‘ವಿಧಾನ ಮಂಡಲಗಳು ರಸ್ತೆಗಳಾಗದಿರಲಿ’
ಶಾಂತಿನಿಕೇತನ, ಡಿ. 25– ವಿಧಾನಮಂಡಲಗಳನ್ನು ರಸ್ತೆಗಳಾಗಿ ಪರಿವರ್ತಿಸುವುದು ಪ್ರಜಾಪ್ರಭುತ್ವಕ್ಕೆ ವ್ಯತಿರಿಕ್ತವೆಂದು ಪ್ರಧಾನಿ ಇಂದಿರಾ ಗಾಂಧಿಯವರು ಇಂದು ಇಲ್ಲಿ ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಪ್ರತಿಷ್ಠಾಪಿತವಾಗಿರುವ ಜನತೆಯ ಪವಿತ್ರ ಹಕ್ಕು ಅವರ ಚಿಂತನ ಮತ್ತು ವಿವೇಚನೆಗಳಿಂದ ವ್ಯಕ್ತಗೊಳ್ಳುವುದು ಅವಶ್ಯವೆಂದು ಅವರು ನುಡಿದರು.
ವಿಶ್ವ ಭಾರತಿಯ ಆಚಾರ್ಯರೂ ಆದ ಶ್ರೀಮತಿ ಗಾಂಧಿಯವರು ಇಂದು ಬೆಳಿಗ್ಗೆ ಇಲ್ಲಿ ಮಾವಿನ ತೋಪಿನಲ್ಲಿ ಅದರ ಘಟಿಕೋತ್ಸವದ ಅಧ್ಯಕ್ಷ ಭಾಷಣ ಮಾಡುತ್ತಾ, ‘ನಾವು ಸ್ವಾತಂತ್ರ್ಯದ ಮೂರನೇ ದಶಕದಲ್ಲಿ ಅಡಿಯಿಡುತ್ತಿರುವಾಗ ಪ್ರಜಾಪ್ರಭುತ್ವ ಕುರಿತು ಅತಿಸರಳ ಅಭಿಪ್ರಾಯಗಳು ಪ್ರಚಲಿತಗೊಳ್ಳತೊಡಗಿವೆ. ಜನರು ಮಾಡಿದ್ದೆಲ್ಲಾ ಸರಿ ಎಂಬುದೊಂದು ಭಾವನೆಯೂ ಇದೆ. ಪ್ರತಿಯೊಂದು ಪ್ರಜಾತಂತ್ರವೂ ತನ್ನ ತನ್ನ ಸಂಪ್ರದಾಯವನ್ನು ರೂಪಿಸಿಕೊಳ್ಳುತ್ತದೆ. ನೀರೊಂದೇ ಅಲ್ಲ, ದಂಡೆಯೂ ಸೇರಿದರೆ ಮಾತ್ರವೇ ನದಿಯಾಗುವುದು’ ಎಂದರು.
ರಾಜ್ಯದಲ್ಲಿ ಹಿಂದಿ ವಾರ್ಸಿಟಿ ಸ್ಥಾಪನೆಗೆ ಎಸ್.ಎನ್. ಸಲಹೆ
ಬೆಂಗಳೂರು, ಡಿ. 24– ರಾಜ್ಯದಲ್ಲಿ ಹಿಂದಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಬಗ್ಗೆ ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ಇಂದು ಇಲ್ಲಿ ತಮ್ಮ ತೀವ್ರ ಆಸಕ್ತಿ ವ್ಯಕ್ತಪಡಿಸಿದರು.
ಕೆಲವು ವರ್ಷಗಳ ಹಿಂದೆಯೇ ರಾಜ್ಯ ಈ ವಿಷಯವನ್ನು ಪ್ರಸ್ತಾಪಿಸಿತ್ತು ಎಂದು ಅವರು ವರದಿಗಾರರಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.