1980-81ರಲ್ಲಿ ನಾನು 10ನೇ ತರಗತಿಯಲ್ಲಿದ್ದೆ. ಒಮ್ಮೆ ಸಮಾಜ ಶಾಸ್ತ್ರದ ಶಿಕ್ಷಕಿ ಉಮಾ ಎಂಬುವವರು ‘I felt very happy’ ಎಂಬುದನ್ನು ಬಳಸಿ ವಾಕ್ಯ ರಚಿಸಲು ತಿಳಿಸಿದರು. ನಾನಾಗ ‘I felt very happy, when I heard that Indira Gandhi was assassinated’ ಎಂದು ಬರೆದೆ. ಇದನ್ನು ನೋಡಿದ ಮೇಡಂ ಕಾರಣ ಕೇಳಿದಾಗ, ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದೇ ಇಂದಿರಾ ಗಾಂಧಿ ಅವರ ಮೇಲಿನ ನನ್ನ ಕೋಪಕ್ಕೆ ಕಾರಣ ಎಂದು ಹೇಳಿದೆ.
ಮೇಡಂ, ನನಗಾಗ ಸಂಸ್ಕಾರದ ಪಾಠ ಹೇಳಿಕೊಟ್ಟಿದ್ದರು. ಅಂದಿನಿಂದ ನನ್ನ ಕಡು ವೈರಿಯ ಅಂತ್ಯಸಂಸ್ಕಾರದಲ್ಲೂ ನಾನು ಹಾಜರಿರುತ್ತೇನೆ. ಆದರೆ ಈಗ ಸಾವಿನ ಸುದ್ದಿ ಕೇಳಿ ಪಟಾಕಿ ಸಿಡಿಸುವವರಿಗೆ ಸಂಸ್ಕಾರದ ಪಾಠ ಹೇಳಿಕೊಡುವ ಗುರುಗಳ ಕೊರತೆ ಇದೆ ಎನಿಸುತ್ತದೆ. ಅನಂತಮೂರ್ತಿ ಅವರ ವೈಚಾರಿಕತೆ ಬಗ್ಗೆ ನನಗೆ ಸಾಕಷ್ಟು ಭಿನ್ನಾಭಿಪ್ರಾಯಗಳಿದ್ದರೂ, ಅವರ ಸಾವು ನನಗೆ ನೋವು ತಂದಿದ್ದು ಸುಳ್ಳಲ್ಲ. ಅವರ ಅಂತ್ಯಸಂಸ್ಕಾರದ ಸಂಪೂರ್ಣ ದಿನಚರಿ ಮುಗಿಯುವವರೆಗೂ ನಾನು ಟಿ.ವಿ. ಬಿಟ್ಟು ಕದಲಲಿಲ್ಲ.
ರಾಷ್ಟ್ರಕವಿ ಜಿ.ಎಸ್.ಎಸ್. ಮತ್ತು ಅನಂತಮೂರ್ತಿ ಅವರ ಅಂತ್ಯಕ್ರಿಯೆ ನಡೆದ ಜಾಗದ ಬಗ್ಗೆಯೂ ನನ್ನ ವಿರೋಧವಿದೆ. ಜಿ.ಎಸ್.ಎಸ್. ಅವರ ಸಮಾಧಿಗೆ ಒದಗಿರುವ ದುಃಸ್ಥಿತಿ ನೋಡಿ ಸಂಕಟ ಆಗುತ್ತದೆ. ಅನಂತಮೂರ್ತಿ ಅವರ ಬಂಧುಗಳ ಪ್ರಕಾರ, ಅವರು ತಮ್ಮ ಅಂತ್ಯಸಂಸ್ಕಾರ ಹುಟ್ಟೂರಿನಲ್ಲೇ ನಡೆಯಬೇಕೆಂದು ಬಯಸಿದ್ದರು. ಪ್ರತಿಯೊಬ್ಬರಿಗೂ ತಮ್ಮ ಹುಟ್ಟೂರಿನ ಬಗ್ಗೆ ಇದೇ ರೀತಿಯ ಒಲವು ಇರುತ್ತದೆ. ಅನಂತಮೂರ್ತಿ ಅವರ ಅಭಿಲಾಷೆಗೆ ವಿರುದ್ಧವಾಗಿ ಕುಟುಂಬದವರು ಅವರ ಅಂತ್ಯಸಂಸ್ಕಾರವನ್ನು ಕಲಾಗ್ರಾಮದಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿಸಿದ್ದಾರೆ. ಇದರಿಂದ ಅವರ ಆತ್ಮಕ್ಕೆ ನಿಜವಾಗಿಯೂ ಮೋಕ್ಷ ದೊರಕುವುದೇ?
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.