ರಾಜ್ಗೆ ಸನ್ಮಾನ – ಪ್ರೀತ್ಯಾದರದ ಮಹಾಪೂರ
ಬೆಂಗಳೂರು, ಜ. 27– ಅಭಿಮಾನಿಗಳ ಮಹಾಪೂರದ ಸಮಕ್ಷಮದಲ್ಲಿ ಮೇರು ನಟ ಡಾ. ರಾಜ್ಕುಮಾರ್ ಅವರಿಗೆ ಬೆಂಗಳೂರು ಮಹಾನಗರ ಪಾಲಿಕೆ ಇಂದು ಇಲ್ಲಿ ‘ಪೌರ ಸನ್ಮಾನ’ ಸಲ್ಲಿಸಿ ಗೌರವಿಸಿತು.
ವಿಧಾನ ಸೌಧದ ಮೆಟ್ಟಿಲುಗಳ ಮೇಲೆ ಸಂಜೆ ನಡೆದ ಸಮಾರಂಭದಲ್ಲಿ, ‘ನಿಮ್ಮ ರಾಜ್’ ಎಂದು ಮಾತು ಆರಂಭಿಸಿದ ರಾಜ್ ‘ಈ ಒಂದು ಆಕಾರಕ್ಕೆ, ಆಕೃತಿಗೆ ಆ ತಾಯಿ ಏನು ಕೊಟ್ಟಿದ್ದಾಳೋ ನನಗೆ ಗೊತ್ತಿಲ್ಲ. ನಮ್ಮ ಇಡೀ ವಂಶವೇ ಪವಿತ್ರವಾಗಿ ಹೋಯಿತು’ ಎಂದರು.
‘ಭಾರೀ ಸಂಖ್ಯೆಯಲ್ಲಿ ನೆರೆದ ಅಭಿಮಾನಿಗಳ ಉಕ್ಕಿಹರಿಯುವ ಪ್ರೀತ್ಯಾದರಕ್ಕೆ ಎಂದಿನಂತೆ ವಿಸ್ಮಿತರಾಗಿದ್ದ ರಾಜ್, ‘ನಿಮ್ಮ ಪ್ರೀತಿಗೆ ಬೆಲೆ ಕಟ್ಟಲು, ಕೃತಜ್ಞತೆಯನ್ನು ಸಲ್ಲಿಸಲು ಶಬ್ದಗಳಿಂದ ಸಾಧ್ಯವಿಲ್ಲ. ಅದನ್ನು ಹೃದಯದಲ್ಲಿ ಇಟ್ಟುಕೊಂಡು ಅನುಭವಿಸುವುದೇ ಸುಖ. ನಿಮ್ಮ ರಾಜ್
ಕುಮಾರನನ್ನು ನೋಡಿ ನೀವು ಆನಂದ ಪಡುತ್ತಿದ್ದೀರಿ, ಅದನ್ನು ನೋಡಿ ನಾನು ಅನುಭವಿಸುತ್ತಿದ್ದೇನೆ ಅಷ್ಟೆ’ ಎಂದರು.
ರಾಜ್ಯಸಭೆ: 35 ಮಂದಿ ಅವಿರೋಧ ಆಯ್ಕೆ
ನವದೆಹಲಿ, ಜ. 27 (ಯುಎನ್ಐ)– ಕೇಂದ್ರದ ಕಾನೂನು ಖಾತೆ ರಾಜ್ಯ ಸಚಿವ ಹನ್ಸರಾಜ್ ಭಾರದ್ವಾಜ್, ಕಾಂಗೈ ಪ್ರಧಾನ ಕಾರ್ಯದರ್ಶಿ ವಿ.ಎನ್. ಗಾಡ್ಗೀಳ್, ಪ್ರಧಾನಿಯವರ ರಾಜಕೀಯ ಸಲಹೆಗಾರ ಜಿತೇಂದ್ರ ಪ್ರಸಾದ್ ಮತ್ತು ಪ್ರಧಾನ ಮಂತ್ರಿಯವರ ಕಚೇರಿಯಲ್ಲಿನ ರಾಜ್ಯ ಸಚಿವ ಭುವನೇಶ್ ಚತುರ್ವೇದಿ ಕ್ರಮವಾಗಿ ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ರಾಜಸ್ಥಾನಗಳಿಂದ ರಾಜ್ಯಸಭೆಗೆ ಇಂದು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.