ADVERTISEMENT

ಭಾನುವಾರ, 10–3–1968

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2018, 19:30 IST
Last Updated 9 ಮಾರ್ಚ್ 2018, 19:30 IST

ಆಹಾರ ಕೊರತೆಗೆ ಕೃಷಿ ಕ್ಷೇತ್ರದ ಅಲಕ್ಷ್ಯವೇ ಕಾರಣ: ವಿರೋಧ ಪಕ್ಷದ ಸಚೇತಕರ ಟೀಕೆ
ಬೆಂಗಳೂರು, ಮಾ. 9–
ಸರಕಾರವು ವ್ಯವಸಾಯ ಕ್ಷೇತ್ರವನ್ನು ಅಲಕ್ಷಿಸಿದೆಯೆಂದು ವಿರೋಧ ಪಕ್ಷದ ಸಚೇತಕ ಶ್ರೀ ಎನ್. ಹುಚ್ಚಮಾಸ್ತಿ ಗೌಡ ಅವರು ಇಂದು ವಿಧಾನ ಸಭೆಯಲ್ಲಿ ಆಪಾದಿಸಿದರು.

ಭಾರತದಲ್ಲಿ ತಲಾ ಹೆಕ್ಟೇರ್‌ವಾರು ಸಾಗುವಳಿ ಭೂಮಿಯು ಇತರ ಕೆಲವು ದೇಶಗಳಿಗೆ ಹೋಲಿಸಿದರೆ ಹೆಚ್ಚಾಗಿದ್ದು, ಉತ್ಪಾದನೆ ಮಾತ್ರ ಕಡಿಮೆಯಾಗಿದೆ ಎಂದು ಅವರು ಅಂಕಿ ಅಂಶಗಳೊಂದಿಗೆ ವಿವರಿಸಿದರು.

ಜಿಲ್ಲೆಗೊಂದು ಪಾನನಿರೋಧ ಪ್ರಚಾರ ಸಮಿತಿ
ಬೆಂಗಳೂರು, ಮಾ. 9–
ಎಲ್ಲ ಜಿಲ್ಲೆಗಳಲ್ಲೂ ಪಾನನಿರೋಧ ಪ್ರಚಾರ ಸಮಿತಿಗಳನ್ನು ರಚಿಸಲಾಗುವುದೆಂದು ಅರ್ಥ ಸಚಿವ ಶ್ರೀ ರಾಮಕೃಷ್ಣ ಹೆಗಡೆ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ADVERTISEMENT

ಈ ಸಮಿತಿಗಳನ್ನು ರಚಿಸಿದ ನಂತರ, ಸಮಿತಿಗಳ ಸದಸ್ಯರ ಅಭಿಪ್ರಾಯಗಳನ್ನು ಪಡೆದು ಮುಂದೆ ಏನು ಮಾಡಬೇಕೆಂಬುದನ್ನು ಸರ್ಕಾರ ಯೋಚಿಸುವುದೆಂದು ಸಚಿವ ಶ್ರೀ ಹೆಗಡೆ ಅವರು ನುಡಿದರು.

ಕಛತೀವು: ಬ್ರಿಟನ್‌ಗೂ ಹಕ್ಕು?
ನವದೆಹಲಿ, ಮಾ. 9
– ಭಾರತ–ಸಿಂಹಳ ದೇಶಗಳ ನಡುವೆ ಪಾಕ್ ಜಲಸಂಧಿಯಲ್ಲಿರುವ ಕಛತೀವು ದ್ವೀಪದ ಒಡೆತನದ ಬಗ್ಗೆ ಮೂರನೇ ಹಕ್ಕುದಾರರೊಬ್ಬರು ಹುಟ್ಟಿಕೊಂಡಿದ್ದಾರೆ.

ಮೂರನೇ ಹಕ್ಕುದಾರ: ಬ್ರಿಟನ್. ನಿರ್ಜನ ದ್ವೀಪವಾದ ಈ ಕಛತೀವು ದ್ವೀಪದ ಆಯಕಟ್ಟಿನ ಮಹತ್ವ ಕುರಿತು ಬ್ರಿಟನ್ ಪತ್ರಿಕೆಗಳು ಅನೇಕ ವರ್ಷಗಳಿಂದ ವರದಿ ಮಾಡುತ್ತಾ ಬಂದಿವೆ. 

ಅನಭಿವೃದ್ಧ ರಾಜ್ಯಗಳಿಗೆ ಹೆಚ್ಚು ನೆರವು ಕೊಡಿಸಲು ಅರ್ಥ ಆಯೋಗಕ್ಕೆ ಒತ್ತಾಯ
ಬೆಂಗಳೂರು, ಮಾ. 9–
ಅಭಿವೃದ್ಧಿ ಅವಕಾಶವಿದ್ದರೂ, ಹಣದ ಕೊರತೆಯಿಂದಾಗಿ ತೊಂದರೆಗೊಳಗಾಗಿರುವ ರಾಜ್ಯಗಳಿಗೆ, ಕೇಂದ್ರದಿಂದ ಯೋಗ್ಯ ಪರಿಹಾರ ದೊರಕಿಸಿಕೊಡಬೇಕಾದ ಅಗತ್ಯವನ್ನು ಅರ್ಥಸಚಿವ ಶ್ರೀ ರಾಮಕೃಷ್ಣ ಹೆಗಡೆ ಅವರು ಕೇಂದ್ರ ಆರ್ಥಿಕ ಆಯೋಗದ ಮುಂದೆ ಮಂಡಿಸಿದ್ದಾರೆ.

ಜುಲೈನಲ್ಲಿ ಮತ್ತೆ ವಿಧಾನಸಭೆ ಸಮಾವೇಶ
ಬೆಂಗಳೂರು, ಮಾ.9– 
ಪ್ರಸ್ತುತ ಬಜೆಟ್ ಅಧಿವೇಶನದ ನಂತರ ವಿಧಾನಸಭೆಯು ಪುನಃ ‘ಜುಲೈ ಮೂರನೆಯ ವಾರ ಅಥವಾ ನಾಲ್ಕನೆಯ ವಾರ ಸಮಾವೇಶಗೊಳ್ಳುವಂತೆ ಅವಕಾಶ ಕಲ್ಪಿಸಲು ಸರಕಾರ ನಿರ್ಧರಿಸಿದೆ’ ಎಂದು ನ್ಯಾಯಾಂಗ ಸಚಿವ ಶ್ರೀ ಎಸ್.ಆರ್. ಕಂಠಿ ಅವರು ಇಂದು ವಿಧಾನಸಭೆಯಲ್ಲಿ ಪ್ರಕಟಿಸಿದರು.

ಉಳಿತಾಯ ರೂಪದಲ್ಲಿ ಭಾಗಶಃ ತುಟ್ಟಿಭತ್ಯ: ಸಚಿವರಿಂದ ಸಮರ್ಥನೆ
ಬೆಂಗಳೂರು, ಮಾ. 9–
ಸರ್ಕಾರಿ ನೌಕರರಿಗೆ ಕೊಡಲು ಉದ್ದೇಶಿಸಿರುವ ಏರಿಸಿದ ತುಟ್ಟಿಭತ್ಯದ 3ನೇ ಒಂದಂಶವನ್ನು ಉಳಿತಾಯದ ರೂಪದಲ್ಲಿ ಕೊಡುವ ವಿಧಾನವನ್ನು ಅರ್ಥಸಚಿವರು ಇಂದು ವಿಧಾನಸಭೆಯಲ್ಲಿ ಕಾರಣಗಳನ್ನು ನೀಡಿ ಸಮರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.