ಗಡಿ ವಿವಾದ: ಸಲಹೆ
ಬೆಂಗಳೂರು, ಆ. 20 -ಸಂಧಾನದ ಮೂಲಕವಾದ ಇತ್ಯರ್ಥದ ದ್ವಾರಾ ಅಡ್ಹಾಕ್ ಏರ್ಪಾಟನ್ನು ಮಾಡಿಕೊಳ್ಳುವುದೊಂದೇ ಮೈಸೂರು - ಮಹಾರಾಷ್ಟ್ರದ ಗಡಿ ವಿವಾದವನ್ನು ಬಗೆಹರಿಸುವ ವಿಧಾನವೆಂದು ನಾಲ್ವರು ಸದಸ್ಯರಿರುವ ಮೈಸೂರು - ಮಹಾರಾಷ್ಟ್ರ ಗಡಿ ಸಮಿತಿಯ ಮೈಸೂರು ಪ್ರತಿನಿಧಿಗಳು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿರುವರೆಂದು ಇಂದು ಇಲ್ಲಿ ತಿಳಿದುಬಂದಿದೆ.
ರಾಜಸ್ಥಾನದಲ್ಲಿ ದ್ವಿತೀಯಅಣು ವಿದ್ಯುತ್ ಕೇಂದ್ರ
ನವದೆಹಲಿ, ಆ. 20 - ರಾಜಸ್ಥಾನದ ಕೋಟಾ ಬಳಿ ರಾಣಾ ಪ್ರತಾಪ್ ಸಾಗರದಲ್ಲಿ ದ್ವಿತೀಯ ಅಣು ವಿದ್ಯುತ್ ಉತ್ಪಾದನಾ ಕೇಂದ್ರ ಸ್ಥಾಪಿಸಲು ಭಾರತ ಸರ್ಕಾರ ನಿರ್ಧರಿಸಿದೆಯೆಂದು ಇಂದು ಲೋಕ ಸಭೆಯಲ್ಲಿ ಪ್ರಕಟಿಸಲಾಯಿತು.
ಭಾರತ ಜನತೆಯ ಕ್ಷೇಮಾಭಿವೃದ್ಧಿ ಹಾಗೂ ಇತರ ಶಾಂತಿಯುತ ಉದ್ದೇಶಗಳಿಗಾಗಿ ಅಣುಶಕ್ತಿಯ ಅಭಿವೃದ್ಧಿ ಹತೋಟಿ ಮತ್ತು ಬಳಕೆಗೆ ಅವಕಾಶ ಕಲ್ಪಿಸುವ ಮಸೂದೆಯನ್ನು ಸಭೆ ಅಂಗೀಕರಿಸುವುದಕ್ಕೆ ಮುನ್ನ ನ್ಯಾಯಾಂಗ ಸಚಿವ ಶ್ರೀ ಅಶೋಕ್ಸೆನ್ ಅವರು ಈ ವಿಷಯವನ್ನು ಪ್ರಕಟಿಸಿದರು.
ನಾಲ್ಕು ರಾಜ್ಯಗಳಲ್ಲಿ ಪರೀತ ಪ್ರವಾಹ
ಕಲ್ಕತ್ತ, ಆ. 20 - ಪಶ್ಚಿಮ ಬಂಗಾಳ, ಅಸ್ಸಾಂ, ಬಿಹಾರ ಮತ್ತು ಉತ್ತರ ಪ್ರದೇಶಗಳ ಅನೇಕ ನದಿಗಳಲ್ಲಿ ವಿಪರೀತ ಮಳೆಯ ಕಾರಣ ಪ್ರವಾಹ ಬಂದು ಹಾನಿ ಸಂಭವಿಸಿದೆ.
ಉತ್ತರ ಬಿಹಾರದ ಅನೇಕ ನದಿಗಳಲ್ಲಿ ಪ್ರವಾಹ ಬಂದಿರುವುದರಿಂದ ವಿಸ್ತಾರವಾದ ಫಲವತ್ತಾದ ಪ್ರದೇಶವು ನೀರಿನಲ್ಲಿ ಮುಳುಗಡೆಯಾಗಿವೆ. ದರ್ಭಾಂಗ ಜಿಲ್ಲೆಯಲ್ಲಿ ಮೂರು ಲಕ್ಷ ಮಂದಿಗೆ ಹಾನಿ ತಟ್ಟಿದೆ.
ಉತ್ತರ ಪ್ರದೇಶದ ಪೂರ್ವ ಭಾಗದ ಬಾರಿ, ಗಂದಕ್, ಚೋಟಿ ಗಂಡಕ್, ಕಿಸ್ತಿ, ರೋಹಿಣಿ ಹಾಗೂ ಇತರ ಸಣ್ಣ ನದಿಗಳಲ್ಲಿ ಪ್ರವಾಹದ ಮಟ್ಟ ಏರುತ್ತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.