ADVERTISEMENT

ಸಂಗತ| ಪಂಚಾಯಿತಿಗೇಕಿಲ್ಲ ಮೌಲ್ಯಮಾಪನ?

ಗ್ರಾಮ ಪಂಚಾಯಿತಿ ಸದಸ್ಯರು ಜಾರಿಗೆ ತರಲು ಶ್ರಮಿಸಬೇಕಾದ ಪಂಚಶೀಲ ಕರ್ತವ್ಯಗಳು ಎಷ್ಟರಮಟ್ಟಿಗೆ ಪಾಲನೆಯಾಗುತ್ತಿ

ಪ.ರಾಮಕೃಷ್ಣ
Published 22 ಜನವರಿ 2023, 19:30 IST
Last Updated 22 ಜನವರಿ 2023, 19:30 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಸಚಿವರಾಗಿ ಕೆಲಸ ಮಾಡಿದವರ ಮೌಲ್ಯಮಾಪನ ಮಾಡಿ, ಅಸಮರ್ಥರೆನಿಸಿದವರನ್ನು ಬದಲಾಯಿಸುವ ವಿಧಾನವಿದೆ. ಆದರೆ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಮತದಾರರು ಪಂಚಾಯಿತಿ ಮಟ್ಟದಲ್ಲಿ ಸಾಮಾನ್ಯರಿಗೆ ಮತ ನೀಡಿ ಗೆಲ್ಲಿಸಿದ ಬಳಿಕ, ಅವರೇನು ಸಾಧನೆ ಮಾಡಿದ್ದಾರೆ ಎಂದು ನೋಡಲಾಗುತ್ತಿದೆಯೇ?

ಕರ್ನಾಟಕದಲ್ಲಿ 5,659 ಗ್ರಾಮ ಪಂಚಾಯಿತಿಗಳು ಆಡಳಿತ ನಡೆಸುತ್ತಿವೆ. ಇದರ ಹತ್ತು ಪಟ್ಟಿಗೂ ಹೆಚ್ಚು ಸದಸ್ಯರಿದ್ದಾರೆ. ಅವರು ನಿರ್ವಹಿಸಬೇಕಾದ ಕೆಲಸಗಳ ಬಗೆಗೆ ಅವರಿಗೆ ತರಬೇತಿ ನೀಡಲಾಗುತ್ತದೆ. ಗೌರವಧನ ನೀಡುವ ವ್ಯವಸ್ಥೆಯೂ ಇದೆ. ತಾನು ಗೆದ್ದು ಬಂದ ಪ್ರದೇಶದ ಮೂಲಭೂತ ಸಮಸ್ಯೆಗಳು ಏನೇನಿವೆ, ಅವುಗಳ ಪರಿಹಾರಕ್ಕೆ ತಾನು ಏನು ಮಾಡಬೇಕು ಎಂಬುದರ ಅರಿವು, ಆರಿಸಿಬಂದ ಜನಪ್ರತಿನಿಧಿಗೆ ಇರಲೇಬೇಕಾಗುತ್ತದೆ.

ರಾಜ್ಯದಲ್ಲಿ ಹಸುಗಳ ಗಂಟುರೋಗವು ಹೈನುಗಾರರ ಪಾಲಿಗೆ ಬೃಹತ್ ಸಮಸ್ಯೆ ತಂದೊಡ್ಡಿದೆ. ಈ ರೋಗಪೀಡಿತ ಹಸುಗಳು ಕೈಕಾಲುಗಳ ಸ್ವಾಧೀನ ಕಳೆದುಕೊಂಡು ಮಲಗಿರುತ್ತವೆ. ಇಂತಹ ಸ್ಥಿತಿ ಬರುವ ಮೊದಲೇ ಪಶು ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಲಸಿಕಾ ಶಿಬಿರ ಏರ್ಪಡಿಸುವ ಮುತುವರ್ಜಿಯನ್ನು,
ಸ್ಥಳೀಯ ಸರ್ಕಾರ ಎನಿಸಿಕೊಂಡ ಗ್ರಾಮ ಪಂಚಾಯಿತಿ ಸದಸ್ಯರು ತೋರಬೇಕಿತ್ತು. ಎಷ್ಟು ಕಡೆ ಅಂತಹ ಕಾಳಜಿ ಸದಸ್ಯರಿಂದ ವ್ಯಕ್ತವಾಗಿದೆ?

