ADVERTISEMENT

ಸ್ತುತ್ಯ ಪ್ರಯತ್ನ, --ಪುನರ್ವಿಮರ್ಶೆ ಅಗತ್ಯ

ಚರ್ಚೆ

ಸಿ.ಎನ್.ರಾಮಚಂದ್ರನ್
Published 18 ನವೆಂಬರ್ 2013, 19:30 IST
Last Updated 18 ನವೆಂಬರ್ 2013, 19:30 IST

ರಾಷ್ಟ್ರೀಯ ಕಾನೂನು ಶಾಲೆಯ ವೆಬ್‌ಸೈಟ್‌ನಲ್ಲಿ ದೊರಕುವ ಮೂಢನಂಬಿಕೆ ಪ್ರತಿಬಂಧಕ ಮಾದರಿ ಮಸೂದೆಯ ಕರಡನ್ನು ಮಾತ್ರ ನಾನು ಆಧರಿಸಿ, ಈ ಕೆಳಗಿನ ಟಿಪ್ಪಣಿಗಳನ್ನು ಮಾಡುತ್ತಿದ್ದೇನೆ.  ಆ ಕರಡಿನ ಮೊದಲ ೪೦ ಪುಟಗಳು ಮಾತ್ರ ವೆಬ್‌ಸೈಟ್‌ನಲ್ಲಿ ದೊರಕುತ್ತವೆ; ಉಳಿದ concept note, bibliography,  ಇತ್ಯಾದಿ ಸುಮಾರು

೫೦--–೬೦ ಪುಟಗಳು ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ (ಈ ಕರಡು, ಶಾಸನಸಭೆಗಳಲ್ಲಿ ಚರ್ಚೆಯಾಗುವಾಗಲೂ ಕಾನ್ಸೆಪ್ಟ್ ನೋಟ್ ಬಿಟ್ಟರೆ ಒಳ್ಳೆಯದು; ಏಕೆಂದರೆ ಅದರ ಒಟ್ಟಾರೆ ದನಿ ಬೌದ್ಧಿಕ ಅಹಂನಿಂದ ತುಂಬಿದೆ).

ಈ ಕರಡಿನ ಆಧಾರದಲ್ಲಿ ಹೇಳಬಹುದಾದರೆ, ಕೆಲವು ಪತ್ರಿಕೆಗಳಲ್ಲಿ, ಭಾಷಣಗಳಲ್ಲಿ ಬಿಂಬಿಸಿದಂತೆ,  ಜ್ಯೋತಿಷ, ರಾಶಿಫಲ, ದೇವಸ್ಥಾನಗಳಲ್ಲಿ, ಮನೆಗಳಲ್ಲಿ ಮಾಡುವ ಪೂಜೆ, ಜಪ–ತಪ, ಶ್ರಾದ್ಧ, ‘ಜೋಯಿಸರು-ಮುಲ್ಲಾಗಳು-ಪಾದ್ರಿಗಳು’ ಮುಂತಾದವರ ಅವಹೇಳನೆ, ಇತ್ಯಾದಿ ಯಾವುದೂ, ಯಾವ ಧರ್ಮದ ಪ್ರಸ್ತಾಪವೂ, ಈ ಕರಡಿನಲ್ಲಿ ಇಲ್ಲ.   ಇಂತಹ ಒಂದು ಮಸೂದೆಯ ಅವಶ್ಯಕತೆಯಿದೆ  ಮತ್ತು ಇದಕ್ಕಾಗಿ ಸಾಕಷ್ಟು ಶ್ರಮಿಸಿರುವ ಎಲ್ಲಾ ವಿದ್ವಾಂಸರೂ ಅಭಿನಂದ­­ನೀಯರು.  ಆದರೆ, ತುರ್ತಾಗಿ ಇಡೀ ಕರಡನ್ನು ಪುನರ್ವಿ­ಮ­ರ್ಶಿಸುವ ಅಗತ್ಯವಿದೆ.  ನಾನು ಕೆಲವು ಮುಖ್ಯಾಂಶಗಳನ್ನು ಮಾತ್ರ ಗುರುತಿಸಿದ್ದೇನೆ.

