ಮಡದಿ ಏರ್ಪಡಿಸಿದ್ದ ಸಮ್ಮರ್ ಕ್ಯಾಂಪ್ನಲ್ಲಿ ತಿಂಗಳೇಶ ಮಕ್ಕಳ ಸಂದರ್ಶನಕ್ಕೆ ಮುಂದಾದ.
‘ಕ್ಯಾಂಪಿಗೆ ಎಲ್ಲಾ ದೊಡ್ಡವರ ಮಕ್ಕಳು ಬಂದಿದ್ದಾರೆ. ನೀವು ಕೆಪಿಎಸ್ಸಿಯವರ ಥರ ತಪ್ಪುತಪ್ಪು ಪ್ರಶ್ನೆ ಕೇಳಿ ಮರ್ಯಾದೆ ತೆಗೀಬ್ಯಾಡ್ರಿ’ ಮಡದಿಯ ಎಚ್ಚರಿಕೆ.
‘ಮಕ್ಕಳೇನು ನನ್ನ ಪ್ರಶ್ನೆಗಳಿಗೆ ಉತ್ತರಿಸಿ ಜಿಲ್ಲಾಧಿಕಾರಿಗಳಾಗಬೇಕಿಲ್ಲ. ಸರಳ ಪ್ರಶ್ನೆಗಳನ್ನೇ ಕೇಳ್ತೀನಿ’.
‘ಅಯ್ಯೋ... ನಿಮ್ಮ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ ಡಿ.ಸಿನೂ ಆಗಬೇಕಿಲ್ಲ, ತಪ್ಪಾಗಿ ಉತ್ತರಿಸಿ ಶಾಸಕರೂ ಆಗೋದಿಲ್ಲ, ಅರ್ಧಂಬರ್ಧ ಉತ್ತರಿಸಿ ಸಾಹಿತಿನೂ ಆಗಲಿಕ್ಕಿಲ್ಲ ಬಿಡಿ’.
‘ಆಯ್ತಮ್ಮಾ ತಾಯಿ, ವಿಧಾನಸಭೆ ಪ್ರಶ್ನೋತ್ತರ ಥರ ಒಬ್ಬರು ಕೇಳಿದಂತೆ ಇನ್ನೊಬ್ಬರು ಹೇಳಿದಂತೆ ಮಾಡಿ ಮುಗಿಸುತ್ತೇವೆ, ಸರೀನಾ?’.
‘ಗಲಾಟೆ ಮಾಡಿದರು ಅಂತ ಖಾದರ ಸಾಹೇಬರ ಥರ ಹುಡುಗರನ್ನು ಹೊರಗೆ ಹಾಕೀರಿ, ಜೋಕೆ’ ಎಚ್ಚರಿಕೆ ಜೊತೆ ತಿಂಗಳೇಶನನ್ನು ಕ್ಯಾಂಪ್ ಒಳಗೆ ಬಿಟ್ಟಳು.
‘ಮಕ್ಕಳೇ ನಿಮಗೆ ಗೊತ್ತಲ್ಲ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಈಗ ಒಬ್ಬೊಬ್ಬರಾಗಿ ಹೇಳಿ, ದೊಡ್ಡವರಾದ ಮೇಲೆ ನೀವು ಏನಾಗ್ತೀರಿ?’
‘ಸರ..., ನಾನು ಸಾಹಿತಿ ಆಗ್ತೀನ್ರೀ’ ಹುಡುಗನ ಕಣ್ಣುಗಳಲ್ಲಿ ಕನಸುಗಳು.
‘ಓಹ್! ಗುಡ್, ಯಾವುದಾದರೂ ಸಾಹಿತ್ಯ ಪುಸ್ತಕ ಓದೀಯೇನಪಾ?’
‘ಹ್ಞೂಂ..., ‘ಕಾನೂನು ಸುಬ್ಬಮ್ಮ ಹೆಗ್ಗಡತಿ’ ಕಾದಂಬರಿ ಓದೇನ್ರೀ ಸರ’. ಆನಂದ ಲಾಯರ್ ಮಗ ಅನ್ನೋದು ಖಾತರಿ ಆಯ್ತು. ‘ಸಾರ್, ನಾನು ವಿ.ಸಿ ಆಗ್ತೀನಿ. ಆನಂದನಿಗೆ ನಾಡೋಜ ಪದವಿ ಕೊಡುಸ್ತೀನಿ’ ಗುತ್ತಿಗೆದಾರನ ಮಗ ಆಫರ್ ಕೊಟ್ಟ. ‘ನಾನು ಐಪಿಎಸ್ ಮಾಡಿ ಎಸ್.ಪಿ ಆಗ್ತೀನಿ’ ಮೋಹನ ಸೆಟೆದು ನಿಂತ. ಪಕ್ಕದಲ್ಲಿದ್ದ ಯೋಗೀಶ, ‘ನಾನು ಆದ್ರೆ ಮುಖ್ಯಮಂತ್ರಿನೇ ಆಗೋದು’ ಎಂದು ತೋಳೇರಿಸಿದ.
‘ಮುಖ್ಯಮಂತ್ರಿ ಆಗಿ ಏನು ಮಾಡ್ತೀಯ?’
‘ಎಸ್.ಪಿ ಆಗುವ ಮೋಹನನ ಕಪಾಳಕ್ಕೆ ಬಿಗೀತೀನಿ’ ಮುಂದಿನ ಪ್ರಜೆಯ ಮುಂಗಡ ಕನಸಿಗೆ ತಿಂಗಳೇಶ ಬೆಚ್ಚಿಬಿದ್ದ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.