ಮೀಸಲು ಪ್ರಮಾಣ ಶೇ 73ಕ್ಕೆ; ಇಂದು ಸದನ ಅಂಗೀಕಾರ ಸಂಭವ
ಬೆಂಗಳೂರು, ಸೆ. 19– ಪರಿಶಿಷ್ಟ ಜಾತಿ, ಪರಿಶಿಷ್ಟ ಬುಡಕಟ್ಟು , ಹಿಂದುಳಿದ ವರ್ಗಗಳಿಗೆ ಶೈಕ್ಷಣಿಕ ಹಾಗೂ ಉದ್ಯೋಗ ದಲ್ಲಿ ಶೇ 80ರಷ್ಟು ಮೀಸಲು ಸೌಲಭ್ಯ ಕಲ್ಪಿಸಿ ವಿಧಾನಸಭೆಯಲ್ಲಿ ಮಂಡಿಸಿದ್ದ ಮಸೂದೆಗೆ ತಿದ್ದುಪಡಿ ತಂದು ಮೀಸಲು ಪ್ರಮಾಣವನ್ನು ಶೇ 73ಕ್ಕೆ ಇಳಿಸಲಾಗಿದೆ.
ಪ್ರಮುಖ ವಿರೋಧ ಪಕ್ಷವಾದ ಜನತಾದಳ, ಭಾರತೀಯ ಜನತಾ ಪಕ್ಷದ ಬಹಿಷ್ಕಾರ, ಮೀಸಲು ಕುರಿತ ಸರ್ಕಾರದ ನೀತಿ ನಿಲುವು ಪ್ರತಿಭಟಿಸಿ ಕರ್ನಾಟಕ ಕಾಂಗ್ರೆಸ್ ಪಕ್ಷದ ಸದಸ್ಯರ ಸಭಾತ್ಯಾಗದ ನಡುವೆ ಇಂದು ನಡೆದ ವಿಶೇಷ ಅಧಿ ವೇಶನದಲ್ಲಿ ಮೀಸಲು ಪ್ರಮಾಣ ಇಳಿಸಿ, ಮಸೂದೆಗೆ ತಂದಿರುವ ತಿದ್ದುಪಡಿ ಪ್ರತಿಗಳನ್ನು ಸದಸ್ಯರಿಗೆ ವಿತರಿಸಲಾಯಿತು.
ತಾಂತ್ರಿಕ, ವೈದ್ಯ ವಿ.ವಿ ವಿಧೇಯಕ: ಮೇಲ್ಮನೆ ಅಸ್ತು
ಬೆಂಗಳೂರು, ಸೆ. 19– ವಿರೋಧಿ ಸದಸ್ಯರ ಅನುಪಸ್ಥಿತಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ರಾಜೀವಗಾಂಧಿ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯ ವಿಧೇಯಕಗಳಿಗೆ ವಿಧಾನ ಪರಿಷತ್ ಇಂದು ಅಂಗೀಕಾರ ನೀಡಿತು.
ಉನ್ನತ ಶಿಕ್ಷಣ ಸಚಿವ ಎಸ್.ಎಂ. ಯಾಹ್ಯಾ ಅವರು ತಾಂತ್ರಿಕ ವಿಶ್ವವಿದ್ಯಾಲಯ ಮಸೂದೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಬಿ. ಶಿವಣ್ಣ ಅವರು ವೈದ್ಯಕೀಯ ವಿಶ್ವವಿದ್ಯಾಲಯ ಮಸೂದೆಯನ್ನು ಮಂಡಿಸಿದರು. ವಿಧೇಯಕಗಳನ್ನು ಡಿ.ಬಿ. ಕಲ್ಮಣಕರ್ ಧ್ವನಿಮತಕ್ಕೆ ಹಾಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.