* ಡಿ ಗಾಲ್ರಿಂದ ಬಲಪ್ರದರ್ಶನದ ನಿಲುವು: ಫ್ರೆಂಚ್ ಪಾರ್ಲಿಮೆಂಟ್ ವಜಾ
ಪ್ಯಾರಿಸ್, ಮೇ 30– ಅಧ್ಯಕ್ಷ ಜ. ಡಿ ಗಾಲ್ ಅವರು ಇಂದು ಫ್ರೆಂಚ್ ನ್ಯಾಷನಲ್ ಅಸೆಂಬ್ಲಿಯನ್ನು ವಜಾ ಮಾಡಿ ಹೊಸ ಸಾರ್ವತ್ರಿಕ ಚುನಾವಣೆಗಳಿಗೆ ಆಜ್ಞೆ ಮಾಡಿದರು.
‘ಪ್ರಸಕ್ತ ಪರಿಸ್ಥಿತಿಯಲ್ಲಿ ನಾನು ನಿವೃತ್ತನಾಗುವುದಿಲ್ಲ, ಪ್ರಧಾನಿಯನ್ನೂ ಬದಲಾಯಿಸುವುದಿಲ್ಲ’ ಎಂದು ಘೋಷಿಸಿದ ಡಿ ಗಾಲ್ ಮುಂದಿನ ತಿಂಗಳಿಗೆ ವ್ಯವಸ್ಥೆಯಾಗಲಿದ್ದ ಜನಮತಗಣನೆಯನ್ನೂ ಮುಂದೂಡಿದರು.
* ಅಂತರ್ ಯುದ್ಧಕ್ಕೆ ವೀಳ್ಯ
ಪ್ಯಾರಿಸ್, ಮೇ 30– ಡಿ ಗಾಲ್ ಪ್ರಸಾರ ಭಾಷಣ ‘ಅಂತರ್ ಯುದ್ಧಕ್ಕೆ ಮನವಿ’ ಎಂದು ಫ್ರೆಂಚ್ ಸೋಷಲಿಸ್ಟ್ ಫೆಡರೇಷನ್ ನಾಯಕ ಫ್ರಾಂಕಾಯಿಸ್ ಮಿಟ್ಟರ್ಯಾಂಡ್ ಹೇಳಿದರು.
ಡಿ ಗಾಲ್ ಅವರದು ‘ಸರ್ವಾಧಿಕಾರದ ವಾಣಿ’ ಎಂದು ವರ್ಣಿಸಿದ ಮಿಟ್ಟರ್ಯಾಂಡ್ ಇದನ್ನು ಜನತೆ ಮೌನಗೊಳಿಸುತ್ತದೆ ಎಂದರು.
* ಏಷ್ಯಾ ರಾಷ್ಟ್ರಗಳ ಸಂಘಟನೆಗೆ ಇಂದಿರಾ ಕರೆ
ಕ್ವಲಾಲಂಪುರ, ಮೇ 30– ಏಷ್ಯದ ಸ್ವತಂತ್ರ ರಾಷ್ಟ್ರಗಳೆಲ್ಲ ಒಂದುಗೂಡಬೇಕು ಹಾಗೂ ತಮ್ಮ ಏಕತೆಯನ್ನು ನಾಶ ಮಾಡುವ
ಶಕ್ತಿಗಳ ವಿರುದ್ಧ ಎಚ್ಚರಿಕೆಯಿಂದಿರಬೇಕೆಂದು ಭಾರತದ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಕರೆ ನೀಡಿದ್ದಾರೆ.
* ಮುಖ್ಯಮಂತ್ರಿ ಸ್ಪಷ್ಟನೆ: ಪ್ರದೇಶಗಳ ಬಗ್ಗೆ ತಾರತಮ್ಯ ತೋರಿಲ್ಲ
ಬೆಂಗಳೂರು, ಮೇ 30– ಹಳೆ ಮೈಸೂರು– ಹೊಸ ಮೈಸೂರುಗಳ ನಡುವೆ ಸಾರ್ವಜನಿಕ ಸೌಕರ್ಯಗಳ ಪೂರೈಕೆಯಲ್ಲಿ ತಾರತಮ್ಯವಾಗುತ್ತಿದೆಯೆ? ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಶ್ರೀ ವೀರೇಂದ್ರ ಪಾಟೀಲರು ನೀಡಿದ ಚುಟುಕಿನ ಉತ್ತರ, ಕರ್ನಾಟಕ ಪತ್ರಕರ್ತರ ಸಂಘದಲ್ಲಿ ನೆರೆದ ಪತ್ರಕರ್ತರಲ್ಲಿ ಒಂದು ಕ್ಷಣ ನಗುವೆಬ್ಬಿಸಿದರೂ, ಬಹಳ ಹಿಂದಿನಿಂದ ಬಂದ ಟೀಕೆಯೊಂದಕ್ಕೆ ಅವರು ಸಮಾಧಾನ ಹೇಳಿದಂತಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.