ADVERTISEMENT

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿಯ ಒಂದು ವಿಶಿಷ್ಟ ಕಾರ್ಯಕ್ರಮ ಮಾಧ್ಯಮಗಳಲ್ಲಿ ಪ್ರಶಂಸೆ ಪಡೆದಿತ್ತು. ಅದು, ಬಸ್ ತಂಗುದಾಣಗಳಲ್ಲಿ ಬಸ್ಸಿಗಾಗಿ ಕಾದಿರುವವರನ್ನು ಓದಿಗೆ ಪ್ರಚೋದಿಸುವ ‘ಪುಸ್ತಕ ಗೂಡು’ ಯೋಜನೆ. ಮನೆಮನೆಗಳಲ್ಲಿ ಬೇಡಿ ತಂದ ಪುಸ್ತಕಗಳು ಯಾರೋ ದಾನಿಗಳು ಕೊಟ್ಟ ಕಪಾಟುಗಳಲ್ಲಿ ತುಂಬಿಕೊಂಡವು. ಈ ಯೋಜನೆ ಆರಂಭವಾಗಿ ಬಹು ವರ್ಷಗಳೇನೂ ಕಳೆದಿಲ್ಲ. ಈಗೊಮ್ಮೆ ಹೋಗಿ ನೋಡಿದರೆ, ಯಾರಿಗೂ ಅಗತ್ಯವಿಲ್ಲದ ಸಹಕಾರ ಸಂಘಗಳ ವಾರ್ಷಿಕ ವರದಿಯ ಪುಸ್ತಕ ಗಳನ್ನು ಬಿಟ್ಟರೆ ಗೂಡುಗಳೊಳಗೆ ಬೇರೆ ಪುಸ್ತಕಗಳಿಲ್ಲ. ಹೆಚ್ಚಿನ ನಿಲ್ದಾಣಗಳಲ್ಲಿ ದೂಳು ತುಂಬಿದ ಬರಿದಾದ ಗೂಡುಗಳಿವೆ.

ಮತ್ತೆ ಮತ್ತೆ ಪುಸ್ತಕಗಳನ್ನು ಯಾಚಿಸಿ ತಂದು ಗೂಡುಗಳನ್ನು ತುಂಬುವ ಕೆಲಸವನ್ನು ಆಡಳಿತಾರೂಢ ಸದಸ್ಯರು ಮಾಡಬೇಕಿತ್ತಲ್ಲವೆ? ಒಂದು ವಿಶಿಷ್ಟ ಯೋಜನೆ ಅನುಷ್ಠಾನಗೊಂಡರೂ ಅದರ ಮಹತ್ವವನ್ನು ತಿಳಿಯದಿರುವ ದೌರ್ಭಾಗ್ಯ ಪ್ರಾಪ್ತವಾಗಬಾರದು ತಾನೆ? ಪ್ರತಿಯೊಬ್ಬ ಗ್ರಾಮ ಪಂಚಾಯಿತಿ ಸದಸ್ಯನೂ ತಿಳಿದುಕೊಂಡು ಜಾರಿಗೆ ತರಲು ಶ್ರಮಿಸಬೇಕಾದ ಪಂಚಶೀಲ ಕರ್ತವ್ಯಗಳಿವೆ. ಅವುಗಳಲ್ಲಿ ನೈರ್ಮಲ್ಯವೂ ಒಂದು. ಪ್ರತೀ ಗ್ರಾಮದಲ್ಲಿ ಸಮುದಾಯ ಶೌಚಾಲಯಗಳನ್ನು ನಿರ್ಮಿಸುವುದು, ನಿರ್ವಹಿಸುವುದು ಅವರ ಕರ್ತವ್ಯಗಳ ಸಾಲಿಗೆ ಸೇರುತ್ತದೆ. ಒಂದೇ ಒಂದು ಸಾರ್ವಜನಿಕ ಶೌಚಾಲಯವನ್ನೂ ನಿರ್ಮಿಸದ ಪಂಚಾಯಿತಿಗಳು ಇನ್ನೂ ಇದ್ದರೂ ಅದರ ಕುರಿತು ಮೌಲ್ಯಮಾಪನ ಮಾಡಿ, ಅದರ ವ್ಯಾಪ್ತಿಯ ಸದಸ್ಯರ ಕರ್ತವ್ಯಲೋಪವನ್ನು ಗುರುತಿಸಬೇಕಾಗಿತ್ತು.

