ಮಹಾಜನ್ ವರದಿ ಸರ್ವಪಕ್ಷ ಸಭೆ ಸಲಹೆಗೆ ಮೈಸೂರು ಎಂ.ಪಿ.ಗಳ ತಿರಸ್ಕಾರ (ನಾರಾಯಣಸ್ವಾಮಿ ಅವರಿಂದ)
ನವದೆಹಲಿ, ಡಿ. 8– ಮಹಾಜನ್ ಆಯೋಗದ ಶಿಫಾರಸುಗಳ ಬಗೆಗೆ ‘ರಾಷ್ಟ್ರೀಯ ಒಟ್ಟು ಅಭಿಪ್ರಾಯ’ ರೂಪಿಸಲು ವಿವಿಧ ರಾಜಕೀಯ ಪಕ್ಷಗಳ ನಾಯಕರ ಸಮ್ಮೇಳನ ಕರೆಯುವ ಗೃಹಸಚಿವ ಚವಾಣರ ಸಲಹೆಗೆ ತಾವು ಶತಾಯ ಗತಾಯ ಒಪ್ಪಲು ಸಾಧ್ಯವೇ ಇಲ್ಲವೆಂದು ಮೈಸೂರಿನ ಎಂ.ಪಿ.ಗಳ ತಂಡವು ಇಂದು ಪ್ರಧಾನಿಗೆ ಖಂಡತುಂಡವಾಗಿ ತಿಳಿಸಿತು.
ಮೈಸೂರಿನ ಇಪ್ಪತ್ತೈದು ಮಂದಿ ಪಾರ್ಲಿಮೆಂಟ್ ಸದಸ್ಯರ ಸರ್ವಪಕ್ಷ ನಿಯೋಗವೊಂದು ಪ್ರಧಾನ ಮಂತ್ರಿಯನ್ನು ಭೇಟಿ ಮಾಡಿ, ಮಹಾಜನ್ ಆಯೋಗದ ವರದಿಯನ್ನು ಮೈಸೂರು ರಾಜ್ಯ ಅಂತಿಮ ತೀರ್ಪೆಂದು ಪರಿಗಣಿಸಿ ಅದನ್ನು ಒಪ್ಪಿಕೊಳ್ಳುವುದೆಂದು ತಿಳಿಸಿತು.
*
2 ವರ್ಷದ ಪಿ.ಯು.ಸಿ.ಗೆ ಪ್ರತ್ಯೇಕ ಮಂಡಳಿ ರಚನೆ ಸರ್ಕಾರದ ಪರಿಶೀಲನೆಯಲ್ಲಿ
ಬೆಂಗಳೂರು, ಡಿ. 8– ಎರಡು ವರ್ಷದ ಪಿ.ಯು.ಸಿ. ಶಿಕ್ಷಣದ ಮೇಲ್ವಿಚಾರಣೆಗೆ ಪ್ರತ್ಯೇಕ ಮಂಡಳಿಯನ್ನು ರಚಿಸಲು ಸರ್ಕಾರ ಪರಿಶೀಲಿಸುತ್ತಿದೆಯೆಂದು ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡ ಅವರು ಇಂದು ವಿಧಾನಪರಿಷತ್ತಿನಲ್ಲಿ ತಿಳಿಸಿದರು.
*
ದೆಹಲಿ ಪ್ರದೇಶದಲ್ಲಿ ಅಬ್ದುಲ್ಲಾ ಚಲನವಲನದ ಮೇಲಿನ ನಿರ್ಬಂಧ ರದ್ದು
ನವದೆಹಲಿ, ಡಿ. 8– ಕೇಂದ್ರಾಡಳಿತ ದೆಹಲಿ ಪ್ರದೇಶದೊಳಗೆ ಯಾವ ನಿರ್ಬಂಧವೂ ಇಲ್ಲದೆ ಓಡಾಡುವುದಕ್ಕೆ ಷೇಕ್ ಅಬ್ದುಲ್ಲಾ ಅವರಿಗೆ ಅವಕಾಶ ನೀಡುವ ಆಜ್ಞೆ ಹೊರಡಿಸಲು ಕೇಂದ್ರ ಸರಕಾರ ನಿರ್ಧರಿಸಿದೆಯೆಂದು ಕೇಂದ್ರ ಗೃಹ ಸಚಿವ ಶ್ರೀ ವೈ.ಬಿ. ಚವಾಣ್ ಅವರು ಇಂದು ರಾಜ್ಯಸಭೆಯಲ್ಲಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.