ADVERTISEMENT

ಬುಧವಾರ, 5–6–1968

​ಪ್ರಜಾವಾಣಿ ವಾರ್ತೆ
Published 4 ಜೂನ್ 2018, 19:30 IST
Last Updated 4 ಜೂನ್ 2018, 19:30 IST

ಪಾನನಿರೋಧ ಪ್ರಶ್ನೆ: ವಿಶೇಷ ಅಧಿವೇಶನಕ್ಕೆ ಒತ್ತಾಯ
ನವದೆಹಲಿ, ಜೂನ್ 4–
ರಾಷ್ಟ್ರಾದ್ಯಂತ 1969ರ ಅಕ್ಟೋಬರ್ 2ರ ವೇಳೆಗೆ ಪಾನನಿರೋಧವನ್ನು ಜಾರಿಗೆ ತರುವ ಬಗ್ಗೆ ಚರ್ಚಿಸಲು ಎ.ಐ.ಸಿ.ಸಿ. ವಿಶೇಷ ಅಧಿವೇಶನ ಕರೆಯುವಂತೆ ನೂರಕ್ಕೂ ಹೆಚ್ಚು ಜನ ಸದಸ್ಯರು ಇಂದು ಕಾಂಗ್ರೆಸ್ ಅಧ್ಯಕ್ಷ ಶ್ರೀ ನಿಜಲಿಂಗಪ್ಪನವರನ್ನು ಒತ್ತಾಯಪಡಿಸಿದರು.

ಹದಗೆಟ್ಟ ರಾಜಕೀಯ
ನವದೆಹಲಿ, ಜೂನ್ 4 –
ದೇಶದ ರಾಜಕೀಯ ಪರಿಸ್ಥಿತಿ ಬಗ್ಗೆ ಎ.ಐ.ಸಿ.ಸಿ. ಅಧಿವೇಶನ ಇಂದು ಬೆಳಿಗ್ಗೆ ಚರ್ಚೆಯನ್ನು ಮುಂದುವರೆಸಲು ಕಲಾಪ ಆರಂಭಿಸಿದಾಗ ಸಭಾಭವನದಲ್ಲಿ ನೂರಕ್ಕೂ ಕಡಿಮೆ ಪ್ರತಿನಿಧಿಗಳು ಹಾಜರಿದ್ದರು. ಉಳಿದವರು ಕೇಂದ್ರ ಚುನಾವಣಾ ಸಮಿತಿ ಚುನಾವಣೆಯಲ್ಲಿ ಆಸಕ್ತರಾಗಿ ಪಕ್ಕದ ಕೋಣೆಯೊಂದರ ಬಳಿ ಸಾಲುಗಟ್ಟಿ ನಿಂತಿದ್ದರು.

ಐಕಮತ್ಯ ರಕ್ಷಣೆಗೆ ಇಂದಿರಾ ಕರೆ
ನವದೆಹಲಿ, ಜೂನ್ 4–
ದೇಶದಲ್ಲಿ ಐಕಮತ್ಯವನ್ನು ರಕ್ಷಿಸುವುದು ಇಂದಿನ ಆದ್ಯ ಕರ್ತವ್ಯ. ಇದನ್ನು ಸಾಧಿಸದೆ ಪ್ರಗತಿ ಇಲ್ಲ ಎಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಇಂದು ತಮ್ಮನ್ನು ಭೇಟಿ ಮಾಡಿದ ಉಸ್ಮಾನಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತ ತಿಳಿಸಿದರು.

ADVERTISEMENT

ಪಕ್ಷದ ನಾಯಕತ್ವದಲ್ಲಿ ನಂಬಿಕೆಗೆ ಇಂದಿರಾ, ಮುರಾರ್ಜಿ ಕರೆ
ನವದೆಹಲಿ, ಜೂನ್ 4 –
ದೇಶದ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳುತ್ತಿದೆ ಎಂದು ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿ ಮತ್ತು ಉಪಪ್ರಧಾನಮಂತ್ರಿ ಶ್ರೀ ಮುರಾರ್ಜಿ ದೇಸಾಯ್ ಇಂದು ಎ.ಐ.ಸಿ.ಸಿ. ಸಭೆಯಲ್ಲಿ ಸಮರ್ಥಿಸಿಕೊಂಡರು.

ಗುಂಪು ಹಾಗೂ ಒಳಜಗಳ ತ್ಯಜಿಸಿ, ಪಕ್ಷದ ನಾಯಕರಲ್ಲಿ ಐಕಮತ್ಯ ಮತ್ತು ನಂಬಿಕೆ ಇರಬೇಕೆಂಬುದು ಅವರಿಬ್ಬರ ಭಾಷಣಗಳ ಮುಖ್ಯಾಂಶವಾಗಿತ್ತು.

ಲೋಕಸಭೆಗೆ ಮಂಡಲ್ ಆಯ್ಕೆ
ಪಟ್ಣ, ಜೂನ್ 4 –
ಮಾಧಿಪುರ ಸಂಸತ್ ಚುನಾವಣೆ ಕ್ಷೇತ್ರದಿಂದ ಲೋಕಸಭೆಯ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಶೋಷಿತ ದಳದ ನಾಯಕ ಹಾಗೂ ಬಿಹಾರ ರಾಜ್ಯದ ಮಾಜಿ ಮುಖ್ಯಮಂತ್ರಿ ಶ್ರೀ ಬಿ.ಪಿ. ಮಂಡಲ್ ಅವರು ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.