ಅ) ವಿಷಯ: (೧)  ಇಡೀ ಮಸೂದೆಯನ್ನು ‘ಶೋಷಕ-ಶೋಷಿತ’ ಎಂಬ ಚೌಕಟ್ಟಿನಲ್ಲಿ ರಚಿಸಲಾಗಿದೆ; ಆದುದ­ರಿಂದಲೇ ‘ಬಲಿಯಾದ ವ್ಯಕ್ತಿಯ ಸಮ್ಮತಿ ಅಥವಾ ಆಚರಣೆ ಅಪರಾಧವಲ್ಲ’ ಎಂದು ವ್ಯಾಖ್ಯಾನಿಸಲಾಗಿದೆ.  ಈ ದ್ವಿಮಾನ ವೈರುಧ್ಯದ ಚೌಕಟ್ಟಿನಲ್ಲಿ ನಂಬಿಕೆಯ ನೆಲೆಯಲ್ಲಾಗುವ ಬಹುತೇಕ ಆಚರಣೆಗಳನ್ನು ‘ಅಪರಾಧ’ವೆಂದು ಪರಿಗಣಿಸಲು ಸಾಧ್ಯ­ವಾಗುವುದಿಲ್ಲ ಮತ್ತು ಆ ಕಾರಣದಿಂದ ಇಡೀ ಮಸೂದೆಯ ಉದ್ದೇಶವೇ ವ್ಯರ್ಥವಾಗುತ್ತದೆ.

ಉದಾ­ಹರಣೆಗೆ, ಮಡೆಸ್ನಾನ, ಸಿಡಿ ಆಡುವುದು, ಬೆತ್ತಲೆಸೇವೆ, ಕೊಂಡ­ಹಾಯುವುದು, ಇತ್ಯಾದಿ ಅನೇಕ ಆಚರಣೆಗಳು ವ್ಯಕ್ತಿಯೊಬ್ಬನ ‘ಹರಕೆ’ಯ ಕಾರಣದಿಂದ ನಡೆಯುತ್ತವೆ; ಮತ್ತು ಹರಕೆ ಹೊರುವುದು ತಲೆತಲಾಂತರದಿಂದ ಬಂದಿರುವ ನಂಬಿಕೆ–-ಆಚರಣೆಗಳ  ಕಾರಣದಿಂದ ಘಟಿಸುತ್ತದೆ.  ಪರಿಣಾಮ, ವಿಚಾರಣೆಯ ಸಂದರ್ಭ­ದಲ್ಲಿ ಯಾರ ಒತ್ತಡವೂ ಇಲ್ಲದೆ, ಪ್ರಾಮಾ­ಣಿಕ­ವಾಗಿ, ವ್ಯಕ್ತಿಯೊಬ್ಬನು ‘ನಾನು ನನ್ನ ಹರಕೆ ತೀರಿಸಲು ಹೀಗೆ ಮಾಡಿದೆ’ ಎಂದು ಹೇಳಿದರೆ,  ಯಾರನ್ನು ಶಿಕ್ಷಿಸುವುದು?  ಅರ್ಥಾತ್, ಅಂತಹ ಆಚರಣೆಗಳನ್ನು ಮೊದಲು ನಿಷೇಧಿಸಿ,  ಅನಂತರ ಆ ಅಪರಾಧ­ವೆಸಗಿದ ವ್ಯಕ್ತಿ ಹಾಗೂ ಪ್ರಚೋದನೆ ನೀಡಿದ ವ್ಯಕ್ತಿ ಇಬ್ಬರೂ ಶಿಕ್ಷಾರ್ಹರೆಂದು ಘೋಷಿಸಬೇಕು;  ಇಲ್ಲದಿದ್ದರೆ, ಹೆಚ್ಚಿನ ಸಂದರ್ಭಗಳಲ್ಲಿ ಆಚರಣೆಗಳಿಗೆ ಯಾರು ಶಿಕ್ಷಾರ್ಹರು ಎಂದು ಗುರುತಿಸುವುದೇ ಅಸಾಧ್ಯವಾಗುತ್ತದೆ.  ಎಂದರೆ, ಇಡಿಯಾಗಿ, ‘ಮೂಢನಂಬಿಕೆ -ಆಚರಣೆ’ಯ ವ್ಯಾಖ್ಯಾನ ಮತ್ತು  ‘ಬಲಿ­ಯಾದ ವ್ಯಕ್ತಿ ದಂಡನೀಯನಲ್ಲ’ ಎಂಬ ಕಲಮುಗಳು (ಕನ್ನಡ, ೨೪–-೨೫) ತಿದ್ದುಪಡಿ­ಯಾಗಬೇಕು.
  