ಕಸ ಸಂಗ್ರಹಕ್ಕೆ ಬಹುತೇಕ ಪಂಚಾಯಿತಿಗಳಿಗೆ ಮಿನಿ ವಾಹನ ಒದಗಿಸಲಾಗಿದೆ. ಸ್ವಚ್ಛತೆಯ ಬಗೆಗೆ ಜನರ ಮನ ಅರಳಿಸುವ ಹಾಡಿನ ಜೊತೆಗೆ ಬರುವ ಈ ವಾಹನದಲ್ಲಿ ಗ್ರಾಮೀಣ ಪ್ರದೇಶದ ಅಂಗಡಿಗಳಿಂದ ಮಾತ್ರ ಕಸ ಸಂಗ್ರಹಿಸಲಾಗುತ್ತದೆ. ಹೀಗಾದರೆ ಮನೆಗಳಲ್ಲಿ ಸಂಗ್ರಹವಾಗುವ ಕಸದ ರಾಶಿಯ ಗತಿ ಏನು? ರಸ್ತೆಗಳಲ್ಲಿ ಸಾಗುವ ಯಾತ್ರಿಕರು, ಕೋಳಿ ಮತ್ತು ಮಾಂಸದ ಅಂಗಡಿಯವರು ತ್ಯಾಜ್ಯಗಳನ್ನು ಪಾಲಿಥಿನ್ ಚೀಲಗಳಲ್ಲಿ ತುಂಬಿಸಿ ತಂದು ರಸ್ತೆಯ ಇಕ್ಕೆಲಗಳ ಚರಂಡಿಗಳಲ್ಲಿ ಹಾಕಿ ಹೋಗುತ್ತಾರೆ. ಇಂತಹ ತ್ಯಾಜ್ಯವನ್ನು ತಂದೆಸೆಯಲು ಪ್ರತೀ ಪಂಚಾಯಿತಿಯೂ ಒಂದು ದೊಡ್ಡ ಕಸದ ತೊಟ್ಟಿಯನ್ನು ನಿಗದಿತ ಸ್ಥಳದಲ್ಲಿ ಯಾಕೆ ನಿರ್ಮಿಸುವುದಿಲ್ಲ? ಸದಸ್ಯರು ತಮ್ಮ ವ್ಯಾಪ್ತಿಗೆ ಒಳಪಡುವ ಪ್ರದೇಶದ ನೈರ್ಮಲ್ಯವನ್ನು ಕಾಪಾಡಲು ಶ್ರಮಿಸಬೇಕು ತಾನೆ?

