ಎರಡು ಲಕ್ಷಕ್ಕೂ ಹೆಚ್ಚು ಜನರಿಂದ ತಲಕಾಡಿನಲ್ಲಿ ಭಕ್ತಿಪೂರ್ಣ ಪಂಚಲಿಂಗ ದರ್ಶನ
ಮೈಸೂರು, ಡಿ. 12– ಶೈವಪಂಥಿಗಳಿಗೆ ಅಪರೂಪವಾಗಿ ಲಭ್ಯವಾಗುವ ಪುಣ್ಯದಿನಗಳಲ್ಲಿ ಒಂದಾದ ಇಂದು ತಲಕಾಡಿನಲ್ಲಿ ಸೇರಿದ್ದ ಎರಡು ಲಕ್ಷಕ್ಕೂ ಹೆಚ್ಚು ಮಂದಿ ಕಾವೇರಿ ನದಿಯಲ್ಲಿ ಮಿಂದು ಪಂಚಲಿಂಗ ದರ್ಶನ ಪಡೆದರು.
ಕುದುರೆಮುಖ ಕಬ್ಬಿಣದ ಅದುರು ಯೋಜನೆಗೆ ಜಪಾನಿನ ನೆರವು
ನವದೆಹಲಿ, ಡಿ. 12– ಮೈಸೂರು ರಾಜ್ಯದ ಕುದುರೆಮುಖ ಬೆಟ್ಟದ ಪ್ರದೇಶದಲ್ಲಿ ವರ್ಷಂಪ್ರತಿ 1 ಕೋಟಿ 40 ಲಕ್ಷ ಟನ್ಗಳಷ್ಟು ಕಬ್ಬಿಣದ ಅದುರನ್ನು ಉತ್ಪಾದಿಸಿ, ಸಾಗಿಸುವ ಯೋಜನೆಯೊಂದನ್ನು ಕೈಗೊಳ್ಳಲಾಗುವುದು.
ಈ ಪ್ರದೇಶದಲ್ಲಿ 150 ಕೋಟಿ ಟನ್ಗಳಷ್ಟು ಮ್ಯಾಗ್ನೆಟೈಟ್ ಕಬ್ಬಿಣದ ಅದುರಿನ ನಿಕ್ಷೇಪವಿದೆಯೆಂದು ಖಚಿತವಾಗಿ ಗೊತ್ತಾಗಿದೆಯಲ್ಲದೆ, ಅಲ್ಲಿನ ಅದುರನ್ನು ಭಾರತೀಯ ಪ್ರಯೋಗ ಶಾಲೆಗಳಲ್ಲಿ ಪರೀಕ್ಷಿಸಿ, ಶೇಕಡ 45 ರಷ್ಟು ಕಬ್ಬಿಣದ ಅಂಶ ಈ ಅದುರಿನಲ್ಲಿ ಇದೆಯೆಂಬ ಸಂಗತಿಯನ್ನು ಸ್ಪಷ್ಟಪಡಿಸಿಕೊಳ್ಳಲಾಗಿದೆ.
ಸುಮಾರು 23 ಕೋಟಿ ರೂ. ವೆಚ್ಚದ ಈ ಯೋಜನೆಯನ್ನು ಜಪಾನಿನ ಸಹಕಾರದಿಂದ ಕೈಗೊಳ್ಳಲಾಗುವುದು.
ಭಾರತ–ಅಮೆರಿಕ ಬಾಂಧವ್ಯ ಕುರಿತು ರಸ್ಕ್, ಚಾಗಲಾ ಚರ್ಚೆ
ನವದೆಹಲಿ, ಡಿ. 12– ಭಾರತ, ಅಮೆರಿಕ ಬಾಂಧವ್ಯಕ್ಕೆ ಸಂಬಂಧಿಸಿದ ಸಮಸ್ಯೆ ಹಾಗೂ ಅಂತರರಾಷ್ಟ್ರೀಯ ಪ್ರಶ್ನೆಗಳ ಬಗ್ಗೆ ಅಮೆರಿಕದ ಸ್ಟೇಟ್ ಕಾರ್ಯದರ್ಶಿ ಡೀನ್ರಸ್ಕ್ ಹಾಗೂ ಭಾರತದ ವಿದೇಶಾಂಗ ಸಚಿವ ಶ್ರೀ ಎಮ್.ಸಿ. ಚಾಗಲಾ ಇಂದು ಚರ್ಚೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.