ಬೆಂಗಳೂರು, ಜ. 4 – ಡ್ರೈವರ್ ಒಬ್ಬನ ಮೇಲೆ ಟ್ರಾಫಿಕ್ ಪೊಲೀಸ್ ಇನ್್ಸಪೆಕ್ಟರ್ ಒಬ್ಬರು ಕೈಮಾಡಿದರೆಂಬ ಕಾರಣದ ಮೇಲೆ ಬಿ. ಟಿ. ಎಸ್. ಡ್ರೈವರ್ಗಳು ಮಧ್ಯಾಹ್ನ ಹಠಾತ್ತನೆ ಮುಷ್ಕರ ಆರಂಭಿಸಿದ ನಂತರ, ಕಲ್ಲು ಹಾಗೂ ಸೋಡಾ ಶೀಸೆಗಳನ್ನು ಎಸೆದ ಘಟನೆಗಳ ಪರಿಣಾಮವಾಗಿ ಸಂಜೆ ಸಿಟಿ ಮಾರ್ಕೆಟ್ ಪ್ರದೇಶದಲ್ಲಿ ಪೊಲೀಸರಿಂದ ಗೋಳಿಬಾರ್ ನಡೆದು ನಾರಾಯಣಚಾರ್ ಎಂಬುವರು ಸತ್ತರು.
ಶಿವರಾಂ ಎಂಬುವನಿಗೆ ಗುಂಡಿನೇಟು ತಗಲಿ ಆಸ್ಪತ್ರೆಗೆ ಸೇರಿಸಲಾಗಿದೆ. ಸುಮಾರು 15 ಮಂದಿ ಪೊಲೀಸ್ ಅಧಿಕಾರಿಗಳಿಗೆ ಕಲ್ಲಿನೇಟಿನಿಂದ ಗಾಯಗಳಾಗಿವೆ.
ಡ್ರೈವರ್ ಮೇಲೆ ಪೊಲೀಸ್ ಇನ್್ಸಪೆಕ್ಟರ್ ಒಬ್ಬರು ಕೈಮಾಡಿದರೆಂಬುದನ್ನು ಪೊಲೀಸ್ ಕಮೀಷನರ್ ಶ್ರೀ ಚಾಂಡಿ ಅವರು ನಿರಾಕರಿಸಿದರು.
ಪಾನನಿರೋಧ ನೀತಿ ಸಡಿಲಗೊಳಿಸಲು ಮೈಸೂರಿನ ಯೋಚನೆ – ನಿಜಲಿಂಗಪ್ಪ
ನವದೆಹಲಿ, ಜ. 4 – ಮೈಸೂರು ಸರ್ಕಾರವು ರಾಜ್ಯದಲ್ಲಿ ಪಾನನಿರೋಧ ನೀತಿಯನ್ನು ಸಡಿಲಗೊಳಿಸಲು ಯೋಚಿಸುತ್ತಿದೆಯೆಂದು ಮೈಸೂರು ಮುಖ್ಯಮಂತ್ರಿ ಶ್ರೀ ನಿಜಲಿಂಗಪ್ಪನವರು ಇಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.
ರಾಜ್ಯದಲ್ಲಿ ಪಾನನಿರೋಧ ಕ್ರಮ ವಜಾ ಆದರೆ ಕೂಡಲೆ ಸರ್ಕಾರಕ್ಕೆ ಒಂದು ವರ್ಷಕ್ಕೆ ಸುಮಾರು 5 ಕೋಟಿ ರೂ. ಉಳಿತಾಯವಾಗುವುದು. ಹಾಗಾದ ಎರಡು ಮೂರು ವರ್ಷದಲ್ಲೆ ಉಳಿತಾಯ 8 ಕೋಟಿ ರೂ. ಗಳಿಂದ 10 ಕೋಟಿ ರೂ. ಗಳಿಗೆ ಏರುವ ನಿರೀಕ್ಷೆ ಇದೆ. ಮೈಸೂರು ರಾಜ್ಯದ ಮುಕ್ಕಾಲು ಭಾಗದಲ್ಲಿ ಈಗ ಪಾನನಿರೋಧ ಕ್ರಮ ಜಾರಿಯಲ್ಲಿದೆ.
ವರ್ಗಾವಣೆ ಪ್ರತಿಭಟಿಸಿ ಬ್ಯಾಂಕ್ ನೌಕರರ ಪ್ರದರ್ಶನ
ಬೆಂಗಳೂರು, ಜ. 4 – ನಗರದ ವಿವಿಧ ಬ್ಯಾಂಕ್ಗಳ ಸುಮಾರು ಒಂದು ಸಾವಿರ ಮಂದಿ ನೌಕರರು ಇಂದು ಸಂಜೆ, ಗಾಂಧೀನಗರದಲ್ಲಿರುವ ಸಿಂಡಿಕೇಟ್ ಬ್ಯಾಂಕಿನ ಎದುರು ಪ್ರದರ್ಶನ ನಡೆಸಿದರು. ಬ್ಯಾಂಕ್ ನೌಕರರ ಸಂಘದ ಹಲವು ಮಂದಿ ಅಧಿಕಾರ ವರ್ಗದವರನ್ನು ಈ ಬ್ಯಾಂಕು ಬೇರೆ ಬೇರೆ ಕಡೆಗಳಿಗೆ ವರ್ಗಾಯಿಸುತ್ತಿರುವ ನೀತಿಯನ್ನು ಪ್ರತಿಭಟಿಸಲು, ಬ್ಯಾಂಕ್ ನೌಕರರ ಫೆಡರೇಷನ್ನಿನವರು ಈ ಪ್ರದರ್ಶನವನ್ನು ಏರ್ಪಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.