ಇಂದಿರಾ ಪ್ರಧಾನಿ; ಮುರಾರಜಿ ಉಪ ಪ್ರಧಾನಿ (ವರದಿ: ಟ.ಎಸ್. ರಾಮಚಂದ್ರರಾವ್)
ನವದೆಹಲಿ, ಮಾರ್ಚ್ 11– ಇನ್ನು ಕೇವಲ ಒಂದು ದೃಶ್ಯದೊಡನೆ ಆಯ್ಕೆಯ ನಾಟಕ ಮುಕ್ತಾಯವಾಗುತ್ತದೆ. ಭಾನುವಾರ ಕಾಂಗ್ರೆಸ್ ಪಾರ್ಲಿಮೆಂಟರಿ ಪಕ್ಷದ ನಾಯಕರ ಸರ್ವಾನುಮತ ಆಯ್ಕೆಯಾಗುತ್ತದೆ. ಅದೇ ಆ ಕೊನೆಯ ದೃಶ್ಯ.
ಕಳೆದ ಒಂದು ವಾರದಿಂದ ಪಕ್ಷದ ನಾಯಕರ ಆಯ್ಕೆ ಸರ್ವಾನುಮತದಿಂದ ನಡೆಯುವ ಸಾಧ್ಯತೆ ಕಾಣುತ್ತಿರಲಿಲ್ಲ. ಪ್ರಧಾನಿ ಸ್ಥಾನಕ್ಕೆ ಇಂದಿರಾ–ಮುರಾರಜಿ ನಡುವೆ ಸ್ಪರ್ಧೆ ಖಚಿತವೆಂಬುದು ಶುಕ್ರವಾರದ ರಾತ್ರಿಯವರೆಗೂ ಖಾತರಿಯಾಗಿತ್ತು.
***
ರಷ್ಯದ ರಕ್ಷಣಾ ಮಂತ್ರಿ ಮಲಿನೋವ್ಸ್ಕಿಗೆ ಸಾವು ಸನ್ನಿಹಿತ
ಮಾಸ್ಕೊ, ಮಾರ್ಚ್ 11– ಕ್ಯಾನ್ಸರ್ ರೋಗದಿಂದ ನರಳುತ್ತಿರುವ ರಷ್ಯದ ರಕ್ಷಣಾ ಸಚಿವ ಮಲಿನೋವ್ಸ್ಕಿ ಅವರು ಸಾವಿನ ದವಡೆಯಲ್ಲಿದ್ದಾರೆಂದೂ, ಚಿಕಿತ್ಸೆ ಫಲಕಾರಿಯಾಗಿಲ್ಲವೆಂದೂ ಬಲ್ಲ ಮೂಲಗಳು ತಿಳಿಸಿವೆ.
ಮಲಿನೋವ್ಸ್ಕಿ ಮೃತಪಟ್ಟಿದ್ದಾರೆಂಬ ವಿದೇಶಿ ಪತ್ರಿಕಾ ವರದಿಗಳನ್ನು ವಿದೇಶ ಖಾತೆ ಇಂದು ನಿರಾಕರಿಸಿದೆ.
***
ಸಂಪುಟದ ರಚನೆಯಲ್ಲಿ ಅನಿರ್ಬಂಧ ಸ್ವಾತಂತ್ರ್ಯ: ಇಂದಿರಾ ಗಾಂಧಿ ಸ್ಪಷ್ಟನೆ
ನವದೆಹಲಿ, ಮಾರ್ಚ್ 11– ‘ಶ್ರೀ ಮುರಾರಜಿ ದೇಸಾಯಿ ಅವರು ಉಪ ಪ್ರಧಾನಿಯಾಗಿ ಕೆಲಸ ಮಾಡಲು ಒಪ್ಪಿಕೊಂಡಿದ್ದಾರೆ.’ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಇಂದು ವರದಿಗಾರರಿಗೆ ಈ ಸುದ್ದಿಯನ್ನು ಕೊಟ್ಟರು.
ಈ ಸುದ್ದಿಯ ಪ್ರಕಟಣೆಯಿಂದಾಗಿ ಶ್ರೀಮತಿ ಗಾಂಧಿಯವರನ್ನು ಕಾಂಗ್ರೆಸ್ ಪಾರ್ಲಿಮೆಂಟರಿ ಪಕ್ಷವು ಭಾನುವಾರ ಸಮಾವೇಶಗೊಂಡಾಗ ಸರ್ವಾನುಮತದಿಂದ ಆರಿಸುವುದು ಖಚಿತವಾಯಿತು. ತಮ್ಮ ಸಂಪುಟ ರಚನೆಯಲ್ಲಿ ತಮಗೆ ‘ಅನಿರ್ಬಂಧ ಸ್ವಾತಂತ್ರ್ಯವಿರುವುದಾಗಿ’ ಪ್ರಧಾನಿ ಮುಂದುವರೆದು ತಿಳಿಸಿದರು.
***
ಜನರಲ್ ಸುಹಾರ್ತೊ ಹಂಗಾಮಿ ಅಧ್ಯಕ್ಷ
ಜಕಾರ್ತ, ಮಾರ್ಚ್ 11– ಇಂಡೋನೀಸಿಯದ ತಾತ್ಕಾಲಿಕ ಅಧ್ಯಕ್ಷರಾಗಿ ಸೇನೆಯ ಬಲಿಷ್ಠ ವ್ಯಕ್ತಿ ಜನರಲ್ ಸುಹಾರ್ತೊ ಅವರು ಭಾನುವಾರ ಪ್ರಮಾಣವಚನ ಸ್ವೀಕರಿಸುವರೆಂದು ಇಂಡೋನೀಸಿಯದ ಕಾಂಗ್ರೆಸ್ ಇಂದು ರಾತ್ರಿ ಪ್ರಕಟಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.