ADVERTISEMENT

ಜಾತಿ ಸಮಾವೇಶಗಳ ಭರಾಟೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2014, 19:30 IST
Last Updated 3 ಮಾರ್ಚ್ 2014, 19:30 IST

ಚುನಾವಣೆಗಳ ಸಂದರ್ಭಕ್ಕೆ ಸರಿಯಾಗಿ ದೇಶದ ಎಲ್ಲೆಡೆ ಜಾತಿ ಸಮಾವೇಶಗಳ ಭರಾಟೆಯೂ ಆರಂಭವಾಗುತ್ತದೆ. ಭಾರತದ ಸಾಮಾಜಿಕ ಮತ್ತು ರಾಜಕೀಯ ಬದುಕಿನಲ್ಲಿ ಜಾತಿಗಿರುವ ಮಹತ್ವವನ್ನು ಅರಿತವರಿಗೆ ಇದರಲ್ಲಿ ಆಶ್ಚರ್ಯ ಹುಟ್ಟಿಸುವಂಥದ್ದೇನೂ ಇಲ್ಲ. ಸಂವಿಧಾನ, ಹುಟ್ಟನ್ನು ಆಧಾರವಾಗಿಟ್ಟುಕೊಂಡ ಜಾತಿ ಅಸಮಾನತೆ­ಯನ್ನು ಗುರುತಿಸಿದೆ.

ಹಾಗೆಯೇ ಅದನ್ನು ನಿರ್ಮೂಲನ ಮಾಡುವುದಕ್ಕಾಗಿ ಧನಾತ್ಮಕ ತಾರತಮ್ಯ­ವನ್ನು ಏರ್ಪಡಿಸುವ ಮೀಸಲಾತಿಯಂಥ ಸವಲತ್ತನ್ನೂ ಒದಗಿಸಿದೆ. ಇದರಾ­ಚೆ­­ಗಿನ ಕೆಲವು ಸಾಮಾಜಿಕ ವಾಸ್ತವಗಳೂ ನಮ್ಮ ಮುಂದಿವೆ. ನಿರ್ದಿಷ್ಟ ಸಮುದಾಯವೊಂದು ತನ್ನ ರಾಜಕೀಯ ಅಭೀಪ್ಸೆ­ಗಳನ್ನು ಮುಂದಿಡುವು­ದಕ್ಕಾಗಿ ಸಂಘಟಿತ ಪ್ರಯತ್ನ ನಡೆಸಬೇಕಾಗುತ್ತದೆ.

ಈ ಬಗೆಯ ಸಂಘಟನೆಗೆ ಜಾತಿಯೊಂದು ಕಾರಣವಾಗುವುದು ಸಹಜ ಬೆಳವಣಿ­ಗೆಯೇ. ವರ್ತಮಾನ­ದಲ್ಲಿ ಜಾತಿಯ ಸಾಮಾಜಿಕ ಸ್ವರೂಪವಿರುವುದೇ ಅದರ ಸಂಘಟಿತ ರಾಜಕೀಯ ಅನನ್ಯತೆಯಲ್ಲಿ. ಈ ಎಲ್ಲಾ ಆಯಾಮಗಳನ್ನು ಒಟ್ಟಾಗಿ ಪರಿಗಣಿ­ಸಿ­ದಾಗ ಒಂದು ಸಾಮೂಹಿಕ ಚೌಕಾಸಿಯ ಮಾರ್ಗವಾಗಿ ಜಾತಿಯೆಂಬ ಅನನ್ಯತೆಯಡಿಯಲ್ಲಿ ಸಂಘಟಿತರಾಗುವುದನ್ನು ಪೂರ್ಣವಾಗಿ ತಪ್ಪು ಎನ್ನಲು ಸಾಧ್ಯವಿಲ್ಲ. ಆದರೆ ಚುನಾವಣೆಗಳ ಕಾಲಕ್ಕೆ ನಡೆಯುವ ಜಾತಿ ಸಮಾವೇಶ­ಗಳು ಇಷ್ಟು ಸರಳವಲ್ಲ.

ಕರ್ನಾಟಕದಲ್ಲಿ ಕಳೆದ ಒಂದು ವಾರದ ಅವಧಿ­ಯಲ್ಲಿ ನಡೆದ ಜಾತಿ ಸಮಾವೇಶಗಳನ್ನು ನೋಡಿದರೂ ಇದು ಅರ್ಥ­ವಾಗು­ತ್ತದೆ. ಈ ಜಾತಿಗಳೆಲ್ಲವೂ ವಿಶಾಲಾತ್ಮಕ ನೆಲೆಯಲ್ಲಿ ಹಿಂದುಳಿದವು ಇಲ್ಲವೇ ಪರಿಶಿಷ್ಟ ಎನ್ನಬಹುದಾದ ವರ್ಗೀಕರಣದಲ್ಲಿ ಬರುವಂಥವು. ಆದರೆ ಆ ವರ್ಗ­ದೊಳಗಿನ ಇತರ ಜಾತಿಗಳ ಜೊತೆ ಹೋಲಿಸಿ ನೋಡಿದಾಗ ಪ್ರಬಲ­ವಾಗಿ­­ರುವಂಥವು. ಈ ವ್ಯತ್ಯಾಸವೇ ಚುನಾವಣಾ ಕಾಲದಲ್ಲಿ ‘ಜಾತಿ ಸಂಘಟನೆ’­­ಯ ಅಪಾಯವನ್ನು ವಿವರಿಸುತ್ತದೆ.