(೨) ಇಡೀ ಮಸೂದೆಯಲ್ಲಿ, ‘ಮೂಢನಂಬಿಕೆಯ ಕಾರಣ­ದಿಂದಾಗಿ ಆಗುವ ಅಗಾಧ ಪ್ರಾಣಿಹಿಂಸೆ’ಯ ಬಗ್ಗೆ ಪ್ರಸ್ತಾಪವೇ ಇಲ್ಲ (ಒಂದು ವಿಶಿಷ್ಟ ಕೃತ್ಯವನ್ನು– ಗಾವು -ಬಿಟ್ಟರೆ).
ಆದರೆ, ಎಲ್ಲರಿಗೂ ಗೊತ್ತಿರುವಂತೆ, ಗ್ರಾಮದೇವತೆಗಳ ಜಾತ್ರೆಗಳಲ್ಲಿ ಸಾರ್ವಜನಿಕವಾಗಿ ಅಗಾಧ ಸಂಖ್ಯೆಯ ಕೋಳಿ-, ಕುರಿ,- ಕೋಣಗಳ ಬಲಿ ಪ್ರತಿ ವರ್ಷವೂ ಆಗುತ್ತದೆ. ಇದು ಸ್ಕೆಡ್ಯೂಲ್‌ನಲ್ಲಿ ಬರಬೇಕಿತ್ತಲ್ಲವೆ? 

ಇದಕ್ಕಾಗಿಯೇ  ‘Prevention of Cruelty to Animals’  ಶಾಸನವಿದೆ ಎಂಬ ಕಾರಣ ಕೊಟ್ಟರೆ, ಅದೇ ಸ್ಕೆಡ್ಯೂಲ್‌ನಲ್ಲಿರುವ ‘ಮಾನವ ಬಲಿ’ಯೂ ಕೊಲೆಗೆ ಸಂಬಂಧಿಸಿದಂತೆ ಇರುವ ಐ.ಪಿ.ಸಿ. ಕಲಮುಗಳಡಿ ಬರುತ್ತದೆ.
ಜಾತ್ರೆಗಳಲ್ಲಿ ‘ಪ್ರಾಣಿಬಲಿ’ಯನ್ನು ಕೊಡುವುದು,  ‘ಅಜಲು ಸೇವೆ’, ‘ಕೊಂಡ ಹಾಯುವುದು’, ಇತ್ಯಾದಿಗಳನ್ನೂ  ಮೂಢ­ನಂಬಿಕೆಯ ಆಚರಣೆಗಳಲ್ಲಿ ಸೇರಿಸಬೇಕು.