ಇನ್ನು ಗ್ರಾಮ ಪಂಚಾಯಿತಿಯ ಮುಖ್ಯಕಾರ್ಯಕ್ರಮಗಳಲ್ಲಿ ಕುಡಿಯುವ ನೀರಿನ ಪೂರೈಕೆಯೂ ಒಂದು. ನೀರಿನ ಲಭ್ಯತೆಯಿರುವ ಸ್ಥಳದಲ್ಲಿ ಮಳೆಗಾಲದ ನೀರಿಂಗಿಸಲು ಸದಸ್ಯರು ಕಾರ್ಯಕ್ರಮ
ಗಳನ್ನು ಹಮ್ಮಿಕೊಳ್ಳಬೇಕಾದುದು ಅವರು ಪಾಲಿಸಬೇಕಾದ ಪಂಚಶೀಲ ತತ್ವಗಳಲ್ಲಿ ಒಂದು. ಎಷ್ಟು ಪಂಚಾಯಿತಿ ಸದಸ್ಯರು ಈ ಕೆಲಸಕ್ಕೆ ಹೆಗಲು ಕೊಟ್ಟಿದ್ದಾರೆ ಎಂದು ತಿಳಿಯಬೇಕಾಗಿದೆ.

ನೀರು ಸಾಬರೆಂದೇ ಖ್ಯಾತಿ ಪಡೆದ ನಜೀರಸಾಬರು ಗ್ರಾಮೀಣ ಭಾರತದ ಅದ್ಭುತ ಕನಸು ಕಂಡರು. ನಾಲ್ಕು ಗ್ರಾಮಗಳನ್ನು ಒಂದುಗೂಡಿಸಿ ಮಂಡಲ ಪಂಚಾಯಿತಿಗಳ ರಚನೆ ಮಾಡಿದರು. ತೆರಿಗೆಯ ಹಣವು ಗ್ರಾಮಗಳ ಅಭಿವೃದ್ಧಿಗೆ ಪೂರ್ಣ ಬಳಕೆಯಾಗುವಂತಹ ಕಾರ್ಯಕ್ರಮಗಳನ್ನು ರಾಮಕೃಷ್ಣ ಹೆಗಡೆ ನೇತೃತ್ವದ ಅಂದಿನ ಸರ್ಕಾರ ರೂಪಿಸಿತು. ಅಧಿಕಾರ ವಿಕೇಂದ್ರೀಕರಣದ ಕಲ್ಪನೆ ಹೊಸ ಆಶೋದಯವನ್ನು ಮೂಡಿಸಿದ್ದಂತೂ ಸತ್ಯವೇ.

ಆದರೆ ಆಡಳಿತದ ಚುಕ್ಕಾಣಿ ಹಿಡಿದವರು ಬದಲಾಗುತ್ತಾ ಹೋದಂತೆ ಗ್ರಾಮ ಪಂಚಾಯಿತಿಗಳೂ ರಾಜಕೀಯ ಪಕ್ಷಗಳ ಕೈಗೊಂಬೆಗಳಾದವು. ಗೆದ್ದು ಬಂದವರಿಗೆ ವೈಯಕ್ತಿಕ ಸೇಡು, ಮರಳು ದಂಧೆ, ಪಕ್ಷಪಾತ ಇವೆಲ್ಲಕ್ಕೂ ವಿಶಾಲ ಮೈದಾನಗಳಾದವು. ಕೆಲವೆಡೆ ಕಮಿಷನ್ ಆರೋಪವೂ ಕೇಳಿಬಂತು. ಸ್ಥಳೀಯರನ್ನೇ ಆಡಳಿತದ ಕುರ್ಚಿಗೇರಿಸಿ ಹಿತಕರವಾದ ಸುಖೀರಾಜ್ಯ ನಿರ್ಮಿಸುವ ಯೋಚನೆ ಭ್ರಮೆಯಷ್ಟೇ ಅನಿಸಿದೆ. ಈ ಹೊತ್ತಿನಲ್ಲಿ ಏನೂ ಮಾಡದ ನಿಷ್ಕ್ರಿಯ ಪಂಚಾಯಿತಿ ಮತ್ತು ಅದರ ಸದಸ್ಯರ ಕೆಲಸಗಳ ಬಗೆಗೆ ಮೌಲ್ಯಮಾಪನ ನಡೆದರೆ, ಮತ ನೀಡಿದವರಿಗೊಂದು ಸಮಾಧಾನವಾದರೂ ಸಿಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.