ಕೆಎಂಸಿಗೆ ಸ್ವಾಯತ್ತತೆ: ಕೊನೆಗೂ ಸರ್ಕಾರದ ಅಸ್ತು
ಹುಬ್ಬಳ್ಳಿ, ಜೂನ್ 22– ಕರ್ನಾಟಕ ವೈದ್ಯಕೀಯ ಕಾಲೇಜಿಗೆ (ಕೆಎಂಸಿ) ಬೆಂಗಳೂರಿನ ಕಿದ್ವಾಯಿ, ಜಯದೇವ ಹೃದ್ರೋಗ ಆಸ್ಪತ್ರೆಗಳ ಮಾದರಿಯಲ್ಲಿ ಸ್ವಾಯತ್ತತೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ವಿಚಾರದಲ್ಲಿ ಇದ್ದ ಗೊಂದಲಕ್ಕೆ ತೆರೆ ಎಳೆದಿದೆ.
ಕೆಎಂಸಿ ಕಿರಿಯ ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ನಗರಕ್ಕೆ ಭೇಟಿ ನೀಡಿದ್ದ ವೈದ್ಯಕೀಯ ಶಿಕ್ಷಣ ರಾಜ್ಯ ಸಚಿವ ಎ.ಬಿ.ಪಾಟೀಲ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಎಲ್ಲೆಡೆ ಕನ್ನಡದ ಉತ್ಸವ: ಮರುಳಯ್ಯ
ಬೆಂಗಳೂರು, ಜೂನ್ 22– ‘ಕನ್ನಡ ರಾಜರಾಜೇಶ್ವರಿಯ ರಥ ಎಳೆಯಲು ಸಿದ್ಧನಾಗಿ ಬಂದಿದ್ದೇನೆ. ಈ ಕಾರ್ಯದಲ್ಲಿ ಎಲ್ಲರ ನೆರವು– ಸಹಕಾರ ಪಡೆದು ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವಂತೆ ಹಾಗೂ ನಾಡಿನ ಮೂಲೆಮೂಲೆಗಳಲ್ಲಿ ಕನ್ನಡದ ಉತ್ಸವಗಳು ಜರುಗುವಂತೆ ಪ್ರಯತ್ನಿಸುತ್ತೇನೆ’.
ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ 19ನೇ ಅಧ್ಯಕ್ಷರಾಗಿ ಇಂದು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಡಾ. ಸಾ.ಶಿ.ಮರುಳಯ್ಯ ಅವರು ಮಾಡಿದ ಘೋಷಣೆ ಇದು. ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಆತ್ಮೀಯ ಸರಳ ಸಮಾರಂಭದಲ್ಲಿ, ಇದುವರೆಗೆ ಅಧ್ಯಕ್ಷರಾಗಿದ್ದ ಗೊ.ರು.ಚನ್ನಬಸಪ್ಪ ಅವರು ನೂತನ ಅಧ್ಯಕ್ಷರಿಗೆ ಪರಿಷತ್ತಿನ ಧ್ವಜ ಮತ್ತು ಪುಷ್ಪಮಾಲೆ ಅರ್ಪಿಸುವುದರ ಮೂಲಕ ಅಧಿಕಾರ ವಹಿಸಿಕೊಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.