23ರಂದು ಹೊಸ ನಾಯಕರ ಆಯ್ಕೆ: ಎಸ್ಸೆನ್ ರಾಜೀನಾಮೆ ಪಕ್ಷಕ್ಕೆ ಸಲ್ಲಿಕೆ
ಬೆಂಗಳೂರು, ಮೇ 13– ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಅವರು ವಿಧಾನಮಂಡಲದ ಕಾಂಗ್ರೆಸ್ ಪಕ್ಷದ ನಾಯಕ ಸ್ಥಾನಕ್ಕೆ ಇಂದು ರಾಜೀನಾಮೆ ನೀಡಿದರು. ಹೊಸ ನಾಯಕನನ್ನು ಆರಿಸಲು ಪಕ್ಷದ ಸಭೆ ಮೇ 23ರಂದು ಬೆಂಗಳೂರಿನಲ್ಲಿ ಸೇರಲಿದೆ.
ಇಂದು ಮುಂಬೈಯಿಂದ ನಗರಕ್ಕೆ ಆಗಮಿಸಿದ ಸ್ವಲ್ಪ ಹೊತ್ತಿನಲ್ಲೇ ತಮ್ಮ ರಾಜೀನಾಮೆಯನ್ನು ಮುಖ್ಯಮಂತ್ರಿಗಳು ಪಕ್ಷದ ಕಾರ್ಯದರ್ಶಿ ಅವರಿಗೆ ಕಳುಹಿಸಿಕೊಟ್ಟರು.
ಎಸ್.ಎಸ್.ಪಿ ಸತ್ಯಾಗ್ರಹಿಗಳ ಮೇಲೆ ಲಾಠಿ ಚಾರ್ಜ್
ಸಾಗರ, ಮೇ 13– ಎಸ್.ಎಸ್.ಪಿ. ಚಳವಳಿ ಅಂಗವಾಗಿ ಇಂದು ಸ್ಥಳೀಯ ಅಸಿಸ್ಟೆಂಟ್ ಕಮೀಷನರ್ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿದ್ದ ಸತ್ಯಾಗ್ರಹಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಪರಿಣಾಮವಾಗಿ ಎಸ್.ಎಸ್.ಪಿ. ನಾಯಕ ಕಾಗೋಡು ತಿಮ್ಮಪ್ಪ ಅವರೂ ಸೇರಿ ಆರುಮಂದಿ ಸತ್ಯಾಗ್ರಹಿಗಳು ಗಾಯಗೊಂಡರು. ಇತರ ಅನೇಕರಿಗೆ ಅಲ್ಪ ಪ್ರಮಾಣದ ಗಾಯಗಳಾದುವು.
ಗಡಿ ವಿವಾದ ಮತ್ತೆ ಕಾಂಗ್ರೆಸ್ ಕಾರ್ಯ ಸಮಿತಿಗೆ
ಬೆಂಗಳೂರು, ಮೇ 13– ಮೈಸೂರು– ಮಹಾರಾಷ್ಟ್ರ ಗಡಿ ವಿವಾದವನ್ನು ಬಗೆಹರಿಸಲು ಮತ್ತೊಂದು ಹೊಸ ಸೂತ್ರ ಅನ್ವಯಿಸಿದಲ್ಲಿ ‘ಮತ್ತೆ ಚಳವಳಿಗಳ ಪ್ರವಾಹದ ಬಾಗಿಲನ್ನು ತೆರೆದಂತಾಗುವುದು’ ಎಂದು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಇಂದು ಇಲ್ಲಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.