(೩) ಅಪರಾಧಗಳಲ್ಲಿ ಶ್ರೇಣೀಕರಣವನ್ನು ಮಾಡದಿದ್ದರೆ, ಅದು ‘ನೈಸರ್ಗಿಕ ನ್ಯಾಯ’ ಎಂದೆನಿಸಿ­ಕೊಳ್ಳುವುದಿಲ್ಲ.  ಉದಾ­ಹರಣೆಗೆ, ಈ ಕರಡು ಮಸೂದೆಯಲ್ಲಿ, ‘ಪಂಕ್ತಿಭೇದ’­ವನ್ನೂ ಮಾಟ, ಬೆತ್ತಲೆಸೇವೆ, ಸಿಡಿಯಾ­ಡುವುದು, ಇವುಗಳಿಗೆ ಸಮಾನವೆಂದು ಕಂಡು, ಅದನ್ನೂ ‘ಕಾಗ್ನಿಜ಼ಬಲ್ ಅಫೆನ್ಸ್’ ಮತ್ತು ‘ನಾನ್-ಬೇಲಬಲ್’ ಎಂದು ಪರಿಗಣಿಸಲಾಗಿದೆ.  ಇದಕ್ಕೆ ಬದ­ಲಾಗಿ, ಅದನ್ನು (ಅಂತಹ­ವುಗಳನ್ನು) ‘ನಾನ್-ಕಾಗ್ನಿಜ಼ಬಲ್ ಅಫೆನ್ಸ್’ ಎಂದು ಪರಿಗಣಿಸಬಹುದು.

ಪು. ೩೮: ಎ:೧: ‘‘ಯಾರೇ ವ್ಯಕ್ತಿಯ ಜನನ ಸಮಯ, ಸ್ಥಳ­ಗಳ ಆಧಾರದ ಮೇಲೆ ಅವನಿಗೆ ಕಳಂಕ ಹಚ್ಚುವುದು ಅಥವಾ ಅವನನ್ನು ತೆಗಳುವುದು . . .’’ ಇದು ಯಾವ ಆಚರಣೆ ಎಂದು ಅರ್ಥ­ವಾಗುವುದಿಲ್ಲ.  ‘ಮೂಲಾ ನಕ್ಷತ್ರದಲ್ಲಿ ಹುಟ್ಟಿದವಳು’ ಎಂದು ಸ್ತ್ರೀಯೊಬ್ಬಳನ್ನು ತಿರಸ್ಕಾರದಿಂದ ನೋಡುವುದು ಎಂದಾದರೆ, ಅದು ಇಂದು ಒಂದು ಕಥೆ ಅಷ್ಟೇ.  ಈ ಕಲಮನ್ನು ಕೈಬಿಡುವುದು ವಾಸಿ.  
                 
ಆ) ಭಾಷೆ:  ಈ ಕರಡನ್ನು ಮೊದಲು ಇಂಗ್ಲಿಷಿನಲ್ಲಿ ರಚಿಸಿ, ನಂತರ ಅದನ್ನು ಕನ್ನಡಕ್ಕೆ ಪದಶಃ ಅನುವಾದ ಮಾಡ­ಲಾಗಿದೆ ಎಂದು ಕಾಣುತ್ತದೆ; ಆ ಕಾರಣದಿಂದಲೇ, ಅನೇಕ ಪ್ರಯೋಗ­ಗಳು ಉದ್ದೇಶಕ್ಕೆ ವಿರುದ್ಧಾರ್ಥವನ್ನು ಕೊಡುತ್ತವೆ ಮತ್ತು ಅಸ್ಪಷ್ಟವಾಗಿವೆ.

