ಚುನಾವಣೆ ಸುಧಾರಣೆ ಮಸೂದೆಗಳು ಹಿಂದಕ್ಕೆ
ನವದೆಹಲಿ, ಜೂನ್ 14– ತೀವ್ರ ವಿರೋಧ ಮತ್ತು ಗೊಂದಲದ ನಡುವೆ ನಿನ್ನೆ ಮತ್ತು ಇಂದು ಲೋಕಸಭೆಯಲ್ಲಿ ಮಂಡಿಸಿದ ವಿವಾದಿತ ಪ್ರಜಾಪ್ರಾತಿನಿಧ್ಯ (ತಿದ್ದುಪಡಿ) ವಿಧೇಯಕ ಮತ್ತು ಚುನಾವಣೆ ಆಯೋಗದ ಮುಖ್ಯ ಚುನಾವಣಾಧಿಕಾರಿಯ ಸ್ಥಾನಮಾನವನ್ನು ಇತರ ಇಬ್ಬರು ಚುನಾವಣಾಧಿಕಾರಿಗಳ ಮಟ್ಟಕ್ಕೆ ತರಬಯಸಿದ್ದ ಸಂವಿಧಾನದ 83ನೇ ತಿದ್ದುಪಡಿ ವಿಧೇಯಕವನ್ನು ಸರ್ಕಾರ ಪ್ರತಿಪಕ್ಷಗಳ ಬೆಂಬಲವಿಲ್ಲದ ಕಾರಣ ಅನಿವಾರ್ಯವಾಗಿ ಹಿಂತೆಗೆದುಕೊಂಡು ಮುಖಭಂಗಕ್ಕೆ ಒಳಗಾದ ಅಪರೂಪದ ಪ್ರಸಂಗ ಎದುರಿಸಿತು. ಹಾಗಾಗಿ ವಿಶೇಷ ಅಧಿವೇಶನದ ಉದ್ದೇಶ ವಿಫಲವಾಯಿತು.
ದೇವರು ಒಳ್ಳೆ ಬುದ್ಧಿ ಕೊಟ್ಟ: ಶೇಷನ್
ನವದೆಹಲಿ, ಜೂನ್ 14 (ಪಿಟಿಐ)– ‘ದೇವರು ಒಳ್ಳೆ ಬುದ್ಧಿ ಕೊಟ್ಟ’– ಇದು ಸರಕಾರ ಇಂದು ಚುನಾವಣಾ ಸುಧಾರಣೆ ಮಸೂದೆಯನ್ನು ಲೋಕಸಭೆಯಲ್ಲಿ ಕೈಬಿಟ್ಟ ವಿಷಯ ತಿಳಿದಾಗ ಮುಖ್ಯ ಚುನಾವಣಾ ಕಮೀಷನರ್ ಟಿ.ಎನ್. ಶೇಷನ್ ಅವರು ತೆಗೆದ ಉದ್ಗಾರ.
ವಿದ್ಯುತ್ ಯೋಜನೆ ವಿಳಂಬ– ಕೇಂದ್ರ ಕಾರಣ
ಬೆಂಗಳೂರು, ಜೂನ್ 14– ರಾಜ್ಯದ ಹಲವಾರು ವಿದ್ಯುತ್ ಯೋಜನೆಗಳು ಕಾರ್ಯರೂಪಕ್ಕೆ ಬಾರದೆ ತಡವಾಗಿರುವುದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದು ಉಪ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಇಂದು ಇಲ್ಲಿ ನೇರವಾಗಿ ಆರೋಪಿಸಿದರು. ರಾಜ್ಯದಲ್ಲಿ ವಿದ್ಯುತ್ ಯೋಜನೆಗಳು ಅನುಷ್ಠಾನಗೊಳ್ಳದೆ ತಡವಾಗಿರುವ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪವಾಗಿರುವ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಅವರು, ಕೇಂದ್ರ ಸರ್ಕಾರ ಈ ಅಪವಾದ ಹೊರಬೇಕಾಗಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.