ADVERTISEMENT

ಮಂಗಳವಾರ, 9–8–1994

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 20:00 IST
Last Updated 8 ಆಗಸ್ಟ್ 2019, 20:00 IST

ಬಂದರು ಆಧುನೀಕರಣಕ್ಕೆ ರೂ. 98 ಕೋಟಿ

ನವದೆಹಲಿ, ಆ. 8– ಕರ್ನಾಟಕದ ನವಮಂಗಳೂರು ಬಂದರು ಸೇರಿದಂತೆ ದೇಶದ ಒಟ್ಟು 11 ಬಂದರುಗಳನ್ನು ಆಧುನೀಕರಿಸಿ ಮತ್ತಷ್ಟು ಅಭಿವೃದ್ಧಿಪಡಿಸಲಾಗುವುದು ಎಂದು ಭೂ ಸಾರಿಗೆ ಸಚಿವ ಜಗದೀಶ್ ಟೈಟ್ಲರ್ ಲೋಕಸಭೆಗೆ ಲಿಖಿತ ಉತ್ತರದ ಮೂಲಕ ತಿಳಿಸಿದ್ದಾರೆ.

ಎಂಟನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ ದೇಶದ ಎಲ್ಲ ಪ್ರಮುಖ ಬಂದರುಗಳ ಆಧುನೀಕರಣವನ್ನು ಸುಮಾರು ರೂ. 2,984 ಕೋಟಿ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ. ಇದರಲ್ಲಿ ನವಮಂಗಳೂರು ಬಂದರು ಆಧುನೀಕರಣಕ್ಕೆ ರೂ. 98 ಕೋಟಿ ಖರ್ಚು ಮಾಡಲಾಗುತ್ತಿದೆ ಎಂದು ಕೇರಳದ ಎನ್. ಡೆನ್ನಿಸ್ ಮತ್ತು ಮುಲ್ಲಹಳ್ಳಿ ರಾಮಚಂದ್ರನ್‌ ಅವರಿಗೆ ಉತ್ತರ ನೀಡಿದ್ದಾರೆ.

ADVERTISEMENT

ಗ್ಯಾಟ್‌ನ ಗರಿಷ್ಠ ಲಾಭಕ್ಕೆ ವಿಳಂಬ: ಆಕ್ಷೇಪ

ಬೆಂಗಳೂರು, ಆ. 8– ‘ಗ್ಯಾಟ್ ಒಪ್ಪಂದದಿಂದ ಭಾರತಕ್ಕೆ ಒಳಿತು ಕೆಡುಕು ಎರಡೂ ಇವೆ. ಆದರೆ ದೇಶದ ಒಟ್ಟಾರೆ ಆರ್ಥಿಕ ಪ್ರಗತಿಯ ದೃಷ್ಟಿಯಿಂದ ಹಾಗೂ ಗ್ಯಾಟ್‌ನ ಸಂಸ್ಥಾಪಕ ಸದಸ್ಯ ರಾಷ್ಟ್ರವಾಗಿ ಭಾರತ ಅದರಿಂದ ದೂರ ಉಳಿವ ಪ್ರಶ್ನೆಯೇ ಉದ್ಭವಿಸದು’ ಎಂದು ಅರ್ಥಶಾಸ್ತ್ರಜ್ಞ ಡಾ. ಡಿ.ಎಂ. ನಂಜುಂಡಪ್ಪ ಇಂದು ಇಲ್ಲಿ ಅಭಿಪ್ರಾಯಪಟ್ಟರು.

‘ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಅದರಿಂದ ಗರಿಷ್ಠ ಲಾಭ ಪಡೆಯಲು ಅಗತ್ಯವಾದ ವೇಗದಲ್ಲಿ ಕೆಲಸ ಸಾಗುತ್ತಿಲ್ಲ. ಅದಕ್ಕೆ ತಕ್ಕ ಮೂಲಭೂತಸೌಲಭ್ಯಗಳನ್ನು ಸೃಷ್ಟಿಸುವತ್ತಲೂ ಕೇಂದ್ರ ಸರ್ಕಾರ ಇನ್ನೂ ಗಮನ ಕೊಟ್ಟಂತಿಲ್ಲ’ ಎಂದು ರಾಜ್ಯ ಯೋಜನಾ ಮಂಡಲಿಯ ಉಪಾಧ್ಯಕ್ಷರಾದ ಅವರು ಹೇಳಿದರು.

ಮುರುಘರಾಜೇಂದ್ರ ಶ್ರೀಗಳ ಅಂತ್ಯಕ್ರಿಯೆ

ಚಿತ್ರದುರ್ಗ, ಆ. 8– ಇಲ್ಲಿನ ಬೃಹನ್ಮಠದ ಹಿರಿಯ ಜಗದ್ಗುರು ಶ್ರೀ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮಿಗಳ ಅಂತಿಮ ಸಂಸ್ಕಾರವನ್ನು ಹೊಳಲ್ಕೆರೆ ಸಮೀಪದ ಒಂಟಿ ಕಂಬದ ಮಠದಲ್ಲಿ ಇಂದು ಸಂಜೆ ಸರ್ಕಾರದ ಸಕಲ ಮರ್ಯಾದೆಗಳೊಂದಿಗೆ ನೆರವೇರಿಸಲಾಯಿತು. ಬೆಂಗಳೂರಿನಿಂದ ಆಗಮಿಸಿದ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ಸ್ವಾಮೀಜಿಯವರ ಅಂತಿಮ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.