ಗಡಿ– ಮಾತುಕತೆ ಮೂಲಕಇತ್ಯರ್ಥಕ್ಕೆ ಸಲಹೆ
ನವದೆಹಲಿ, ಮೇ 17– ಮಹಾರಾಷ್ಟ್ರ ಮತ್ತು ಕರ್ನಾಟಕವು ತಮ್ಮ ಗಡಿ ವಿವಾದವನ್ನು ಪರಸ್ಪರ ಮಾತುಕತೆಯಿಂದ ಬಗೆಹರಿಸಿಕೊಳ್ಳಬೇಕೆಂಬುದು ಕೇಂದ್ರ ಸರ್ಕಾರದ ಅಭಿಪ್ರಾಯವಾಗಿದೆ. ಹಾಗೆ ಅವು ಮಾಡಿದರೆ ಅಗತ್ಯ ಸಹಾಯವನ್ನು ಕೇಂದ್ರ ನೀಡಲಿರುವುದಾಗಿ ಗೃಹ ಖಾತೆ ರಾಜ್ಯ ಸಚಿವ ಪಿ.ಎಂ.ಸಯೀದ್ ಇಂದು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದರು.
ಕಳೆದ 35 ವರ್ಷಗಳಿಂದ ಇತ್ಯರ್ಥವಾಗದೆ ಉಳಿದಿರುವ ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ವಿವಾದವನ್ನು ಬಗೆಹರಿಸಲು ಗಡಿ ಪ್ರದೇಶಗಳಲ್ಲಿ ಜನಮತಗಣನೆ ನಡೆಸಬೇಕೆಂದು ಮಹಾರಾಷ್ಟ್ರ ಸರ್ಕಾರದಿಂದ ಏನಾದರೂ ಮನವಿ ಬಂದಿದೆಯೇ ಎಂಬ, ಮಹಾರಾಷ್ಟ್ರದ ಡಾ. ಬಾಪು ಕಾಲ್ತಾತೆ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಿದ ಭಿನ್ನರ ಚಟುವಟಿಕೆ
ನವದೆಹಲಿ, ಮೇ 17– ಹಲವಾರು ಬಾರಿ ಒಡಕನ್ನು ಎದುರಿಸಿರುವ, 110 ವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ಮತ್ತೆ ಒಡೆಯುವ ಹಾದಿ ಹಿಡಿದಿದೆ. ಉಚ್ಚಾಟಿತ ಕಾಂಗ್ರೆಸ್ ನಾಯಕ ಅರ್ಜುನ್ ಸಿಂಗ್ ಅವರ ನೇತೃತ್ವದ ಭಿನ್ನಮತೀಯರ ಗುಂಪು ಮುಂದಿನ ಶುಕ್ರವಾರ ಇಲ್ಲಿ ನಡೆಸಲಿರುವ ರಾಷ್ಟ್ರಮಟ್ಟದ ‘ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ’ದಿಂದ ಮತ್ತೊಂದು ಕಾಂಗ್ರೆಸ್ ಆಗುವ ಸಂಭವ ಸ್ಪಷ್ಟವಾಗಿ ಕಾಣುತ್ತಿದೆ.
ಈ ಸಮಾವೇಶದಲ್ಲಿ ‘ತಮ್ಮದೇ ನಿಜವಾದ ಕಾಂಗ್ರೆಸ್’ ಎಂದು ಘೋಷಣೆ ಮಾಡಲಿರುವುದಾಗಿ ಕೆಲವು ಭಿನ್ನಮತೀಯ ನಾಯಕರು ಹೇಳಿಕೊಳ್ಳುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.