ADVERTISEMENT

ನುಡಿ ಬೆಳಗು | ದೇವರನ್ನು ಅರಿಯಬೇಕು

ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ
Published 15 ಮೇ 2025, 0:30 IST
Last Updated 15 ಮೇ 2025, 0:30 IST
<div class="paragraphs"><p>ನುಡಿ ಬೆಳಗು</p></div>

ನುಡಿ ಬೆಳಗು

   

ದೇಹದೊಳಗೆ ಎಷ್ಟೊಂದು ವಾಯುಗಳಿವೆ; ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ ಮುಂತಾದ ವಾಯುಗಳಿವೆ. ಒಂದೊಂದು ವಾಯುವೂ ಒಂದೊಂದು ಕೆಲಸ ಮಾಡುತ್ತದೆ. ಇದನ್ನು ನಡೆಸಿದ್ದು ಯಾರು ಎನ್ನುವುದನ್ನು ವಿಚಾರ ಮಾಡಬೇಕಲ್ಲ ಮನುಷ್ಯ. ನನ್ನ ದೇಹವನ್ನು ನಡೆಸಿದ ಶಕ್ತಿ ಐತಲ್ಲ, ಅದು ದೇವರು. ಅಂತಹ ದೇವನನ್ನು ಮನುಷ್ಯ ಅರಿಯಬೇಕು, ಅನುಭವಿಸಬೇಕು, ಆರಾಧಿಸಬೇಕು. ದೇವನನ್ನು ಅರಿಯುವುದು ಹೇಗೆ? ದೇವರನ್ನು ಅರಸಲು ಸಾಧ್ಯವಿಲ್ಲ. ಅರಿಯಬೇಕು, ಅನುಭವಿಸಬೇಕು.

ದೇವರನ್ನು ಅರಸಲು ಆತನೇನು ಕಾಡುಮೇಡುಗಳಲ್ಲಿ ಹುದುಗಿಕೊಂಡಿದ್ದಾನೇನು? ದೇವನನ್ನು ಅರಿಯಬೇಕು ಎಂದು ಎಲ್ಲರಿಗೂ ಬಯಕೆ ಇದೆ. ಈಗೊಂದು ಮೈಕ್ ಇದೆ, ಟೇಬಲ್ ಇದೆ. ಅವು ಇವೆ ಎಂದು ಹೇಳುತ್ತೇವೆ, ಅವು ಕಾಣುತ್ತವೆ. ದೇವರು ಹೀಗೆ ನಮ್ಮ ಕಣ್ಣಿಗೆ ಕಂಡಾನೇನು? ದೃಶ್ಯ ನಿರಕ್ಷರ ದೇವರು. ನಿರಾಕಾರ ದೇವರು. ಆ ನಿರಾಕಾರ ದೇವನಿಗೆ ನಮ್ಮ ಋಷಿಗಳು ಸತ್ ಎಂದು ಕರೆದರು. ಸತ್ ಎನ್ನುವುದರ ಅರ್ಥ ಯಾವಾಗಲೂ ಇರುವಂತಹದ್ದು ಎಂದು. ಮೂರೂ ಕಾಲದಲ್ಲಿ ಇರುವಂತಹದ್ದು.

