲೆ ಏನು ಶಿಕ್ಷೆಯಾತು, ಆ ರೊಕ್ಕ, ಆಸ್ತಿಪಾಸ್ತಿ ಏನಾತು ಅಂತ ಶ್ರೀಸಾಮಾನ್ಯರಿಗೆ ತಿಳಿಯಂಗೇ ಇಲ್ಲ’ ಎಂದೆ.
‘ಆದ್ರೂ ಪಾಪ… ಇಷ್ಟೆಲ್ಲ ಅಕ್ರಮವಾಗಿ ಸಂಪಾದಿಸಿದ ಆಸ್ತಿ, ರೊಕ್ಕ, ಬಂಗಾರ ಎಲ್ಲಾನೂ ಸತ್ತ ಮ್ಯಾಗೆ ಇಲ್ಲೇ ಬಿಟ್ಟು ಹೋಗಬೇಕಾಗತದೆ. ತಮ್ಮ ಹೆಣದ ಜೊತಿಗೇ ಇವನ್ನೆಲ್ಲ ಹೆಂಗ ತಗಂಡು ಹೋಗದು ಅನ್ನೋ ವಿದ್ಯೆ ಮಾತ್ರ ಅವರು ಕಲಿಯಕ್ಕೇ ಆಗಂಗಿಲ್ಲ!’ ಎಂದು ಬೆಕ್ಕಣ್ಣ ತತ್ವಜ್ಞಾನ ನುಡಿಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.