ADVERTISEMENT

ಚುನಾವಣೆ ಸಂಹಿತೆ ಕಟ್ಟುನಿಟ್ಟಿನ ಪಾಲನೆಗೆ ರಾಜ್ಯ ಸಂಪುಟ ನಿರ್ಧಾರ

ಗುರುವಾರ,

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2019, 19:36 IST
Last Updated 28 ಸೆಪ್ಟೆಂಬರ್ 2019, 19:36 IST

ಚುನಾವಣೆ ಸಂಹಿತೆ ಕಟ್ಟುನಿಟ್ಟಿನ ಪಾಲನೆಗೆ ರಾಜ್ಯ ಸಂಪುಟ ನಿರ್ಧಾರ

ಬೆಂಗಳೂರು, ಸೆ. 28– ವಿಧಾನಸಭಾ ಚುನಾವಣಾ ದಿನಾಂಕಗಳ ಪ್ರಕಟಣೆಯ ಹಿನ್ನೆಲೆಯಲ್ಲಿ ರಾಜ್ಯದ ಸಚಿವರು, ಅಧಿಕಾರೇತರ ಅಧ್ಯಕ್ಷರುಗಳು ಹಾಗೂ ಅಧಿಕಾರಿಗಳು ಚುನಾವಣಾ ಆಯೋಗದ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ಇಂದು ನಡೆದ ಸಚಿವ ಸಂಪುಟ ನಿರ್ಧರಿಸಿದೆ.

ಚುನಾವಣೆಗಳು ಮುಗಿಯುವವರೆಗೆ ಯಾವುದೇ ರೀತಿಯ ಹೊಸ ಯೋಜನೆ ಹಾಗೂ ಕಾರ್ಯಕ್ರಮಗಳಿಗೆ ಹಣಕಾಸು ಬಿಡುಗಡೆ ಮಾಡದಂತೆ ಮತ್ತು ಅವುಗಳನ್ನು ಉದ್ಘಾಟಿಸುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳದಂತೆ ಸಂಬಂಧಪಟ್ಟವರಿಗೆ ಪತ್ರ ಬರೆಯಲು ತೀರ್ಮಾನಿಸಿದೆ.

ADVERTISEMENT

ನಾಯಕರ ಬಂಧುಗಳಿಗೆ ಟಿಕೆಟ್ ಬೇಡ

ನವದೆಹಲಿ, ಸೆ. 28– ಮುಂದಿನ ನವೆಂಬರ್ ಮತ್ತು ಡಿಸೆಂಬರ್‌ಗಳಲ್ಲಿ ನಾಲ್ಕು ರಾಜ್ಯಗಳಿಗೆ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪ್ರಮುಖ ನಾಯಕರ ಸಂಬಂಧಿಗಳಿಗೆ ಟಿಕೆಟ್ ನೀಡಕೂಡದೆಂದು ಕಾಂಗ್ರೆಸ್ ಪಕ್ಷದ ಉನ್ನತ ಕಾರ್ಯತಂತ್ರ ಹಾಗೂ ಯೋಜನಾ ಸಮಿತಿ (ಎಸ್.ಪಿ.ಜಿ.) ಚುನಾವಣೆಯಲ್ಲಿ ಅನುಸರಿಸಬೇಕಾದ ಕೆಲವು ರೀತಿ ರಿವಾಜುಗಳ ಬಗೆಗೆ ಪಕ್ಷದ ಅಧ್ಯಕ್ಷರಿಗೆ ಶಿಫಾರಸು ಮಾಡಿರುವುದಾಗಿ ಗೊತ್ತಾಗಿದೆ.

ಫಿನ್ಲೆಂಡ್ ನೌಕೆ ದುರಂತ: 800 ಪ್ರಯಾಣಿಕರು ಸಾವು

‌ಹೆಲ್ಲೆಂಕಿ, ಸೆ. 28 (ರಾಯಿಟರ್)– ಫಿನ್ಲೆಂಡ್ ಬಳಿ ಬಾಲ್ಟಿಕ್ ಸಮುದ್ರದಲ್ಲಿ ಎಸ್ಟೋನಿಯದ ಸಾರಿಗೆ ನೌಕೆಯೊಂದು ಇಂದು ಬೆಳಿಗ್ಗೆ ಬಿರುಗಾಳಿಗೆ ಸಿಕ್ಕಿ ಮುಳುಗಿ ಸುಮಾರು 800ಕ್ಕೂ ಹೆಚ್ಚಿನ ಪ್ರಯಾಣಿಕರು ಸತ್ತಿರುವುದಾಗಿ ಭಯಪ‍ಡಲಾಗಿದೆ.

ಫಿನ್ಲೆಂಡ್‌ನ ನೈಋತ್ಯೆ ತೀರದಲ್ಲಿ 20 ನಾಟಿಕಲ್ ಮೈಲಿಗಳಷ್ಟು ದೂರದಲ್ಲಿ ಈ ದುರಂತ ಸಂಭವಿಸಿರುವುದಾಗಿ ಫೀನಿಷ್ ಟೆಲಿವಿಷನ್ ವರದಿ ಮಾಡಿದೆ. ಸುಮಾರು 100 ಮಂದಿಯನ್ನು ಪಾರು ಮಾಡಲಾಗಿದೆ. ನೌಕೆಯಲ್ಲಿ 186 ಚಾಲಕ ಸಿಬ್ಬಂದಿ ಮತ್ತು 776 ಪ್ರಯಾಣಿಕರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.