(೧) ಪು. ೨೫: ಜೆ: ‘‘... ಅತಿಮಾನುಷ ಶಕ್ತಿಯನ್ನು ಆಹ್ವಾ­ನಿ­ಸುವ ಮೂಲಕ ... ’’ ಎಂದಿದೆ; ಈ ಪದಗಳ ಧ್ವನಿ ‘ಅಂತಹ  ಅತಿಮಾನುಷ ಶಕ್ತಿಗಳಿವೆ ಮತ್ತು ಅವನ್ನು ಆಹ್ವಾನಿಸ­ಬಹುದು’ ಎಂದಾಗುತ್ತದೆ.  ಇಂಗ್ಲಿಷ್ ಭಾಷೆಯಲ್ಲಿ ... invoking purported supernatural power...” ಎಂದಿರುವುದು ‘ಅತಿಮಾನುಷ ಶಕ್ತಿಗಳನ್ನು ಆಹ್ವಾನಿಸುವುದು ಅಸಾಧ್ಯ’ ಎಂದು ಧ್ವನಿಸುತ್ತದೆ.  ಕನ್ನಡದಲ್ಲಿಯೂ, ಅದೇ ರೀತಿ, ‘ಅತಿಮಾನುಷ ಶಕ್ತಿಯನ್ನು ಆಹ್ವಾನಿಸುವ ನಟನೆಯಿಂದ,  ಸೋಗಿನಿಂದ, ನಂಬಿಕೆಯನ್ನು ಹುಟ್ಟಿಸಿ’ ಎಂದಿರಬೇಕು.  ಈ ಪ್ರಯೋಗ ಅನೇಕ ಬಾರಿ ಕರಡಿನಲ್ಲಿದೆ.  (೨)  ಪು. ೨೬: ೨–-೩: ‘‘... ಸಮ್ಮತಿಯು ಈ ಪ್ರಕರಣದ ಅಡಿಯಲ್ಲಿ ಪ್ರತಿರಕ್ಷೆ­ಯಾಗತಕ್ಕದ್ದಲ್ಲ’’ (ಸಮರ್ಥನೆಯಾಗುವುದಿಲ್ಲ?) (೩) ‘‘... ಆತ್ಮದ ಖಂಡನೆಯ ಭಯವನ್ನು ... ’’ ಇದು ಇಂಗ್ಲಿಷಿನಲ್ಲಿ “threaten spiritual censure” ಎಂದಿದೆ; ಎರಡು ಪ್ರಯೋಗಗಳೂ ಅರ್ಥವಾಗುವುದಿಲ್ಲ.

(೪) ಕೆಲವು ಪದಗಳನ್ನು ಸಾಮಾನ್ಯರಿಗೂ ಅರ್ಥವಾಗು­ವಂತೆ ಬದಲಾಯಿಸಬಹುದು:  ‘ಅಲ್ಪೀಕರಿಸತಕ್ಕದ್ದಲ್ಲ’ (ತಿರಸ್ಕರಿ­ಸ­ತಕ್ಕದ್ದಲ್ಲ/ಅಲಕ್ಷಿಸತಕ್ಕದ್ದಲ್ಲ),  ‘ರದ್ದಿಯಾತಿ’ (ರದ್ದತಿ/ ರದ್ದುಮಾಡುವುದು),  ‘ಸಂಜ್ಞೇಯ’ (cognizable ಎಂಬ ಇಂಗ್ಲಿಷ್ ಪದವನ್ನೇ ಉಪಯೋಗಿಸಬಹುದು; ಅಥವಾ ‘ನೇರವಾಗಿ ಸರ್ಕಾರವೇ ಗುರುತಿಸಬಹುದಾದ’ ಎಂದು ಹೇಳ­ಬಹುದು).   ಹಾಗೆಯೇ, ಎರಡೂ ಭಾಷೆಗಳಲ್ಲಿ ‘his/her’ ‘ಅವನ/ಅವಳ’ ಎಂಬಂತಹ ಬದಲಾವಣೆಯನ್ನು ಉದ್ದಕ್ಕೂ ಮಾಡಬೇಕು. 

ಸಮಾಜ ಸುಧಾರಣೆಗೆ ಶಾಸನಗಳೂ ಬೇಕು; ಅವುಗಳೊಡನೆ, ಕರಡಿನ ಒಂದು ಭಾಗ ಹೇಳುವಂತೆ ‘‘... ಸಾಮಾನ್ಯ ಜನತೆಗೆ ತಿಳಿವಳಿಕೆ ಮೂಡಿಸುವುದೂ ಅಗತ್ಯ’’ (ಪು.೩೯: ೪).  ಈ ಕೆಲಸಕ್ಕೆ ಮೊದಲ ಆದ್ಯತೆ ದೊರೆಯಬೇಕು.
           
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.