ಸಂವಿಧಾನ, ಮೀಸಲಾತಿಯನ್ನು ಒದಗಿಸುವಾಗ ಸಾಮಾಜಿಕ ಅಸಮಾ­ನ­ತೆಯ ಪ್ರಮಾಣಕ್ಕನುಗುಣವಾಗಿ ಜಾತಿಗಳನ್ನು ಹಲವು ಗುಂಪುಗಳಲ್ಲಿ ವರ್ಗೀಕರಿಸಿದೆ. ಈ ಗುಂಪುಗಳ ಒಳಗಿರುವ ಕೆಲವು ಜಾತಿಗಳ ಸಂಖ್ಯಾಬಲ ಬಹಳ ದೊಡ್ಡದಿದ್ದರೆ ಇನ್ನು ಕೆಲವು ಜಾತಿಗಳಲ್ಲಿರುವವರ ಸಂಖ್ಯೆ ಬಹಳ ಸಣ್ಣದು. ಈ ಗುಂಪುಗಳ ಒಳಗಿರುವ ಜಾತಿಗಳು ಪ್ರತ್ಯೇಕ ಅನನ್ಯತೆಯನ್ನು ಪ್ರತಿಪಾದಿಸುವುದರ ಹಿಂದಿನ ಕಾರಣಗಳು ಎರಡು. ಮೊದಲನೆಯದ್ದು ತಮ್ಮ ಅರ್ಹತೆಯಷ್ಟು ಪ್ರಾತಿನಿಧ್ಯ ದೊರೆತಿಲ್ಲ ಎಂಬ ಕೊರಗು.

ಎರಡನೆ­ಯದ್ದು ತಮ್ಮ ಸಂಖ್ಯಾಬಲವನ್ನು ಬಳಸಿಕೊಂಡು ಗುಂಪಿನೊಳಗಿರುವ ಇತರರನ್ನು ಬದಿಗೊತ್ತುವ ಪ್ರಯತ್ನ. ಈ ಎರಡೂ ಬಗೆಯ ಪ್ರಯತ್ನಗಳಲ್ಲಿ ತೊಡಗಿಕೊಳ್ಳುವ ಜಾತಿಗಳಿಗೂ ಸಂಘಟಿತ ಒತ್ತಡ ಹೇರುವಷ್ಟು ಸಂಖ್ಯಾ­ಬಲ­ವಿರುತ್ತದೆ. ಈ ಕಾರಣದಿಂದಾಗಿಯೇ ಅವು ಕೆಲ ಮಟ್ಟಿಗಿನ ‘ಲಾಭ’ವನ್ನೂ ಪಡೆಯುತ್ತವೆ. ಆದರೆ ಈ ಬಗೆಯ ಒತ್ತಡ ಹೇರಲು ಸಾಧ್ಯವೇ ಇಲ್ಲದಿರುವ ಸಣ್ಣ–ಪುಟ್ಟ ಜಾತಿಗಳ ಸಂಖ್ಯೆಯೂ ಸಾಕಷ್ಟು ದೊಡ್ಡದು. ಇವುಗಳು ಅನುಭವಿ­ಸುತ್ತಿರುವ ರಾಜಕೀಯ ಪ್ರಾತಿನಿಧ್ಯದ ಕೊರತೆಯೇನೂ ಸಣ್ಣದಲ್ಲ. ಆದರೆ ದೊಡ್ಡ ಜಾತಿಗಳ ‘ಭಾರೀ ಸಮಾವೇಶ’ಗಳ ನೆರಳಿನಲ್ಲಿ ಸಣ್ಣ ಜಾತಿಗಳ ಧ್ವನಿ ಸಣ್ಣದಾಗಿಯೂ ಕೇಳಿಸದಂತಾಗುತ್ತಿದೆ.

ಮತಗಳ ಪ್ರಮಾಣಕ್ಕನು­ಗು­ಣ­ವಾಗಿ ನಿರ್ಧಾರಗಳನ್ನು ಕೈಗೊಳ್ಳುವ ರಾಜಕೀಯ ಪಕ್ಷಗಳು ಕೊನೆಗೂ ಮಣೆ ಹಾಕುವುದು ಸಂಖ್ಯಾಬಲಕ್ಕೇ. ಕೇಂದ್ರದಿಂದ ರಾಜ್ಯದ ತನಕದ ಅಧಿಕಾರಾ­ರೂಢ ರಾಜಕಾರಣಿಗಳಿಂದ ಹೆಚ್ಚುವರಿ ಮೀಸಲಾತಿ ಸವಲತ್ತಿನ ಭರವಸೆ ಪಡೆ­ಯುತ್ತಿರುವ ಜಾತಿಗಳೆಲ್ಲವೂ ವೋಟಿನ ಬಲವನ್ನು ಹೊಂದಿವೆ. ಈ ಪ್ರಕ್ರಿಯೆ ಒಟ್ಟರ್ಥದಲ್ಲಿ ಮೀಸಲಾತಿಯನ್ನು ಅಪ್ರಸ್ತುತಗೊಳಿಸುವುದರ ಜೊತೆಗೆ ಅಂಚಿನಲ್ಲಿ ಉಳಿದ ಜಾತಿಗಳು ಸದಾ ಅನಾಥ ಪ್ರಜ್ಞೆಯಲ್ಲಿ ಕೊರಗುವಂತೆ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.