ADVERTISEMENT

ಈಗ ಒಂದು ಹೂವು ಇದೆ. ಅದು ನಿನ್ನೆ ಇರಲಿಲ್ಲ. ಇಂದು ಇದೆ. ನಾಳೆ ಇರುವುದಿಲ್ಲ. ಅಂದರೆ ಒಂದು ಹೂವಿನ ಇರುವಿಕೆ ಎರಡು ಇಲ್ಲಗಳ ನಡುವಿನ ಇರುವಿಕೆ. ಅಂದರೆ ಹೂವು ಸತ್ ಅಲ್ಲ. ಅದು ಮಿಥ್ಯೆ. ಆದರೆ ದೇವ ಹಾಗಲ್ಲ. ನಿನ್ನೆಯೂ ಇದ್ದ. ಇಂದೂ ಇದ್ದಾನೆ. ನಾಳೆಯೂ ಇರ್ತಾನೆ. ಯಾವಾಗಲೂ ಯಾವುದು ಇರುತ್ತದಲ್ಲ ಅದಕ್ಕೆ ಸತ್ ಅಂತ ಕರೀತಾರೆ. ಹಾಗಾದರೆ ನೀವು ಕಲ್ಲು, ಮಣ್ಣು, ಕಾಲ, ನೀರು, ಆಕಾಶ ಎಲ್ಲವೂ ಎಲ್ಲ ಕಾಲಕ್ಕೂ ಇರುತ್ತವೆ. ಇವಕ್ಕೂ ದೇವರು ಅನ್ನಬೇಕಲ್ಲ ಅಂತ ಕೇಳಿದರೆ ಅವು ಜಡ ವಸ್ತುಗಳು. ಅವಕ್ಕೆ ತನ್ನ ಜ್ಞಾನವೂ ಇಲ್ಲ, ಇನ್ನೊಬ್ಬರ ಜ್ಞಾನವೂ ಇಲ್ಲ. ದೇವರು ಬರೇ ಸತ್ ಅಲ್ಲ; ಚಿತ್ ಕೂಡಾ ಹೌದು. ಚಿತ್ ಇದರ ಅರ್ಥ ಬೆಳಗುವಿಕೆ. ಬೆಳಗುವಿಕೆ ದೇವರಾದರೆ ಸೂರ್ಯ ಕೂಡಾ ಬೆಳಗುತ್ತಾನೆ ಎಂದು ನೀವು ಕೇಳಬಹುದು.

ನಿಮ್ಮ ಮನೆಯಲ್ಲಿ ಸೋಲಾರ್ ದೀಪ ಬೆಳಗುತ್ತದೆ. ದೀಪಕ್ಕೆ ಶಕ್ತಿ ಎಲ್ಲಿಂದ ಬಂತು ಎಂದು ಕೇಳಿದರೆ ಸೋಲಾರ್ ಪ್ಯಾನಲ್‌ನಿಂದ ಬಂತು. ಸೋಲಾರ್ ಪ್ಯಾನಲ್‌ಗೆ ಶಕ್ತಿ ಎಲ್ಲಿಂದ ಬಂತು ಅಂದರೆ, ಸೂರ್ಯನಿಂದ ಬಂತು. ಸೂರ್ಯನಿಗೆ ಶಕ್ತಿ ಎಲ್ಲಿಂದ ಬಂತು ಅಂದರೆ, ದೇವರಿಂದ ಬಂತು. ಸೂರ್ಯ, ಚಂದ್ರ, ನಕ್ಷತ್ರಗಳಲ್ಲಿ ಬೆಳಕು ತುಂಬಿಟ್ಟಿದ್ದಾನಲ್ಲ, ಅವನು ದೇವರು. ಯಾವುದು ಪ್ರಕಾಶಗೊಳಿಸುತ್ತದೆ ಅದು ದೇವರು.

ಈ ಜಗತ್ತಿಗೆ ಚಿತ್ ವಿಲಾಸ ಎಂದು ಕರೆಯುತ್ತಾರೆ. ಅಂದರೆ ದೇವರ ವಿಲಾಸ. ಚಿತ್ ಪ್ರಕಾಶ ಅಂತ ಕರೀತಾರೆ. ಯಾಕೆಂದರೆ, ಇದು ದೇವನ ಬೆಳಕು ಅಂತ. ಇನ್ನೊಂದು ಚಿತ್ ಶಕ್ತಿ ಅಂತ ಇದೆ. ಜಗತ್ತಿನಲ್ಲಿ ವಸ್ತುಗಳಿಲ್ಲ. ಇಲ್ಲಿರುವುದು ಬರೀ ಶಕ್ತಿ ಅಂತ ವಿಜ್ಞಾನಿಗಳು ಹೇಳುತ್ತಾರೆ. ಚಿತ್ ಶಕ್ತಿ ಎಂದರೆ ಇರುವುದೆಲ್ಲವೂ ದೇವನ ಶಕ್ತಿ ಎಂದು ಅರ್ಥ. ಈ ದೇಹ, ಈ ಭೂಮಿ, ಈ ಬದುಕು ಎಲ್ಲವೂ ದೇವನು ಕೊಟ್ಟಿದ್ದು ಎಂದು ಹೃದಯದಲ್ಲಿ ಇಟ್ಟುಕೊಂಡು ದೇವಭಾವದಿಂದ ಬದುಕಬೇಕು ಮನುಷ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.