ADVERTISEMENT

ಶನಿವಾರ, 23–12–1967

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2017, 19:30 IST
Last Updated 22 ಡಿಸೆಂಬರ್ 2017, 19:30 IST

ಹಿಂದಿ ವಿರುದ್ಧ ಚಳವಳಿ: ಮದರಾಸಿನಲ್ಲಿ ಮೂರು ರೈಲುಗಳಿಗೆ ಬೆಂಕಿ
ಮದರಾಸು, ಡಿ. 22–
ಹಿಂದಿ ವಿರೋಧಿ ಪ್ರದರ್ಶನಕಾರರು ಇಂದು ಮದರಾಸಿಗೆ ಬರುತ್ತಿದ್ದ ಮೂರು ರೈಲುಗಳಿಗೆ ಬೆಂಕಿ ಇಟ್ಟರು. ಅದರ ಕ್ರಮಗಳಿಂದ ಮೀಟರ್‌ಗೇಜ್ ಮತ್ತು ಬ್ರಾಡ್‌ಗೇಜ್ ವಿಭಾಗದಲ್ಲಿ ರೈಲುಗಳ ಓಡಾಟಕ್ಕೆ ಅಡಚಣೆ ಉಂಟಾಗಿದೆ. ಉತ್ತರ ಭಾರತಕ್ಕೆ ಹೋಗುವ ಎಲ್ಲ ರೈಲುಗಳನ್ನು ರದ್ದುಪಡಿಸಬೇಕೆಂದು ಪ್ರದರ್ಶನಕಾರರು ಒತ್ತಾಯಪಡಿಸಿದರು.

ಭೂಕಂದಾಯ ರದ್ದಿನ ‘ವಚನ ಭ್ರಷ್ಟತೆ’ ಖಂಡನೆ: ಅವಿಶ್ವಾಸ ಸೂಚನೆ ಚರ್ಚೆ
ಬೆಂಗಳೂರು, ಡಿ. 22–
ಹತ್ತು ತಿಂಗಳುಗಳ ಹಿಂದೆ ಮತ್ತೆ ಅಧಿಕಾರಕ್ಕೆ ಬಂದ ಶ್ರೀ ನಿಜಲಿಂಗಪ್ಪ ಅವರ ಸರ್ಕಾರದ ವಿರುದ್ಧ ಸಂಯುಕ್ತ ವಿರೋಧಿ ಶಾಸಕ ದಳವು ಮಂಡಿಸಿದ ಪ್ರಥಮ ಅವಿಶ್ವಾಸ ಸೂಚನೆಯ ಮೇಲಿನ ಚರ್ಚೆ ಇಂದು ವಿಧಾನಸಭೆಯಲ್ಲಿ ಆರಂಭವಾಯಿತು.

ಭೂ ಕಂದಾಯ ರದ್ದತಿಯ ‘ವಚನ ಭ್ರಷ್ಟತೆ’ ಮಿತವ್ಯಯದ ಪ್ರತಿಜ್ಞೆಗೆ ‘ಎಸಗಿದ ಅಪಚಾರ’, ಆಹಾರ ಪೂರೈಕೆ, ಬೆಲೆ ಏರಿಕೆ ಹತೋಟಿಯಲ್ಲಿ ಸರ್ಕಾರ ಕಂಡ ‘ವೈಫಲ್ಯ’, ಖಾದಿ ಮಂಡಳಿ, ಪೋಲೀಸರ ‘ದೌರ್ಜನ್ಯ’– ಆಳುವ ಮಂತ್ರಿ ಮಂಡಲದ ವಿರುದ್ಧ ಆರೋಪಗಳ ಪಟ್ಟಿ ಓದಿದ ವಿರೋಧ ಪಕ್ಷಗಳ ಸದಸ್ಯರು, ತತ್‌ಕ್ಷಣ ರಾಜಿನಾಮೆಗೆ ಒತ್ತಾಯಪಡಿಸಿದರು.

ಡಾ. ನಾಗಪ್ಪ ಆಳ್ವ: ಮತ್ತೆ ಎಂ.ಪಿ.ಸಿ.ಸಿ ಅಧ್ಯಕ್ಷರಾಗಿ ಆಯ್ಕೆ
ಬೆಂಗಳೂರು, ಡಿ. 22–
ಇಂದು ಇಲ್ಲಿ ನಡೆದ ನೂತನ ಎಂ.ಪಿ.ಸಿ.ಸಿ.ಯ ಪ್ರಥಮ ಸಭೆ, ಅಧ್ಯಕ್ಷರಾಗಿರುವಡಾ. ಕೆ. ನಾಗಪ್ಪ ಆಳ್ವ ಅವರನ್ನು ಎರಡು ವರ್ಷದ ಅವಧಿಗೆ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಪುನಃ ಆರಿಸಿತು.

ADVERTISEMENT

ಚಿಂತನಪಲ್ಲಿ ವೆಂಕಟರಾವ್ ಆದ್ಯ ರಂಗಾಚಾರ್ಯರಿಗೆ ಅಕೆಡೆಮಿ ಗೌರವ
ಬೆಂಗಳೂರು, ಡಿ. 22–
ಪ್ರಸಿದ್ಧ ಸಂಗೀತ ವಿದ್ವಾಂಸರಾದ 96 ವರ್ಷ ವಯಸ್ಸಿನ ಶ್ರೀ ಚಿಂತನಪಲ್ಲಿ ವೆಂಕಟರಾಯರಿಗೆ ಕೇಂದ್ರ ಸಂಗೀತ ನಾಟಕ ಅಕೆಡೆಮಿ ಕರ್ನಾಟಕ ಸಂಗೀತ ವಿಭಾಗದ ಪ್ರಶಸ್ತಿ ನೀಡಿದೆಯೆಂದು ತಿಳಿದು ಬಂದಿದೆ. ಖ್ಯಾತ ಸಾಹಿತಿ ಶ್ರೀ ಆದ್ಯ ರಂಗಾಚಾರ್ಯರನ್ನು ಅಕೆಡೆಮಿಯ ‘ಫೆಲೋ’ ಆಗಿ ನೇಮಿಸಿದೆಯೆಂದು ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.